ಒಡಿಶಾ: ಕೊರೊನಾ ರೋಗಿಗಳ ಅರೆಬೆಂದ ದೇಹ ನಾಯಿಗಳ ಪಾಲು.!
ಬಲಂಗೀರ್, ಮೇ 19: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಗಳ ಅರೆಬೆಂದ ಶವವನ್ನು ನಾಯಿಗಳು ಎಳೆದಾಡಿ ಸೇವಿಸಿದ ಘಟನೆ ಬಿಜಖಾಮನ್ ಶವಸಂಸ್ಕಾರ ಕೇಂದ್ರದಲ್ಲಿ ನಡೆದಿದ್ದು ಈ ಆಘಾತಕಾರಿ ಘಟನೆಯ ಚಿತ್ರವು ವೈರಲ್ ಆಗುತ್ತಿದ್ದಂತೆ ಜನರು ಸಬ್ ಕಲೆಕ್ಟರ್ನನ್ನು ಸಂಪರ್ಕಿಸಿ ಕೂಡಲೇ ಈ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.
ಕೊರೊನಾದಿಂದ ಸಾವನ್ನಪ್ಪಿದ ನಮ್ಮ ರಕ್ತಸಂಬಂಧಿಗಳ ಅರೆ ಬೆಂದ ಶವವನ್ನು ನಾಯಿಗಳು ಎಳೆದಾಡಿ ತಿನ್ನುವ ದೃಶ್ಯವು ಆಘಾತ ಮೂಡಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶವಗಾರದಲ್ಲಿ ಹಲವು ಶವಗಳು ಅರೆಬೆಂದಿದೆ. ಅಂತ್ಯ ಸಂಸ್ಕಾರಕ್ಕೆ ಬೇಕಾದ ಮೂಲ ಸೌಕರ್ಯಗಳ ಕೊರತೆ ಹಾಗೂ ಪುರಸಭೆಯ ಅಧಿಕಾರಿಗಳ ಮೇಲ್ವಿಚಾರಣೆ ನಡೆಸದಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಆಡಳಿತವು ಪ್ರತಿ ಶವದ ಅಂತ್ಯಸಂಸ್ಕಾರಕ್ಕೆ 7,500 ರೂ. ನೀಡುವುದಾಗಿ ಹೇಳಿದೆ. ಆದರೂ ಈ ಸ್ಮಶಾನದಲ್ಲಿ ಅರೆಬೆಂದ ಶವಗಳು ಪತ್ತೆಯಾಗಿದೆ.
ಕೋವಿಡ್ ರೋಗಿಯು ಸತ್ತಾಗ, ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದಿಲ್ಲ ಎಂಬ ಅಂಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಗೌರವಯುತ ಅಂತ್ಯಸಂಸ್ಕಾರ ನಡೆಸಬೇಕೆಂಬುದು ನಮ್ಮ ನಿರೀಕ್ಷೆ ಎಂದು ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಸಂಬಂಧಿ ಸರೋಜ್ ಗುರು ಹೇಳಿದ್ದಾರೆ.
ಇನ್ನು ಮತ್ತೋರ್ವ ವ್ಯಕ್ತಿ ನೀಲಮಣಿ ತ್ರಿಪಾಠಿ ಮಾತನಾಡಿ, ಮೃತದೇಹವನ್ನು ಅರ್ಧ ಸುಟ್ಟಿರುವುದು ಜನರ ಭಾವನೆಗಳನ್ನು ಘಾಸಿಗೊಳಿಸಿದೆ. ಕೊನೆಯ ವಿಧಿಯನ್ನು ಸಂಪ್ರದಾಯದ ಪ್ರಕಾರ ನಡೆಸುವುದಕ್ಕೆ ನಾವು ಮಹತ್ವ ನೀಡುತ್ತೇವೆ ಎಂದು ಹೇಳಿದ್ದಾರೆ.
ಆರೋಪಗಳು ಕೇಳಿ ಬಂದ ಹಿನ್ನೆಲೆ ಬಾಲಂಗೀರ್ ಸಬ್ ಕಲೆಕ್ಟರ್ ಲಂಬೋಧರ್ ಧರುವಾ ಭಾನುವಾರ ಬಿಜಖಾಮನ್ ಶವಾಗಾರಕ್ಕೆ ಭೇಟಿ ನೀಡಿ ಪ್ರದೇಶವನ್ನು ಸ್ವಚ್ಛ ಗೊಳಿಸುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಮಾರ್ಗಸೂಚಿಗಳನ್ನು ಅನುಸರಿಸಿ ಸರಿಯಾಗಿ ದಹನ ಕ್ರಿಯೆ ನಡೆಸಲಾಗುವುದು ಎಂದು ಜನರಿಗೆ ಭರವಸೆ ನೀಡಿದ್ದಾರೆ.