ಬಂಧನದ ವೇಳೆ ತಮಗಾದ ಹಿಂಸೆ ನೆನೆದು ಕುಸಿದುಹೋದ ಸಾಧ್ವಿ ಪ್ರಗ್ಯಾ ಸಿಂಗ್
ಭೋಪಾಲ್ (ಮಧ್ಯಪ್ರದೇಶ), ಏಪ್ರಿಲ್ 18 : "ನನ್ನಿಂದಲೇ ಆ ಸ್ಫೋಟ ಆಗಿದ್ದು ಮತ್ತು ಮುಸ್ಲಿಮರನ್ನು ಕೊಂದೆ ಎಂದು ಹೇಳಿಸಬೇಕು ಅಂದುಕೊಂಡರು. ಹಗಲು- ರಾತ್ರಿ ನನಗೆ ಬಡಿದರು. ಕಾನೂನು ಬಾಹಿರವಾಗಿ ನನ್ನನ್ನು ವಶಕ್ಕೆ ಪಡೆದ ನಂತರ ಬೆಲ್ಟ್ ಗಳಿಂದ ಬಡಿದರು. ನನ್ನು ಬಯ್ದರು. ಬೆತ್ತಲೆ ಮಾಡುವುದಾಗಿ ಬೆದರಿಸಿದರು" ಎಂದು ಸಾಧ್ವಿ ಪ್ರಗ್ಯಾ ಸಿಂಗ್ ಗುರುವಾರ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭೋಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗುರುವಾರ ಮಾತನಾಡುವ ವೇಳೆ ಪ್ರಗ್ಯಾ ಸಿಂಗ್ ಕುಸಿದರು. ಆ ವೇಳೆ ಕಾರ್ಯಕರ್ತರು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗಿದರು. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಆರೋಪಿ ಆಗಿದ್ದರು. ಸೆಪ್ಟೆಂಬರ್ 2008ರಲ್ಲಿ ಮಹಾರಾಷ್ಟ್ರದ ಪಟ್ಟಣದಲ್ಲಿ ಸ್ಫೋಟ ನಡೆದಿತ್ತು. ಏಳು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
#WATCH: Alleging torture by jail officials, Sadhvi Pragya Singh Thakur, BJP Lok Sabha candidate from Bhopal, breaks down while addressing the party workers pic.twitter.com/UVUomvmJZ2
— ANI (@ANI) 18 April 2019
ಭಯೋತ್ಪಾದನಾ ನಿಗ್ರಹ ದಳದಿಂದ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಯಿತು. ಆ ನಂತರ ಪ್ರಕರಣವನ್ನು ಎನ್ ಐಎ ವಹಿಸಿಕೊಂಡಿತ್ತು. ಆ ತನಿಖಾ ಸಂಸ್ಥೆ ಸಾಧ್ವಿಗೆ ಕ್ಲೀನ್ ಚಿಟ್ ನೀಡಿತು. ಆದರೆ ಎನ್ ಐಎ ಕೋರ್ಟ್ ಅರ್ಜಿಯನ್ನು ವಜಾ ಮಾಡಿ, ಆರೋಪ ಪಟ್ಟಿಯನ್ನು ಸಲ್ಲಿಸುವಂತೆ ಆದೇಶ ಮಾಡಿತ್ತು.
ಸದ್ಯಕ್ಕೆ ಜಾಮೀನಿನ ಮೇಲೆ ಸಾಧ್ವಿ ಪ್ರಗ್ಯಾ ಇದ್ದಾರೆ. ಬಂಧನಕ್ಕೂ ಮುನ್ನ ಆಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯೆ ಆಗಿದ್ದರು. ಜತೆಗೆ ಆರೆಸ್ಸೆಸ್ ವಿದ್ಯಾರ್ಥಿ ವಿಭಾಗದ ಸದಸ್ಯೆ ಆಗಿದ್ದರು. ಜತೆಗೆ ವಿಶ್ವ ಹಿಂದೂ ಪರಿಷದ್ ಮಹಿಳಾ ವಿಭಾಗ ದುರ್ಗಾ ವಾಹಿನಿ ಜತೆಗೂ ನಂಟಿತ್ತು.
ಈ ವಾರ ಬಿಜೆಪಿ ಸೇರ್ಪಡೆ ಆಗಿದ್ದ ಸಾಧ್ವಿ, ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆದರು. ಆಕೆ ವಿರುದ್ಧ ಕಾಂಗ್ರೆಸ್ ನಿಂದ ದಿಗ್ವಿಜಯ್ ಸಿಂಗ್ ಇದ್ದಾರೆ. ಕಳೆದ ಮೂವತ್ತು ವರ್ಷದಿಂದ ಈ ಕ್ಷೇತ್ರವು ಬಿಜೆಪಿ ವಶದಲ್ಲಿದೆ.