ಯುವ ಜೋಡಿಯ ವಿವಾಹಕ್ಕೆ ಭಾರತ ಸಂವಿಧಾನವೇ ಸಾಕ್ಷಿ
ಭುವನೇಶ್ವರ, ಅಕ್ಟೋಬರ್ 22: ಸರಳ ಮದುವೆಗಳು, ಆದರ್ಶ ಮದುವೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಯುವ ಜೋಡಿ ಇನ್ನೂ ಕೊಂಚ ಭಿನ್ನವಾಗಿ ಹಾಗೂ ಮಾದರಿಯಾಗಿ ತಮ್ಮ ವಿವಾಹಕ್ಕೆ ಸಂವಿಧಾನವನ್ನೇ ಸಾಕ್ಷಿಯಾಗಿಸಿಕೊಂಡಿದೆ.
ಒಡಿಸ್ಸಾದ ಗಂಜಾಂನಲ್ಲಿ ನಿನ್ನೆ ಸರಳ ಹಾಗೂ ಮಾದರಿ ವಿವಾಹವೊಂದು ನಡೆದಿದ್ದು, ಮದುವೆಗೆ ಪಂಚಭೂತಗಳ ಸಾಕ್ಷಿ ಬದಲಿಗೆ ಭಾರತದ ಸಂವಿಧಾನವನ್ನು ಸಾಕ್ಷಿಯಾಗಿಸಿಕೊಂಡಿದ್ದಾರೆ. ಯುವ ಜೋಡಿಯ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಔಷಧ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಬಿಪ್ಲಬ್ ಕುಮಾರ್ ಹಾಗೂ ಆಸ್ಪತ್ರೆಯ ಶುಶ್ರೂಶಕಿ ಅನಿತಾ ಅವರುಗಳು ಹೀಗೆ ಮಾದರಿ ವಿವಾಹವಾಗಿದ್ದಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಇವರು ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ.
ಸಂವಿಧಾನದ ಮೇಲೆ ಪ್ರಮಾಣ ಮಾಡುವುದು ಮಾತ್ರವಲ್ಲದೆ ವಿವಾಹ ಮಹೊತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನೂ ಆಯೋಜಿಸಿದ್ದರು. ಸ್ವತಃ ವಧು-ವರರು ರಕ್ತದಾನ ಮಾಡಿದರು. ಸರಳ ಮದುವೆಗೆ ಬಂದ ಅತಿಥಿಗಳೂ ಕೆಲವರು ರಕ್ತದಾನ ಮಾಡಿದರು, 36 ಯುನಿಟ್ ರಕ್ತ ಸಂಗ್ರಹವಾಯಿತು.