"ಶೂದ್ರರನ್ನು ಶೂದ್ರರು ಎಂದು ಕರೆದರೆ ಬೇಸರಪಟ್ಟುಕೊಳ್ಳುತ್ತಾರೆ ಏಕೆ?"
ಭೋಪಾಲ್, ಡಿಸೆಂಬರ್ 14: ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಇದೀಗ ಮತ್ತೊಂದು ಅಂಥದ್ದೇ ಹೇಳಿಕೆ ನೀಡಿದ್ದಾರೆ.
"ಶೂದ್ರರಿಗೆ ಶೂದ್ರ ಎಂದರೆ ಅವರಿಗೆ ಬೇಸರವಾಗುವುದು ಏಕೆ? ಸಾಮಾಜಿಕ ವ್ಯವಸ್ಥೆ ಕುರಿತ ಅಜ್ಞಾನದಿಂದ ಅವರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಸೆಹೋರ್ ನಲ್ಲಿ ನಡೆದ ಕ್ಷತ್ರಿಯ ಮಹಾಸಭಾದಲ್ಲಿ ಮಾತನಾಡಿದ ಅವರು, "ನಮ್ಮ ಸಾಮಾಜಿಕ ವ್ಯವಸ್ಥೆಯು ಧರ್ಮಶಾಸ್ತ್ರದ ಪ್ರಕಾರ ನಾಲ್ಕು ಭಾಗವಾಗಿ ವಿಂಗಡನೆಯಾಗಿದೆ. ಅದರನ್ನು ಶೂದ್ರರು ಅರ್ಥ ಮಾಡಿಕೊಂಡಿಲ್ಲ" ಎಂದಿದ್ದಾರೆ.
ವಿದೇಶಿ ಮಹಿಳೆಗೆ ಜನಿಸಿದವರು ದೇಶಭಕ್ತರಾಗಲು ಸಾಧ್ಯವೇ? ರಾಹುಲ್ ವಿರುದ್ದ ವಾಗ್ದಾಳಿ
ಕ್ಷತ್ರಿಯರನ್ನು ಕ್ಷತ್ರಿಯರು ಎಂದು ಕರೆದರೆ ಅವರಿಗೆ ಬೇಸರವಾಗುವುದಿಲ್ಲ. ಬ್ರಾಹ್ಮಣರನ್ನು ಬ್ರಾಹ್ಮಣರು ಎಂದು ಕರೆದರೆ ಅವರಿಗೆ ಬೇಸರವಾಗುವುದಿಲ್ಲ. ವೈಶ್ಯರನ್ನು ವೈಶ್ಯರನ್ನು ವೈಶ್ಯರು ಎಂದರೆ ಬೇಸರ ಮಾಡಿಕೊಳ್ಳುವುದಿಲ್ಲ. ಆದರೆ ಶೂದ್ರರನ್ನು ಶೂದ್ರರು ಎಂದರೆ ಬೇಸರ ಮಾಡಿಕೊಳ್ಳುತ್ತಾರೆ. ಏಕೆ ಹೀಗೆ? ಅಜ್ಞಾನದಿಂದ ಅವರಿಗೆ ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಈ ನಡುವೆ ಇನ್ನೊಂದು ಟೀಕೆಯನ್ನೂ ಮಾಡಿರುವ ಅವರು, "ಯಾರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಯೋ ಅವರಿಗೆ ಜನಸಂಖ್ಯೆ ನಿಯಂತ್ರಣ ಕಾನೂನು ಅನ್ವಯವಾಗುತ್ತದೆ. ದೇಶಕ್ಕಾಗಿ ಇರುವವರಿಗೆ ಅಲ್ಲ" ಎಂದು ಹೇಳಿದ್ದಾರೆ.
ಮೀಸಲಾತಿ ಎಂಬುದು ವ್ಯಕ್ತಿಯ ಆರ್ಥಿಕ ಹಿನ್ನೆಲೆಯ ಮೇಲೆ ಅವಲಂಬಿತವಾಗಿ ಬಡವರಿಗೆ ನೆರವಾಗುವಂತಿರಬೇಕೇ ಹೊರತು ಜಾತಿ ಮೇಲೆ ಅಲ್ಲ ಎಂದರು. ಇದೇ ಸಂದರ್ಭ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಇಂದಿನ ಕ್ಷತ್ರಿಯರು ತಮ್ಮ ಜವಾಬ್ದಾರಿ, ಕರ್ತವ್ಯಗಳ ಕುರಿತು ಅರಿತುಕೊಳ್ಳಬೇಕು. ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಅವರನ್ನು ಸಶಸ್ತ್ರ ಪಡೆಗೆ ಸೇರಿಸಬೇಕು. ದೇಶದ ಭದ್ರತೆಯನ್ನು ಬಲಪಡಿಸಬೇಕು" ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತೂ ಪ್ರತಿಕ್ರಿಯಿಸಿ, "ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ದೇಶದ್ರೋಹಿಗಳು. ಅವರು ರೈತರಲ್ಲ, ಕಾಗ್ರೆಸ್ಸಿಗರು, ಎಡಪಂಥೀಯರು. ದೇಶದ ವಿರುದ್ಧ ಈ ರೀತಿ ದನಿ ಎತ್ತುತ್ತಿದ್ದಾರೆ. ಸುಳ್ಳು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷತ್ರಿಯ ಮಹಾಸಭಾದ ಸಂಸ್ಥಾಪನಾ ದಿನದ ಕಾರ್ಯಕ್ರಮ ಇದೆಂದು ತಿಳಿದುಬಂದಿದ್ದು, ಠಾಕೂರ್ ಬೆಂಬಲಿಗರೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಇಂಥದ್ದೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಗ್ಯಾ ಸಿಂಗ್ ಎರಡು ಬಾರಿ ಕ್ಷಮೆ ಕೇಳಿದ್ದರು. 26/11ರ ದಾಳಿಯಲ್ಲಿ ಮೃತಪಟ್ಟ ಮಹಾರಾಷ್ಟ್ರದ ಹೇಮಂತ್ ಕರ್ಕರೆ ಮೇಲೆ ಟೀಕೆ ಮಾಡಿ ಕ್ಷಮೆ ಕೇಳಿದ್ದರು. 2019ರಲ್ಲಿ ಮಹಾತ್ಮ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೊಗಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ನಂತರ ಕ್ಷಮೆ ಕೇಳಿದ್ದರು.