ವಂದೇ ಮಾತರಂ ರದ್ದು : ಶವಪೆಟ್ಟಿಗೆಗೆ ಕಾಂಗ್ರೆಸ್ ಹೊಡೆದುಕೊಂಡ ಕೊನೆಯ ಮೊಳೆ?
ಭೋಪಾಲ್, ಜನವರಿ 02 : ಏನೇ ಆಗಲಿ ಜನವರಿ 7ರಂದು ಭಾರತೀಯ ಜನತಾ ಪಕ್ಷದ 109 ವಿಧಾನಸಭಾ ಸದಸ್ಯರೆಲ್ಲ ಭೋಪಾಲ್ ನಲ್ಲಿರುವ ಸೆಕ್ರೆಟೇರಿಯೇಟ್ ನಲ್ಲಿ ಒಕ್ಕೊರಲಿನಿಂದ 'ವಂದೇ ಮಾತರಂ' ಗೀತೆ ಹಾಡುತ್ತೇವೆ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದಿದ್ದಾರೆ.
ತಿಂಗಳಿನ ಒಂದು ದಿನ ಮಾತ್ರ ವಂದೇ ಮಾತರಂ ಗೀತೆ ಹಾಡುವುದು ರಾಷ್ಟ್ರಭಕ್ತಿಯ ಸಂಕೇತವಲ್ಲ ಎಂದಿರುವ ಮಧ್ಯ ಪ್ರದೇಶದ ಕಾಂಗ್ರೆಸ್ ಸರಕಾರ, ಕಚೇರಿಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸಿದೆ.
ಮಧ್ಯಪ್ರದೇಶದಲ್ಲಿ ವರ್ಷದ ಮೊದಲ ದಿನ 'ವಂದೇ ಮಾತರಂ' ವಿವಾದ
ಭೋಪಾಲ್ ನಲ್ಲಿರುವ ಸೆಕ್ರೆಟೇರಿಯೇಟ್ ನಲ್ಲಿ ಪ್ರತಿ ತಿಂಗಳ ಮೊದಲ ದಿನದಂದು ವಂದೇ ಮಾತರಂ ಹಾಡುವುದನ್ನು, ಕಳೆದ ಹದಿನೈದು ವರ್ಷಗಳಿಂದ ಅಧಿಕಾರದಲ್ಲಿದ್ದ ಹಿಂದಿನ ಭಾರತೀಯ ಜನತಾ ಪಕ್ಷದ ಸರಕಾರ ಕಡ್ಡಾಯ ಮಾಡಿತ್ತು. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಆದೇಶವನ್ನು ಕಾಂಗ್ರೆಸ್ ರದ್ದು ಮಾಡಿದೆ.
ಇದು ಭಾರತೀಯ ಜನತಾ ಪಕ್ಷದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿರುವುದು ಮಾತ್ರವಲ್ಲ, ರಾಜ್ಯಾದ್ಯಂತ ವ್ಯಾಪಕ ಟೀಕೆಗೂ ಕಾರಣವಾಗಿದೆ. 2005ರಿಂದ ತಿಂಗಳ ಮೊದಲ ದಿನದಂದು ನಿರಂತರವಾಗಿ ಹಾಡಿಕೊಂಡು ಬರಲಾಗುತ್ತಿದ್ದ ವಂದೇ ಮಾತರಂ ಗೀತೆಯನ್ನು 2019ರ ಜನವರಿ 1, ಮಂಗಳವಾರ ಹಾಡಲಾಗಿಲ್ಲ. ಕಳೆದ 13 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಈ ಸಂಪ್ರದಾಯವನ್ನು ಮೊದಲ ಬಾರಿ ಮುರಿದಂತಾಗಿದೆ.
ಜಿದ್ದಿಗೆ ಬಿದ್ದು ರದ್ದು ಮಾಡಿದ ಕಾಂಗ್ರೆಸ್
ಪಶ್ಚಿಮ ಬಂಗಾಳದ ಕವಿ ಬಂಕಿಮ್ ಚಂದ್ರ ಚಟರ್ಜಿ ಅವರು ಸ್ವಾತಂತ್ರ್ಯಪೂರ್ವದಲ್ಲಿ ಬರೆದಿದ್ದ ಈ ಗೀತೆಗೆ ಜನಗಣಮನದಷ್ಟೇ ಗೌರವವಿದೆ. ದೇಶಭಕ್ತಿಯ ಸಂಕೇತವಾಗಿ ಈಗಲೂ ಹಲವಾರು ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಪ್ರತಿನಿತ್ಯ ಇದನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಇಂಥ ಗೀತೆಯನ್ನು ಜಿದ್ದಿಗೆ ಬಿದ್ದು ಮಧ್ಯ ಪ್ರದೇಶದ ಕಾಂಗ್ರೆಸ್ ಸರಕಾರ ರದ್ದು ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ರದ್ದುಪಡಿಸಿ ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಸರಕಾರ ಅವಮಾನ ಮಾಡಿದೆ. ಇದು ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಶವ ಪೆಟ್ಟಿಗೆಗೆ ತಾನೇ ಹೊಡೆದುಕೊಂಡ ಕೊನೆಯ ಮೊಳೆ ಎಂದು ಮಯಾಂಕ್ ಎಂಬುವವರು ಬಣ್ಣಿಸಿದ್ದಾರೆ.
ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂ
ವಂದೇ ಮಾತರಂ ಹಾಡುವುದು ಉತ್ಸಾಹದಾಯಕ
ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯಿಂದ ತೇಜಸ್ವಿನಿ ಅನಂತ್ ಕುಮಾರ್ ಅವರ ನೇತೃತ್ವದಲ್ಲಿ 'ಅಖಂಡ ವಂದೇ ಮಾತರಂ' ಗೀತೆ ಹಾಡುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಜನವರಿ 1ರಂದೇ ಆಯೋಜಿಸಲಾಗಿತ್ತು. 'ಅನಂತ ನಮನ' ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಇದರಲ್ಲಿ ರಾಜಕಾರಣಿಗಳು, ಕ್ರಿಕೆಟ್ ಪಟುಗಳು, ಸಮಾಜ ಸೇವಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ನೆರೆದು ವಂದೇ ಮಾತರಂ ಗೀತೆಯನ್ನು ಒಕ್ಕೊರಲಿನಿಂದ ಹಾಡಿದ್ದರು. ಸಾವಿರಾರು ಜನ ಒಟ್ಟಿಗೇ ಸೇರಿ ವಂದೇ ಮಾತರಂ ಹಾಡುವುದು ತುಂಬಾ ಉತ್ಸಾಹದಾಯಕವಾಗಿತ್ತು ಎಂದು ತೇಜಸ್ವಿನಿ ಅನಂತ್ ಕುಮಾರ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅನಂತ ನಮನದಲ್ಲಿ ಸಹಸ್ರಾರು ಕಂಠಗಳಿಂದ ವಂದೇ ಮಾತರಂ ಗಾಯನ
ವಿದ್ರೋಹಿ ಕೃತ್ಯ, ನಾಚಿಕೆಗೇಡಿನ ಸಂಗತಿ
ವಂದೇ ಮಾತರಂ ಹಾಡುವುದನ್ನು ರದ್ದು ಮಾಡುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸೆಕ್ರೆಟೇರಿಯೇಟ್ ಮುಂದೆ ನೆರೆದಿದ್ದು ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರದ್ದು ಮಾಡಿರುವುದು ರಾಷ್ಟ್ರ ವಿದ್ರೋಹಿ ಕೃತ್ಯ ಮಾತ್ರವಲ್ಲ, ನಾಚಿಕೆಗೇಡಿನ ಸಂಗತಿ ಎಂದು ಜೈಕಿಶನ್ ಆಹುಜಾ ಎಂಬುವವರು ಕಮಲ್ ನಾಥ್ ಅವರ ಈ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಮಲ್ ನಾಥ್ ಮತ್ತು ಕಾಂಗ್ರೆಸ್ ದೇಶದ ಮತ್ತು ಮಧ್ಯ ಪ್ರದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಬಿಜೆಪಿ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ.
ರಾಹುಲ್ ಕೂಡ ಅವಮಾನ ಮಾಡಿದ್ದರು
ವಂದೇ ಮಾತರಂಗೆ ಅವಮಾನವಾಗಿರುವುದು ಇದು ಮೊದಲನೇ ಬಾರಿಯೇನಲ್ಲ. ಕಳೆದ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಬಂಟ್ವಾಳದಲ್ಲಿ ಕಾಂಗ್ರೆಸ್ ಸಮಾವೇಶ ಜರುಗಿದ ಸಂದರ್ಭದಲ್ಲಿಯೂ ವಂದೇ ಮಾತರಂ ಅನ್ನು ಮೊಟಕುಗೊಳಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಂದೇ ಮಾತರಂ ಗೀತೆ ಇನ್ನೇನು ಶುರುವಾಗುವ ಹಂತದಲ್ಲಿದ್ದಾಗ, ತಮಗೆ ಹೆಚ್ಚು ಸಮಯವಿಲ್ಲ, ಬೇಗನೆ ಮುಗಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೈಗಡಿಯಾರವನ್ನು ತೋರಿಸಿದ್ದರು. ಅಲ್ಲದೆ, ಹಾಡು ಶುರುವಾದಾಗಲೂ ಅವರು ಕುಳಿತೇ ಇದ್ದರು. ಕಡೆಗೆ ರಾಹುಲ್ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ಕಾಂಗ್ರೆಸ್ ಕಟ್ಟಾಳುಗಳು ವಂದೇ ಮಾತರಂ ಗೀತೆಯನ್ನು ಕೇವಲ 38 ಸೆಕೆಂಡುಗಳಲ್ಲಿ ಹಾಡಿ ಮುಗಿಸಿದ್ದರು. ಆದರೆ, ಈ ಗೀತೆಯನ್ನು ಶ್ರದ್ಧೆಯಿಂದ ಹಾಡಿದರೆ ಕನಿಷ್ಠ 66 ಸೆಕೆಂಡು ತೆಗೆದುಕೊಳ್ಳುತ್ತದೆ.
ವಂದೇ ಮಾತರಂಗೆ ಅವಮಾನ : ರಾಹುಲ್ ಮೇಲೆ ಮುಗಿಬಿದ್ದ ಟ್ವಿಟ್ಟಿಗರು
ನಮಾಜ್ ಮಾಡಲಿ, ಅಲ್ಲಾಹು ಅಕ್ಬರ್ ಮೊಳಗಲಿ
ಇನ್ನು ಮುಂದೆ ಮಧ್ಯ ಪ್ರದೇಶದ ಸೆಕ್ರೆಟೇರಿಯೇಟ್ ನಲ್ಲಿ ತಿಂಗಳ ಮೊದಲ ದಿನ ನಮಾಜ್ ಮಾಡಲು ಅವಕಾಶ ಮಾಡಿಕೊಡಬೇಕು, ಅಲ್ಲಾಹು ಅಕ್ಬರ್ ಮೊಳಗಬೇಕು. ಆಗ ಮಾತ್ರ ನಮ್ಮ ವೋಟ್ ಬ್ಯಾಂಕ್ ಹಿಗ್ಗಲು ಸಾಧ್ಯ ಎಂದು ಹೂಡಾ ಎಂಬುವವರು ವ್ಯಂಗ್ಯವಾಡಿದ್ದಾರೆ. ಹಿಂದೆ ವಂದೆ ಮಾತರಂ ಗೀತೆಗೆ ಆಂಗ್ಲರು ಹೆದರುತ್ತಿದ್ದರು, ಈಗ ಕಾಂಗ್ರೆಸ್ ಪಕ್ಷವೇ ಹೆದರುತ್ತಿದೆ. ವಂದೇ ಮಾತರಂ ಅನ್ನು ರದ್ದುಪಡಿಸುವ ಮೂಲಕ ಯಾವ ವೋಟ್ ಬ್ಯಾಂಕನ್ನು ಗಟ್ಟಿಗೊಳಿಸುವ ಹುನ್ನಾರವಿದೆ? ಜನತೆಗೆ ಎಲ್ಲವೂ ಗೊತ್ತು, ಪಾಠ ಕಲಿಸುವ ದಿನ ದೂರವಿಲ್ಲ ಎಂದು ಗುಜ್ಜರ್ ಎಂಬುವವರು ಎಚ್ಚರಿಕೆ ನೀಡಿದ್ದಾರೆ.