ಭೋಪಾಲ್: ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ: ಜಲಫಿರಂಗಿಗಳ ಬಳಕೆ
ಭೋಪಾಲ್ ಮೇ 12: ಹೆಚ್ಚುತ್ತಿರುವ ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗ, ಪರೀಕ್ಷೆಗಳಲ್ಲಿನ ಅಕ್ರಮಗಳು, ಬುಡಕಟ್ಟು ಜನಾಂಗದವರ ಮೇಲಿನ ದೌರ್ಜನ್ಯ ಇತ್ಯಾದಿಗಳ ಕುರಿತು ಮಧ್ಯಪ್ರದೇಶ ಕಾಂಗ್ರೆಸ್ನ ಯುವ ಘಟಕ ಗುರುವಾರ ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ಮುಖಂಡರು ಮುಖ್ಯ ಚೌಕದಿಂದ ಸಿಎಂ ಮನೆ ಕಡೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಆದರೆ ಪೊಲೀಸರು ಮಾರ್ಗಮಧ್ಯೆ ಬ್ಯಾರಿಕೇಡ್ಗಳನ್ನು ಹಾಕುವ ಮೂಲಕ ಅವರನ್ನು ರೆಡ್ಕ್ರಾಸ್ ಆಸ್ಪತ್ರೆ ಚೌಕದಲ್ಲಿ ತಡೆಹಿಡಿಯಲಾಯಿತು. ಇದರಿಂದ ಪೊಲೀಸರೊಂದಿಗೆ ವಾಗ್ವಾದ ನಡೆದು ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳ ಬಳಕೆ ಮಾಡಲಾಯಿತು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಹಿಮ್ಮೆಟ್ಟಿಸಿದರು. ಈ ವೇಳೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಹಾಗೂ ಇತರ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
— Shubham Gupta (@shubhjournalist) May 12, 2022
ಪ್ರತಿಭಟನೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್, ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್, ಪಿಸಿಸಿ ಮಾಜಿ ಮುಖ್ಯಸ್ಥ ಸುರೇಶ್ ಪಚೌರಿ, ಅರುಣ್ ಯಾದವ್, ಮಾಜಿ ಪ್ರತಿಪಕ್ಷ ನಾಯಕ ಅಜಯ್ ಸಿಂಗ್, ಮಾಜಿ ಸಚಿವ ಸಜ್ಜನ್ ವರ್ಮಾ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರು ಪಾಲ್ಗೊಂಡಿದ್ದರು.
ಮಧ್ಯಪ್ರದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಗ್ಯಾಲಿಯರ್ನಲ್ಲಿ ಜವಾನ, ಚಾಲಕ ಮತ್ತು ಕಾವಲುಗಾರರ 15 ಹುದ್ದೆಗಳಿಗೆ ಕಳೆದ ವರ್ಷ 11 ಸಾವಿರ ಮಂದಿ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಿದ್ದರು. ಇದು ಅಲ್ಲಿನ ನಿರುದ್ಯೋಗ ತಾಂಡವಾಡುತ್ತಿರುತ್ತಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದಿಂದ ಬೇರೆ ರಾಜ್ಯಗಳಿಗೆ ಉದ್ಯೋಗ ಹರಸಿ ಯುವಕರು ಸಾವಿರಾರು ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಮಾತ್ರವಲ್ಲದೆ ಉದ್ಯೋಗಕ್ಕಾಗಿ ಹತ್ತನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೂ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಎಂಬಿಎ ಹಾಗೂ ಸಿವಿಲ್ ಜಡ್ಜ್ ಆಕಾಂಕ್ಷಿಗಳು ಕೂಡ ಅರ್ಜಿಸಲ್ಲಿಸುತ್ತಿರುವುದು ಕಂಡು ಬಂದಿದೆ.
ಇನ್ನೂ ದೇಶದಾದ್ಯಂತ ಭಾರೀ ಕೋಲಾಹಲ ಎಬ್ಬಿಸಿದ್ದ ಮಧ್ಯಪ್ರದೇಶದ ವ್ಯಾಪಂ(ವ್ಯವಸಾಯಿಕ್ ಪರೀಕ್ಷಾ ಮಂಡಳಿ) ಹಗರಣ ಇನ್ನೂ ಇತ್ಯಾರ್ಥಕ್ಕೆ ಬಂದಿಲ್ಲ. ಇಂತೆಲ್ಲಾ ವಿಷಯಗಳ ವಿರುದ್ಧ ಇಂದು ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಿದೆ.