ಕೊಲೆಯತ್ನ ಪ್ರಕರಣದಲ್ಲಿ ಕೇಂದ್ರ ಸಚಿವರ ಮಗನೇ ಪ್ರಮುಖ ಆರೋಪಿ
ಭೋಪಾಲ್ (ಮಧ್ಯಪ್ರದೇಶ), ಜೂನ್ 18: ಕೊಲೆ ಯತ್ನ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರ ಇಪ್ಪತ್ತಾರು ವರ್ಷದ ಮಗನನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಐವರಿಗೆ ಗಾಯಗಳಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗೋಟೆಗಾಂವ್ ಪಟ್ಟಣದಲ್ಲಿ ಸೋಮವಾರ ರಾತ್ರಿ ಗುಂಪೊಂದರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.
ದಾಮೋಹ್ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರೂ ಆದ ಪ್ರಹ್ಲಾದ್ ಪಟೇಲ್ ಅವರ ಮಗ ಪ್ರಬಲ್ ಕೂಡ ಬಂಧಿತರ ಪೈಕಿ ಒಬ್ಬನು. ಕೇಂದ್ರ ಸಚಿವರ ಸೋದರ ಸಂಬಂಧಿ ಮೋನು ಪಟೇಲ್ (ಆತನ ತಂದೆ ಹಾಲಿ ಬಿಜೆಪಿ ಶಾಸಕ) ಕೂಡ ಈ ಪ್ರಕರಣದಲ್ಲಿ ಭಾಗಿ ಆಗಿರುವುದಾಗಿ ಹೆಸರಿದೆ. ಆದರೆ ಬಂಧಿಸಿಲ್ಲ.
ದಿಗ್ವಿಜಯ್ ಸಿಂಗ್ ಸೋಲು: ಆತ್ಮಾಹುತಿಗೆ ಮುಂದಾದ ಸ್ವಾಮೀಜಿ
ಪ್ರಬಲ್ ಪಟೇಲ್, ಮೋನು ಪಟೇಲ್ ಸೇರಿ ಹನ್ನೆರಡಕ್ಕೂ ಹೆಚ್ಚು ಮಂದಿ ಬೈಲ್ ಹಾಯ್ ಬಜಾರ್ ನಲ್ಲಿ ಸೋಮವಾರ ರಾತ್ರಿ ಹನ್ನೊಂದು ಮೂವತ್ತರ ಹೊತ್ತಿಗೆ ದಾಳಿ ನಡೆಸಿದರು. ಆ ವೇಳೆ ಗುಂಡು ಹಾರಿಸಿದ್ದು, ಒಬ್ಬರಿಗೆ ಗಾಯ ಆಯಿತು ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಪ್ರಬಲ್ ಪಟೇಲ್ ಸೇರಿ ಏಳು ಮಂದಿಯನ್ನು ಬಂಧಿಸಿರುವುದಾಗಿ ಎಸ್ಪಿ ಗುರುಕರಣ್ ಸಿಂಗ್ ತಿಳಿಸಿದ್ದಾರೆ. ಮೋನು ಪಟೇಲ್ ನನ್ನು ಬಂಧಿಸಬೇಕಿದೆ. ಇತರ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.
ಗೋಟೆಗಾಂವ್ ನ ಕಿಸ್ಸಾನಿ ಮೊಹಲ್ಲಾದ ನಿವಾಸಿ ಪ್ರಬಲ ಪಟೇಲ್ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕೇಂದ್ರ ಸಚಿವರ ತಮ್ಮ ಜಲಂ ಸಿಂಗ್ ಪಟೇಲ್ ರ ಮಗ ಮೋನು ಪಟೇಲ್. ಜಲಂ ಸಿಂಗ್ ಮಾಜಿ ಸಚಿವರು ಹಾಗೂ ಬಿಜೆಪಿಯಿಂದ ಹಾಲಿ ಶಾಸಕ.
ಆದರೆ, ಈ ಘಟನೆಯಲ್ಲಿ ತನ್ನ ಮಗ ಅಥವಾ ಸೋದರರ ಮಗನ ಪಾತ್ರ ಇಲ್ಲ ಎಂದು ಜಲಂ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಆರೋಪಿಗಳ ಮೇಲೆ ಕೊಲೆ ಯತ್ನ ಸೇರಿದಂತೆ ಇತರ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.