ಬಿಜೆಪಿಗೆ 'ಬಿಎಸ್ಪಿ' ಸಾಥ್: ಮಧ್ಯಪ್ರದೇಶದ ಕಮಲ್ ನಾಥ್ ಸರಕಾರ ಪತನ ಸನ್ನಿಹಿತ?
ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದ ಕಾಂಗ್ರೆಸ್ಸಿಗೆ ಸಂಜೀವಿನಿಯಾಗಿ ಬಂದಿದ್ದು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದ ಅಸೆಂಬ್ಲಿ ಚುನಾವಣಾ ಫಲಿತಾಂಶ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಮೆಟ್ಟಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು.
ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಸೀಟಿನ ಅಂತರ ಸಾಕಷ್ಟಿದ್ದರೂ, ಮಧ್ಯಪ್ರದೇಶದ ಕಥೆ ಹಾಗಲ್ಲ. ಒಂದು ರೀತಿಯಲ್ಲಿ ಕರ್ನಾಟಕದಲ್ಲಿ ಹೇಗಿದೆಯೋ ಹಾಗೆಯೇ ಅಲ್ಲಿ. ಕಮಲ್ ನಾಥ್ ಸರಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲೇ ಕುದುರೆ ವ್ಯಾಪಾರದ ಬಗ್ಗೆ ಗುಸುಗುಸು ಸುದ್ದಿ ಹರಿದಾಡಲಾರಂಭಿಸಿತ್ತು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ
ಆದರೆ, ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ, ಆಪರೇಶನ್ ಕಮಲದಿಂದ ಕೆಟ್ಟ ಹೆಸರು ಬರಬಹುದು ಎನ್ನುವ ಕಾರಣಕ್ಕಾಗಿ, ಬಿಜೆಪಿ ಈ ಸಾಹಸಕ್ಕೆ ಕೈಹಾಕಿರಲಿಲ್ಲ. ಈಗ, ಚುನಾವಣೋತ್ತರ ಸಮೀಕ್ಷೆ ಹೊರಬೀಳುತ್ತಿದ್ದಂತೆಯೇ, ಮತ್ತೆ ಭೋಪಾಲ್ ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
'ನೋ ಪ್ರಾಬ್ಲಮ್' , ಬಹುಮತ ಸಾಬೀತುಪಡಿಸಲು ಸಿದ್ಧ: ಕಮಲನಾಥ್
ದೇಶದ ಹಿಂದಿ ಬೆಲ್ಟಿನ ಹೃದಯ ಭಾಗವಾಗಿರುವ ಮಧ್ಯಪ್ರದೇಶದಲ್ಲಿ, ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ಪರ ಮತದಾರ ಹೆಚ್ಚು ಒಲವು ತೋರುತ್ತಿರುವುದನ್ನೇ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಕಮಲ್ ನಾಥ್ ಅವರಿಗೆ ಬಹುಮತ ಸಾಬೀತು ಮಾಡಿಸಲು ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದೆ. ಇಲ್ಲಿ, ಮಾಯಾವತಿ ಗೇಂ ಪ್ಲಾನ್ ಕಾಂಗ್ರೆಸ್ ಅನ್ನು ಚಿಂತೆಗೀಡುಮಾಡಿದೆ.
ಸ್ವಲ್ಪ ಆಕಡೆ ಈಕಡೆಯಾದರೂ, ಸರಕಾರದ ಸ್ಥಿತಿ ಅಯೋಮಯ
ಒಟ್ಟು 230 ಸದಸ್ಯ ಬಲದ ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಬಿಎಸ್ಪಿ- ಎಸ್ಪಿ 3 ಮತ್ತು ಪಕ್ಷೇತರರು 4ಸ್ಥಾನದಲ್ಲಿ ಗೆದ್ದಿದ್ದರು. ಸರಳ ಬಹುಮತಕ್ಕೆ ಬೇಕಾಗಿರುವ ಸಂಖ್ಯೆ 116. ಅಂದು ಚುನಾವಣೆ ಮುಗಿದು ಬಹುಮತ ಸಾಬೀತು ಪಡಿಸುವ ವೇಳೆ, ಮಾಯಾವತಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದರು. ಅಲ್ಲಿ, ಸ್ವಲ್ಪ ಆಕಡೆ ಈಕಡೆಯಾದರೂ, ಸರಕಾರದ ಸ್ಥಿತಿ ಅಯೋಮಯವಾಗಲಿದೆ.
ಗುಣಾ ಕ್ಷೇತ್ರದಲ್ಲಿ ಕೈಕೊಟ್ಟ ಬಿಎಸ್ಪಿ ಅಭ್ಯರ್ಥಿ
ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಗುಣಾ ಕ್ಷೇತ್ರದಿಂದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಲ್ಲಿಂದ, ತನ್ನ ಅಭ್ಯರ್ಥಿಯನ್ನೂ ಮಾಯಾವತಿ ಹಾಕಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಬಿಎಸ್ಪಿ ಅಭ್ಯರ್ಥಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರು. ಇದು ಮಾಯಾವತಿ ಸಿಟ್ಟಿಗೆ ಕಾರಣವಾಗಿತ್ತು.
ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾದೀತು
ತನ್ನ ಅಭ್ಯರ್ಥಿ ಲೋಕೇಂದ್ರ ಸಿಂಗ್ ಪಕ್ಷ ತೊರೆದದ್ದು ಕಾಂಗ್ರೆಸ್ - ಬಿಎಸ್ಪಿ ನಡುವಿನ ವಾಕ್ಸಮರಕ್ಕೂ ಕಾರಣವಾಗಿತ್ತು. 'ನಿಮ್ಮ ಈ ರಾಜಕೀಯ ಕೃತ್ಯಕ್ಕಾಗಿ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾದೀತು' ಎಂದು ಮಾಯಾವತಿ ಕಾಂಗ್ರೆಸ್ಸಿಗೆ ಎಚ್ಚರಿಕೆಯನ್ನು ನೀಡಿದ್ದರು. ಮೂಲಗಳ, ಪ್ರಕಾರ ಮಾಯಾ ಈಗ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.
ಬಿಎಸ್ಪಿ ಜೊತೆಗಿನ ಮಾತುಕತೆಯ ನಂತರವಷ್ಟೇ ಬಿಜೆಪಿ ಈ ಕೆಲಸಕ್ಕೆ ಮುಂದಾಗಿರುವುದು
ಈಗ, ಬಿಎಸ್ಪಿ ತನ್ನಿಬ್ಬರು ಶಾಸಕರು, ಜೊತೆಗೆ ಎಸ್ಪಿ ಶಾಸಕರ ಬೆಂಬಲವನ್ನು ಹಿಂದಕ್ಕೆ ಪಡೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ. ಇದೇ ಕಾರಣಕ್ಕಾಗಿ, ಬಿಜೆಪಿ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರಿಗೆ ಆಗ್ರಹಿಸಿದ್ದು. ಮೂಲಗಳ, ಪ್ರಕಾರ, ತೆರೆಯ ಹಿಂದೆ ಬಿಎಸ್ಪಿ ಜೊತೆಗಿನ ಮಾತುಕತೆಯ ನಂತರವಷ್ಟೇ ಬಿಜೆಪಿ ಈ ಕೆಲಸಕ್ಕೆ ಮುಂದಾಗಿರುವುದು.
ಕಾಂಗ್ರೆಸ್ ಸರಕಾರದ ಪರಿಸ್ಥಿತಿ ಡೋಲಾಯಮಾನವಾಗಿದೆ
ಬಿಎಸ್ಪಿ ಶಾಸಕರ ಬೆಂಬಲದ ನಂತರವೂ ಬಿಜೆಪಿಗೆ ಸಂಖ್ಯಾಬಲದ ಕೊರತೆ ಕಾಡಲಿದೆ. ನಾಲ್ಕು ಜನ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆದು, ಜೊತೆಗೆ ಆಪರೇಶನ್ ಕಮಲಕ್ಕೆ ಬಿಜೆಪಿ ಕೈಹಾಕುವ ಸಾಧ್ಯತೆ ದಟ್ಟವಾಗಿದೆ. ಕಮಲ್ ನಾಥ್, ಬಹುಮತ ಸಾಬೀತು ಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದರೂ, ಕಾಂಗ್ರೆಸ್ ಸರಕಾರದ ಪರಿಸ್ಥಿತಿ ಡೋಲಾಯಮಾನವಾಗಿದೆ.