Viral Photo: ಪತ್ರಕರ್ತರನ್ನು ಅರೆಬೆತ್ತಲೆಯಾಗಿ ನಿಲ್ಲಿಸಿದ್ದು ಏಕೆ ಪೊಲೀಸರು!?
ಭೋಪಾಲ್, ಏಪ್ರಿಲ್ 7: ಮಧ್ಯಪ್ರದೇಶದಲ್ಲಿ ಪೊಲೀಸರು ಪತ್ರಕರ್ತರನ್ನು ಬಂಧಿಸಿ ಅವರನ್ನು ಅರೆಬೆತ್ತಲೆಯಾಗಿ ನಿಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಹೇಳಿಕೆಯಂದಿಗೆ ಫೋಟೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಏಪ್ರಿಲ್ 2ರಂದು ಈ ಘಟನೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಎಂಟು ಮಂದಿ ಪತ್ರಕರ್ತರನ್ನು ಬಂಧಿಸಿರುವ ಪೊಲೀಸರು ಅವರನ್ನು ಅರೆಬೆತ್ತಲೆಯಾಗಿ ನಿಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ.
ಹೋಳಿ ಡ್ಯಾನ್ಸು, ಎಣ್ಣೆ ಏಟು: ಯುವಕರ ಜೀವ ತೆಗೆಯಿತು ಅದೊಂದು ಚಾಕು
ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಮತ್ತು ಅವರ ಪುತ್ರ ಗುರುದತ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ರಂಗಭೂಮಿ ಕಲಾವಿದ ನೀರಜ್ ಕುಂದರ್ ಬಂಧನದ ಬಗ್ಗೆ ವರದಿ ಮಾಡಲು ಹೋಗಿದ್ದೆ ಎಂದು ಸ್ಥಳೀಯ ಪತ್ರಕರ್ತ ಮತ್ತು ಯೂಟ್ಯೂಬರ್ ಕನಿಷ್ಕ್ ತಿವಾರಿ ತಿಳಿಸಿದ್ದಾರೆ.
ಪೊಲೀಸರ ವಿರುದ್ಧ ಕನಿಷ್ಕ ತಿವಾರಿ ಆರೋಪ:
"ಅವರ ಬಂಧನದ ಬಗ್ಗೆ ವಿಚಾರಿಸಲು ನಾವು ಕೊತ್ವಾಲಿ ಪೊಲೀಸ್ ಠಾಣೆಗೆ ಹೋಗಿದ್ದೆವು. ಆದರೆ ಪೊಲೀಸರು ನಮ್ಮನ್ನು ಬಂಧಿಸಿದರು ಮತ್ತು ಸುಮಾರು 18 ಗಂಟೆಗಳ ಕಾಲ ಲಾಕ್ಅಪ್ನಲ್ಲಿ ಇರಿಸಿದರು. ನಮ್ಮನ್ನು ಥಳಿಸಲಾಯಿತು, ನಿಂದಿಸಲಾಯಿತು ಮತ್ತು ನಮ್ಮ ಬಟ್ಟೆಗಳನ್ನು ತೆಗೆಯುವಂತೆ ಕೇಳಲಾಯಿತು," ಎಂದು ಕನಿಷ್ಕ ತಿವಾರಿ ಹೇಳಿದರು.
ಮಧ್ಯಪ್ರದೇಶ ಸಿಧಿ ಜಿಲ್ಲೆಯ ಇಂದ್ರಾವತಿ ನಾಟ್ಯ ಸಮಿತಿಯ ನಿರ್ದೇಶಕರಾದ ನೀರಜ್ ಕುಂದರ್, ವಿಂಧ್ಯ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ವರದಿಗಳ ಪ್ರಕಾರ, ಕುಂದರ್ ಅನುರಾಗ್ ಮಿಶ್ರಾ ಹೆಸರಿನಲ್ಲಿ ನಕಲಿ ಫೇಸ್ಬುಕ್ ಐಡಿಯನ್ನು ತೆರೆಯಲಾಗಿದ್ದು, ಆತನ ಬಂಧನದ ನಂತರ ಕುಂದರ್ ಪೋಷಕರು ಮತ್ತು ತಿವಾರಿ ಸೇರಿದಂತೆ ಅನೇಕರು ಪೊಲೀಸ್ ಠಾಣೆಗೆ ಹೋಗಿದ್ದರು.
ಕಲಾವಿದ ನರೇಂದ್ರ ಬಹದ್ದೂರ್ ಸಿಂಗ್ ಸ್ಪಷ್ಟನೆ:
ನೀರಜ್ ಕುಂದರ್ ಅವರನ್ನು ಬೆಂಬಲಿಸಿ ಪೊಲೀಸ್ ಠಾಣೆಗೆ ತೆರಳಿದ ಮತ್ತೊಬ್ಬ ರಂಗಭೂಮಿ ಕಲಾವಿದ ನರೇಂದ್ರ ಬಹದ್ದೂರ್ ಸಿಂಗ್, ತಮ್ಮೆಲ್ಲರನ್ನು ಥಳಿಸಲಾಯಿತು ಮತ್ತು ವಿವಸ್ತ್ರಗೊಳಿಸಲಾಗಿತ್ತು ಎಂದು ಆರೋಪಿಸಲಾಗಿದೆ. "ನಾವು ಲಿಖಿತ ದಾಖಲೆಯನ್ನು ನೀಡಲು ಹೋಗಿದ್ದೆವು, ಆದರೆ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿದರು. ಪತ್ರಕರ್ತ ಕನಿಷ್ಕ್ ತಿವಾರಿ ಅವರನ್ನೂ ಥಳಿಸಲಾಗಿತ್ತು. ಏಕೆಂದರೆ ಅವರು, ಸ್ಥಳೀಯ ಪೊಲೀಸರು ಮತ್ತು ಶಾಸಕ ಕೇದಾರನಾಥ್ ಶುಕ್ಲಾ ಹಗರಣಗಳನ್ನು ಬಹಿರಂಗಪಡಿಸಿದ್ದು, ಕೆಂಗಣ್ಣಿಗೆ ಗುರಿಯಾಗಿದ್ದರು," ಎಂದು ನರೇಂದ್ರ ಬಹದ್ದೂರ್ ಸಿಂಗ್ ಹೇಳಿದ್ದಾರೆ.
ಪೊಲೀಸರು ಹೇಳುವುದೇನು?:
ಪೊಲೀಸರು ಬಂಧಿಸಿದವರಲ್ಲಿ ಯಾವುದೇ ಪತ್ರಕರ್ತರು ಇರಲಿಲ್ಲ. ಪೊಲೀಸರು ವಶಕ್ಕೆ ಪಡೆದವರೆಲ್ಲರೂ ದುಷ್ಕರ್ಮಿಗಳೇ ಆಗಿದ್ದರು ಎಂದು ಮಧ್ಯಪ್ರದೇಶ ಸಿಧಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಮುಖೇಶ್ ಕುಮಾರ್ ಶ್ರೀವಾಸ್ತವ ಸ್ಪಷ್ಟನೆ ನೀಡಿದ್ದಾರೆ.
"ಕಳೆದ ಏಪ್ರಿಲ್ 2ರಂದು ಈ ಘಟನೆ ಸಂಭವಿಸಿದೆ, ಕನಿಷ್ಕ್ ತಿವಾರಿ ಮತ್ತು ಇತರ ಕೆಲವು ಜನರು ಕೊತ್ವಾಲಿ ಪೊಲೀಸ್ ಠಾಣೆಗೆ ಹೋಗಿದ್ದರು. ಒಬ್ಬ ರಂಗಭೂಮಿ ಕಲಾವಿದ ನೀರಜ್ ಕುಂದರ್ ಅವರ ಬಂಧನದ ಬಗ್ಗೆ ಗಲಾಟೆ ಸೃಷ್ಟಿಸಿದರು. ಕನಿಷ್ಕ್ ಮತ್ತು ಇತರರನ್ನು ನಿಯಂತ್ರಿಸುವುದಕ್ಕಾಗಿ ಸೆರೆ ಹಿಡಿಯಲಾಗಿದ್ದು, ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಬಂಧನದಲ್ಲಿ ಇರಿಸಲಾಯಿತು. ಅವರನ್ನು ಏಪ್ರಿಲ್ 3 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು," ಎಂದು ತಿಳಿಸಿದರು.
ಕನಿಷ್ಕ್ ಮತ್ತು ಇತರರನ್ನು ಅರೆಬೆತ್ತಲೆಯಾಗಿ ತೋರಿಸುವ ವೈರಲ್ ಫೋಟೋ ಕುರಿತು ಕೇಳಿದಾಗ, ಎಸ್ಪಿ ಶ್ರೀವಾಸ್ತವ್, "ಅವರಲ್ಲಿ ಯಾರೂ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವ ಅನಗತ್ಯ ಪ್ರಯತ್ನಗಳನ್ನು ಮಾಡಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಈ ವಿಧಾನವನ್ನು ಬಳಸಲಾಗಿತ್ತು. ಇದರ ಮಧ್ಯೆ ಫೋಟೋದ ಕುರಿತು ನನ್ನ ಗಮನಕ್ಕೂ ಬಂದಿದೆ. ನಾನು ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಫೋಟೋ ಕ್ಲಿಕ್ಕಿಸಿ ಹಂಚಿರುವವರನ್ನು ಶೀಘ್ರ ಪತ್ತೆ ಹಚ್ಚಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಕನಿಷ್ಕ ತಿವಾರಿ ಹೇಳುವುದೇನು?:
"ನಾನೊಬ್ಬ ಪತ್ರಕರ್ತ. ರಾಜಕಾರಣಿಗಳ ಬಗ್ಗೆ ವಿಶೇಷವಾಗಿ ಶಾಸಕ ಕೇದಾರನಾಥ್ ಶುಕ್ಲಾ ಮತ್ತು ಇಲ್ಲಿನ ಪೊಲೀಸ್ ಇಲಾಖೆ ಬಗ್ಗೆ ನಾನು ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ನನ್ನ ಯೂಟ್ಯೂಬ್ ಚಾನೆಲ್ mpsandeshnews24 170K ಚಂದಾದಾರರನ್ನು ಹೊಂದಿದೆ. ನನ್ನ ವಿಮರ್ಶಾತ್ಮಕ ಪತ್ರಿಕೋದ್ಯಮಕ್ಕಾಗಿ ನಾನು ಗುರಿಯಾಗಿದ್ದೇನೆ," ಎಂದು ಕನಿಷ್ಕ ತಿವಾರಿ ಹೇಳಿದ್ದಾರೆ.