9,000 ರುಪಾಯಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತ
ಭೋಪಾಲ್ (ಮಧ್ಯಪ್ರದೇಶ), ಏಪ್ರಿಲ್ 25: ಮಧ್ಯಪ್ರದೇಶದ ಛಿಂದ್ವಾರದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಮುಖ್ಯಮಂತ್ರಿ ಕಮಲ್ ನಾಥ್ ಅವರು ಪ್ರತಿನಿಧಿಸುವ ಕ್ಷೇತ್ರ. ಮೇಘಸ್ವಿನಿ ಗ್ರಾಮದ ಅಕಡು ಉಯ್ಕೆ ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ ಜಮೀನಿನಲ್ಲಿರುವ ಶೆಡ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಆತನ ಪತ್ನಿ ನೀಡಿರುವ ಮಾಹಿತಿ ಪ್ರಕಾರ, ಮಗಳ ಮದುವೆ ಸಲುವಾಗಿ ಸ್ಥಳೀಯ ಲೇವಾದೇವಿದಾರನ ಬಳಿ ಒಂಬತ್ತು ಸಾವಿರ ಸಾಲವಾಗಿತ್ತು. ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಕುಟುಂಬ ಬೆಳೆ ನಷ್ಟ ಅನುಭವಿಸುತ್ತಿತ್ತು. ಇದರಿಂದ ಅಕಡು ಬಹಳ ಚಿಂತಿತರಾಗಿದ್ದರು.
"ನನಗೆ ಸಾಲ ಏನೂ ಸಮಸ್ಯೆ ಆಗಿರಲಿಲ್ಲ. ನಮಗೆ ಮಗ ಇದ್ದಾನೆ. ಅವನು ಬಹಳ ಬುದ್ಧಿವಂತ. ಚೆನ್ನಾಗಿ ಓದುತ್ತಾನೆ. ಬೇಗ ಸಾಲ ತೀರಿಸಬಹುದು ಅಂತ ನಾವು ಯೋಚಿಸಿದ್ದೆವು. ಸಾಲ ನೀಡಿದವರು ಕೂಡ ಈಗಲೇ ಹಣ ವಾಪಸ್ ಕೊಡಿ ಅಂತೇನೂ ಕೇಳಿರಲಿಲ್ಲಾ" ಎಂದು ಆಕೆ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಿದೆ. ಅದಕ್ಕೂ ಮುನ್ನ ಕೆಲ ವರ್ಷಗಳಲ್ಲಿ ಹಲವು ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. "ನಾವು ಯಾವುದೇ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡಿಲ್ಲ" ಎಂದು ರೈತರ ಮಗ ನರೇಶ್ ಹೇಳಿದ್ದಾನೆ.
ತಂಬಾಕು ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಏಪ್ರಿಲ್ ಇಪ್ಪತ್ತೊಂಬತ್ತರಂದು ಛಿಂದ್ವಾರದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ.