ಟೈಗರ್ ಅಭಿ ಜಿಂದಾ ಹೈ; ಶಿವರಾಜ್ ಸಿಂಗ್ ಚೌಹಾಣ್ ಪಂಚ್ ಡೈಲಾಗ್
ಭೋಪಾಲ್, ಡಿಸೆಂಬರ್ 20: "ಅವರಿಗೆ ಏನಾಗಿಬಿಡುತ್ತೋ ಎಂದು ಆತಂಕ ಪಡಬೇಡಿ. ನಾನು, ಶಿವರಾಜ್ ಸಿಂಗ್ ಚೌಹಾಣ್, ಇನ್ನೂ ಇಲ್ಲೇ ಇದ್ದೀನಿ. ಟೈಗರ್ ಅಭಿ ಜಿಂದಾ ಹೈ" ಎಂದು ಬಿಜೆಪಿ ಕಾರ್ಯಕರ್ತರಿಗೆ ನಗುನಗುತ್ತಾ ಹೇಳಿದ್ದಾರೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್.
ತಮ್ಮ ಒನ್ ಲೈನರ್ ಪಂಚ್ ಡೈಲಾಗ್ ಗಳಿಗೆ ಹಾಗೂ ಚುರುಕಾದ ಸಂಭಾಷಣೆಗಳಿಗೆ ಚೌಹಾಣ್ ಬಹಳ ಹೆಸರುವಾಸಿ. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ, ತಮ್ಮನ್ನು ಭೇಟಿ ಆಗಲು ಬಂದ ಬಿಜೆಪಿ ಕಾರ್ಯಕರ್ತರ ಬಳಿ ಅವರು ಮಾತನಾಡಿದ್ದು, ನಾನು ಎಲ್ಲೂ ಹೋಗಲ್ಲ ಎಂದು ಹೇಳಿದ್ದಾರೆ.
ಕಮಲ್ ನಾಥ್ ಪ್ರಮಾಣವಚನ: ವ್ಯಾಪಕ ಪ್ರಶಂಸೆಗೊಳಗಾದ ಶಿವರಾಜ್ ಸಿಂಗ್ ನಡೆ
ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಚೌಹಾಣ್ ತೆರವು ಮಾಡಿದ್ದಾರೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಂಗಲೆ ತೆರವು ಮಾಡಿಲ್ಲ. ಕಳೆದ ಹದಿನೈದು ವರ್ಷ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲಿ ಅವರನ್ನು ಮನೆಯ ಹಿರಿಯ ಎಂಬಂತೆ 'ಮಾಮಾಜೀ' ಅಂತಲೇ ಕಾಣಲಾಗುತ್ತದೆ. ಅದರಲ್ಲೂ ಮಹಿಳೆಯರು ಹಾಗೂ ಯುವ ಜನರ ಮಧ್ಯೆ ಚೌಹಾಣ್ ಪ್ರೀತಿಪಾತ್ರರು.
ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿ, ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಿದ್ದರು. ಮುಖದ ಮೇಲೆ ನಗು ಕೂಡ ಮಾಸಿರಲಿಲ್ಲ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.