ರೈತರ ಪ್ರತಿಭಟನೆ ಕುರಿತು ಸರ್ಕಾರಕ್ಕೆ ರಾಮ್ ದೇವ್ ಸಲಹೆ
ಭೋಪಾಲ್, ಡಿಸೆಂಬರ್ 25: "ಕೇಂದ್ರ ಸರ್ಕಾರ ದೆಹಲಿಯಲ್ಲಿನ ರೈತರ ಪ್ರತಿಭಟನೆ ಕೊನೆಗೊಳಿಸಲು ಸೌಹಾರ್ದಯುತ ದಾರಿ ಕಂಡುಕೊಳ್ಳಬೇಕಾದ ಅವಶ್ಯಕತೆಯಿದೆ" ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿರುವ ಹೋರಾಟ ಶುಕ್ರವಾರ 30ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಆರಂಭವಾಗಿ ತಿಂಗಳು ಕಳೆಯುತ್ತಿದ್ದರೂ ಬಿಕ್ಕಟ್ಟಿಗೆ ಅಂತ್ಯ ಸಿಕ್ಕಿಲ್ಲ. ಈ ಕುರಿತು ಉತ್ತರ ಪ್ರದೇಶದ ಸಹರನ್ಪುರದಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, "ಈ ಸುದೀರ್ಘ ಪ್ರತಿಭಟನೆ ದೇಶಕ್ಕೆ ಒಳಿತಾಗುವಂಥದ್ದಲ್ಲ" ಎಂದು ಹೇಳಿದ್ದಾರೆ.
ಕೊರೊನಿಲ್'ನಿಂದ 3 ದಿನದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ: ಪತಂಜಲಿ
ರೈತರು ಕೈಗೊಂಡಿರುವ ಈ ಪ್ರತಿಭಟನೆ ಅತಿ ಸೂಕ್ಷ್ಮ ವಿಚಾರವಾಗಿದೆ. ಇದು ಇನ್ನಷ್ಟು ಮುಂದುವರೆಯಬಾರದು. ಕೃಷಿ ಕ್ಷೇತ್ರದ ಬೆಳವಣಿಗೆಯೊಂದಿಗೆ ರೈತರ ಗೌರವವನ್ನೂ ಕಾಪಾಡುವಂತೆ ಸರ್ಕಾರ, ರೈತರು ಎರಡೂ ಕಡೆಯಿಂದ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಸರ್ಕಾರವೂ ರೈತರ ಉತ್ಪಾದನೆ ಹಾಗೂ ಬೆಳೆಗಳ ಬೆಲೆ ಹೆಚ್ಚಿಸುವ ಕುರಿತು ಚಿಂತಿಸಬೇಕಿದೆ ಎಂದಿದ್ದಾರೆ.
ಗುರುವಾರವಷ್ಟೆ, ಕೃಷಿ ಕಾಯ್ದೆಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಮತ್ತೊಮ್ಮೆ ರೈತರಿಗೆ ಪತ್ರ ಬರೆದಿದೆ. ಸರ್ಕಾರ ಕಾಯ್ದೆಗಳ ತಿದ್ದುಪಡಿ ಮಾಡುವ ಪ್ರಸ್ತಾವವಿಟ್ಟಿದ್ದರೆ, ರೈತರು ಕಾಯ್ದೆ ರದ್ದತಿಗೆ ಒತ್ತಾಯಿಸುತ್ತಿದ್ದಾರೆ. ಈ ಬೆಳವಣಿಗೆಯ ನಡುವೆ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಅಡಿಯಲ್ಲಿ ಶುಕ್ರವಾರ ಏಳನೇ ಕಂತಿನ ಹಣ ಬಿಡುಗಡೆಯಾಗಲಿದ್ದು, 9 ಕೋಟಿ ರೈತರ ಖಾತೆಗೆ 18000 ಕೋಟಿ ರೂಪಾಯಿಗಳನ್ನು ಕಳುಹಿಸಲಾಗುತ್ತದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ 6 ರಾಜ್ಯಗಳ ನೂರಾರು ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.