ಕ್ವಾರೆಂಟೈನ್ ನಲ್ಲಿದ್ದ ಕೊರೊನಾವೈರಸ್ ಸೋಂಕಿತರಿಗೆ 2,000 ರೂಪಾಯಿ!
ಭುವನೇಶ್ವರ್, ಜೂನ್.29: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ನಡುವೆ ಮಹಾಮಾರಿ ವಿರುದ್ಧ ಹೋರಾಟಕ್ಕೆ ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರವು ಮಹತ್ವದ ಹೆಜ್ಜೆಯನ್ನು ಇರಿಸಿದೆ.
Recommended Video
ಕೊರೊನಾವೈರಸ್ ಸೋಂಕಿತರು ಕೂಡಾ ಕ್ವಾರೆಂಟೈನ್ ನಲ್ಲಿ ಇರುವುದಕ್ಕೆ ಹಿಂದೂ-ಮುಂದೂ ನೋಡುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತರು ಸಾಂಸ್ಥಿಕ ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿದ ಪ್ರತಿಯೊಬ್ಬರಿಗೂ ಸರ್ಕಾರದ ವತಿಯಿಂದ 2,000 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.
ಒಡಿಶಾದಲ್ಲಿ ಕಳೆದ ಜೂನ್.27ರಂದು 2,55,809 ಜನರ ರಕ್ತ ಹಾಗೂ ಗಂಟಲು ಮಾದರಿಯನ್ನು ಸಂಗ್ರಹಿಸಿದ್ದು ಕೊರೊನಾವೈರಸ್ ಸೋಂಕು ತಪಾಸಣೆಯನ್ನು ನಡೆಸಲಾಗಿದೆ. ರಾಜ್ಯದಲ್ಲಿ ಒಟ್ಟು 6614 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ಈ ಪೈಕಿ 4743 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಒಡಿಶಾದಲ್ಲಿ 1843 ಕೊರೊನಾವೈರಸ್ ಸೋಂಕಿತ ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 21 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಪುರಿ ಜಗನ್ನಾಥ ರಥಯಾತ್ರೆ ಆರಂಭ:700 ಪುರೋಹಿತರಿಗೆ ಕೊವಿಡ್ ಪರೀಕ್ಷೆ
ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿದರೆ 2,000 ರೂಪಾಯಿ
ಒಡಿಶಾದಲ್ಲಿ ಕೊರೊನಾವೈರಸ್ ಸೋಂಕಿತರು ಮತ್ತು ಸೋಂಕಿತ ಲಕ್ಷಣಗಳು ಕಂಡು ಬಂದಿರುವವರನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗುತ್ತದೆ. ಹೀಗೆ ಸಾಂಸ್ಥಿಕ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿದ ಪ್ರತಿಯೊಬ್ಬರಿಗೂ ತಲಾ 2,000 ರೂಪಾಯಿ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸಹಾಯನಿಧಿ ಅಡಿಯಲ್ಲಿ ಈಗಾಗಲೇ 58,48,38,000 ರೂಪಾಯಿ ಹಣವನ್ನು ನೀಡಲಾಗಿದೆ.
ಪ್ರತಿನಿತ್ಯ ಸಾವಿರಾರು ಜನರು ಒಡಿಶಾಗೆ ವಾಪಸ್
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಪ್ರತಿನಿತ್ಯ ಸಾವಿರಾರು ಜನರು ಒಡಿಶಾಗೆ ವಾಪಸ್ ಆಗುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 2048 ಮಂದಿ ಸ್ವರಾಜ್ಯಕ್ಕೆ ಮರಳಿದ್ದು, ಇದುವರೆಗೂ ಹೊರರಾಜ್ಯ ಹಾಗೂ ಹೊರದೇಶಗಳಿಗೆ ತೆರಳಿದ್ದ 5,81,694 ಜನರು ಒಡಿಶಾಕ್ಕೆ ಮರಳಿದ್ದಾರೆ ಎಂದು ಅಂಕಿ-ಅಂಶಗಳನ್ನು ನೀಡಲಾಗಿದೆ.
3 ದಿನ ಪುರಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ಇತ್ತೀಚಿಗಷ್ಟೇ ಪುರಿ ಜಗನ್ನಾಥ ರಥಯಾತ್ರೆಯನ್ನು ಸಂಕ್ಷಿಪ್ತ ರೀತಿಯಲ್ಲಿ ನೆರವೇರಿಸುವುದಕ್ಕೆ ಕೋರ್ಟ್ ಅನುಮತಿ ನೀಡಿದ್ದು ಆಗಿದೆ. ರಥಯಾತ್ರೆ ನಡೆಸಿದ್ದು ಆಗಿದೆ. ಇದರ ಬೆನ್ನಲ್ಲೇ ಬಹುದ್ ಜಾತ್ರೆ ನಡೆಯಲಿರುವ ಹಿನ್ನೆಲೆ ಜೂನ್.30ರ ರಾತ್ರಿ 10 ಗಂಟೆಯಿಂದ ಜುಲೈ.2ರ ರಾತ್ರಿ 10 ಗಂಟೆವರೆಗೂ ನಿಷೇಧಾಜ್ಞೆಯನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಅಗತ್ಯ ಸರಕು-ಸೇವಾ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನ ಮತ್ತು ಸಾರ್ವಜನಿಕ ಸಂಚಾರಕ್ಕೆ ಅವಕಾಶ ಇರಿವುದಿಲ್ಲ ಎಂದು ಸರ್ಕಾರವು ಸ್ಪಷ್ಟಪಡಿಸಿದೆ.
ಕೊರೊನಾ ವಾರಿಯರ್ಸ್ ಪರಿಶ್ರಮವನ್ನು ಹೊಗಳಿದ ಸಿಎಂ
ಒಡಿಶಾದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಪ್ರಾಮಾಣಿಕವಾಗಿ ಕರ್ತವ್ಯದ ಬದ್ಧತೆಯನ್ನು ತೋರುತ್ತಿರುವ ಕೊರೊನಾವಾರಿಯರ್ಸ್ ಅವರ ತ್ಯಾಗಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಒಗ್ಗಟ್ಟಿನ ಹೋರಾಟದಿಂದ ಮಹಾಮಾರಿಯನ್ನು ಹೋಗಲಾಡಿಸಲು ಸಾಧ್ಯ ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬರು ಸ್ವಯಂಶಿಸ್ತು ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆ ಮೂಲಕ ಕೊರೊನಾವೈರಸ್ ನಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.