Jagannath Yatra 2022: ಎರಡು ವರ್ಷಗಳ ನಂತರ ನಡೆಯುತ್ತಿದೆ ಪುರಿ ಜಗನ್ನಾಥ ರಥಯಾತ್ರೆ
ಪುರಿ, ಜುಲೈ 1: ಎರಡು ವರ್ಷಗಳ ವಿರಾಮದ ನಂತರ, ಭಗವಾನ್ ಬಲಭದ್ರ, ದೇವಿ ಸುಭದ್ರ ಮತ್ತು ಜಗನ್ನಾಥ ದೇವರ ಒಂಬತ್ತು ದಿನಗಳ ರಥಯಾತ್ರೆ ಶುಕ್ರವಾರ ಪೂರ್ಣ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಪ್ರಾರಂಭವಾಗಲಿದೆ.
ಭಾರತದ ಪುರಾಣದಲ್ಲಿ ಮಹತ್ವ ಪಡೆದಿರುವ, ರಥಯಾತ್ರೆಯಿಂದಲೇ ಪ್ರಖ್ಯಾತಿ ಪಡೆದಿರುವ ಪುರಿ ಜಗನ್ನಾಥನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ.
ಭಗವಾನ್ ಜಗನ್ನಾಥನ ಬಹು ನಿರೀಕ್ಷಿತ ರಥಯಾತ್ರೆಯಲ್ಲಿ ಭಾಗವಹಿಸಲು ದೇಶಾದ್ಯಂತದ ಭಕ್ತರು ಒರಿಸ್ಸಾದ ಪುರಿಗೆ ಸೇರಲು ಪ್ರಾರಂಭಿಸಿದ್ದಾರೆ. 12 ನೇ ಶತಮಾನದಲ್ಲಿ ನಿರ್ಮಿಸಲಾದ ದೇಗುಲದ ಮುಂಭಾಗದಲ್ಲಿ, ಮೂರು ಅಲಂಕೃತ ರಥಗಳು ತಮ್ಮ ಜಗನ್ನಾಥನನ್ನು ಹೊತ್ತು ಚಲಿಸಲು ಕಾಯುತ್ತಿವೆ.
ಒಂಬತ್ತು ದಿನಗಳ ವಾರ್ಷಿಕ ರಥಯಾತ್ರೆ ಎರಡು ವರ್ಷಗಳ ನಂತರ ಸಂಪೂರ್ಣ ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯಲಿರುವುದರಿಂದ ರಾಜ್ಯಾದ್ಯಂತ ಭಕ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.
ಈಚಲು ಮರದಲ್ಲಿ ಮೂಡಿದ ಗಣಪ, ಜನರಿಂದ ಪೂಜೆ, ಪುನಸ್ಕಾರ ಆರಂಭ!
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, 2020 ಮತ್ತು 2021 ರಲ್ಲಿ ಪುರಿ ಜಗನ್ನಾಥ ರಥೋತ್ಸವ ಸಮಯದಲ್ಲಿ ಭಕ್ತರಿಗೆ ಪವಿತ್ರ ಪಟ್ಟಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಎರಡು ವರ್ಷಗಳ ನಂತರ ಉತ್ಸವದಲ್ಲಿ ಭಾಗವಹಿಸಲು ಜನರಿಗೆ ಅವಕಾಶ ನೀಡಿರುವುದರಿಂದ ರಥ ಯಾತ್ರೆಯಲ್ಲಿ ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಪುರಿ ಅಭಿವೃದ್ಧಿ ಆಯುಕ್ತ ಪಿ.ಕೆ.ಜೆನಾ ತಿಳಿಸಿದ್ದಾರೆ.
ವಿದೇಶಿಯರೂ ಜಾತ್ರೆಯಲ್ಲಿ ಭಾಗಿ
ಜಗನ್ನಾಥ ದೇಗುಲಕ್ಕೆ ಪ್ರವೇಶವನ್ನು ಅನುಮತಿಸದ ಇತರ ಧರ್ಮದವರೂ, ವಿದೇಶಿಯರೂ ಸಹ ದೇವರ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಪುರಿ ಜಗನ್ನಾಥ ದೇವಾಲಯಕ್ಕೆ ಹಿಂದೂ ಧರ್ಮಿಯರನ್ನು ಹೊರತು ಪಡಿಸಿ ಇತರೆ ಧರ್ಮ, ವಿದೇಶಿಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಆದ್ದರಿಂದ ರಥೋತ್ಸವದ ವೇಳೆ ಜಗನ್ನಾಥನ ದರ್ಶನ ಪಡೆಯಲು ವಿದೇಶಿಯರೂ ಕೂಡ ಆಗಮಿಸುತ್ತಾರೆ.
ಈ ದೊಡ್ಡ ಕಾರ್ಯಕ್ರಮಕ್ಕಾಗಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜಗನ್ನಾಥನಿಗಾಗಿ ರಥದ ಸಿದ್ಧತೆ
ಮೂರು ರಥಗಳನ್ನು ಗುರುವಾರ ರಥ ನಿರ್ಮಾಣದ ಅಂಗಳದಿಂದ ಸಿಂಹದ್ವಾರದ ಮುಂಭಾಗದ ಸ್ಥಳದಲ್ಲಿ ನಿಲ್ಲಿಸಲಾಯಿತು. ಭಗವಂತನ ಅನುಮತಿಯೊಂದಿಗೆ ಅಂದರೆ 'ಅಗ್ನ್ಯಾ ಮಾಲಾ ಬಿಜೆ' ಎಂಬ ನಿರ್ದಿಷ್ಟ ಆಚರಣೆಯನ್ನು ಅನುಸರಿಸಿ ರಥಗಳನ್ನು ನಿಲ್ಲಿಸಲಾಯಿತು.
ಗುರುವಾರ ದೇವಸ್ಥಾನದ ಬಳಿ ಡಮ್ಮಿ ರಥಗಳನ್ನು ಎಳೆಯುವ ಸಂದರ್ಭದಲ್ಲಿ ಭಕ್ತರಲ್ಲಿ ಧಾರ್ಮಿಕ ಉತ್ಸಾಹವು ತುಂಬಿತ್ತು. 'ಜೈ ಜಗನ್ನಾಥ' ಎಂಬ ಘೋಷಣೆಯೊಂದಿಗೆ ಭಕ್ತರ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಸಂಜೆ 4 ಗಂಟೆಗೆ ಆರಂಭವಾಗುವ ರಥೋತ್ಸವ
ಜಗನ್ನಾಥ ದೇವಸ್ಥಾನದ ಆಡಳಿತ (ಎಸ್ಜೆಟಿಎ) ನಿಗದಿಪಡಿಸಿದ ವೇಳಾಪಟ್ಟಿಯ ಪ್ರಕಾರ, ಜುಲೈ 1 ರಂದು ಬೆಳಿಗ್ಗೆ 9:30 ಕ್ಕೆ ವಿಧ್ಯುಕ್ತ ಮೆರವಣಿಗೆಯಲ್ಲಿ ದೇವತೆಗಳನ್ನು ರಥಗಳಿಗೆ ತರಲಾಗುತ್ತದೆ.
ಮೆರವಣಿಗೆ ಚಟುವಟಿಕೆಗಳು ಮಧ್ಯಾಹ್ನ 12:30 ಕ್ಕೆ ಪೂರ್ಣಗೊಂಡ ನಂತರ, ಪುರಿ ಗಜಪತಿ ಮಹಾರಾಜ ದಿಬ್ಯಸಿಂಗ ದೇಬ್ ಅವರು ಸಾಂಪ್ರದಾಯಿಕ 'ಛೇರಾ ಪಹ್ನ್ರಾ' (ಮೂರು ರಥಗಳ ಗುಡಿಸುವಿಕೆ) ಅನ್ನು ಮಧ್ಯಾಹ್ನ 2.30 ರಿಂದ 3:30 ರ ನಡುವೆ ನಿರ್ವಹಿಸುತ್ತಾರೆ. ಸಂಜೆ 4 ಗಂಟೆಗೆ ರಥೋತ್ಸವ ಆರಂಭವಾಗಲಿದೆ.
ಭದ್ರತೆಗಾಗಿ ಸಿಬ್ಬಂದಿ ನಿಯೋಜನೆ
ಪುರಿ ಮತ್ತು ಸುತ್ತಮುತ್ತ, ವಿವಿಧ ಶ್ರೇಣಿಯ 1,000 ಅಧಿಕಾರಿಗಳು ಸೇರಿದಂತೆ 180 ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜಾತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 50 ಸಿಸಿಟಿವಿ ಕ್ಯಾಮೆರಾಗಳನ್ನು ಗ್ರ್ಯಾಂಡ್ ರಸ್ತೆ ಮತ್ತು ಪುರಿಯ ಇತರ ಭಾಗಗಳಲ್ಲಿ ಅಳವಡಿಸಲಾಗಿದೆ.
ಎಲ್ಲ ದೇವತಾ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಸಮರ್ಥ ವರ್ಮಾ ಗುರುವಾರ ತಿಳಿಸಿದ್ದಾರೆ.
ಒಡಿಶಾ ಅಗ್ನಿಶಾಮಕ ಸೇವೆಯ ವಾಹನಗಳನ್ನು ಸಹ ನಿಯೋಜಿಸಲಾಗಿದೆ.
ರಥ ಯಾತ್ರೆಗಾಗಿ, ಟಾಟಾ ಪವರ್ ಸೆಂಟ್ರಲ್ ಒಡಿಶಾ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಜವಾಬ್ದಾರಿ ವಹಿಸಿಕೊಂಡಿದೆ. ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಹಲವು ಕ್ರಮ ತೆಗೆದುಕೊಂಡಿದೆ.