ಭೋಪಾಲ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ಮೂವರು ರೋಗಿಗಳ ಸಾವು
ಭೋಪಾಲ್, ಡಿಸೆಂಬರ್ 12: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಗಂಟೆಗಳ ಕಾಲ ವಿದ್ಯುತ್ ಇಲ್ಲದೇ ಮೂವರು ರೋಗಿಗಳು ಸಾವನ್ನಪ್ಪಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಹಮಿದಿಯಾ ಆಸ್ಪತ್ರೆಯ ಟ್ರೌಮಾ, ತುರ್ತು ನಿಗಾ ಘಟಕದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ವಿದ್ಯುತ್ ಕಡಿತಗೊಂಡಿದ್ದು, ಏಳು ಗಂಟೆವರೆಗೂ ಬಂದಿರಲಿಲ್ಲ. ಬ್ಯಾಕಪ್ ನಲ್ಲಿ ಬಳಸುತ್ತಿದ್ದ ಪಿಡಬ್ಲುಡಿ ಜನರೇಟರ್ ಕೂಡ ಕಾರ್ಯನಿರ್ವಹಿಸಿಲ್ಲ. ಈ ಸಂದರ್ಭ ಮೂವರು ರೋಗಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಆದರೆ ವಿದ್ಯುತ್ ಕಡಿತದಿಂದ ರೋಗಿಗಳು ಸಾವನ್ನಪ್ಪಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಮೂಲಗಳ ಪ್ರಕಾರ, ಇಬ್ಬರು ರೋಗಿಗಳ ಸ್ಥಿತಿಯು ಗಂಭೀರವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ವೈದ್ಯಕೀಯ ಉಪಕರಣಗಳು ಸ್ಥಗಿತಗೊಂಡಿದ್ದವು. ವೆಂಟಿಲೇಟರ್ ಗಳು ಕೂಡ ಕಾರ್ಯ ನಿರ್ವಹಿಸದೇ ಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ. ಸಾವನ್ನಪ್ಪಿದ ಮೂರು ರೋಗಿಗಳಲ್ಲಿ ಒಬ್ಬರು, ಕಾಂಗ್ರೆಸ್ ನಿಂದ ಗೆದ್ದು ಕೌನ್ಸಿಲರ್ ಆಗಿದ್ದ ಅಕ್ಬರ್ ಖಾನ್ (67) ಎನ್ನಲಾಗಿದೆ. ಹೀಗಾಗಿ ಘಟನೆ ಕುರಿತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. "ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಸರ್ಕಾರ ಈ ಘಟನೆಯ ಹೊಣೆ ಹೊರಬೇಕು" ಎಂದು ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಆರೋಪಿಸಿದ್ದಾರೆ.
12ಕ್ಕೆ ಏರಿದ ನವಜಾತ ಶಿಶುಗಳ ಸಾವು; ತನಿಖೆಗೆ ಸಮಿತಿ ರಚನೆ
ಘಟನೆಗೆ ಸಂಬಂಧಿಸಿದಂತೆ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಪಿಡಬ್ಲುಡಿ ಸಬ್ ಇಂಜಿನಿಯರ್ ನನ್ನು ಅಮಾನತುಗೊಳಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಆಸ್ಪತ್ರೆಯಲ್ಲಿ 390 ಬೆಡ್ ಗಳು, 150 ಐಸಿಯು ಇವೆ. ಅದರಲ್ಲಿ 57 ಹಾಸಿಗೆಗಳಲ್ಲಿ ಕೋವಿಡ್ ರೋಗಿಗಳು ದಾಖಲಾಗಿದ್ದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, "ಇದು ಗಂಭೀರವಾದ ವಿಚಾರ. ವಿದ್ಯುತ್ ಕಡಿತದ ನಂತರ 10 ನಿಮಿಷ ಕೆಲಸ ಮಾಡಿದ ಜನರೇಟರ್ ನಿಂತು ಹೋಗಿದೆ. ಒಂದು ಗಂಟೆಯೊಳಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮುಖ್ಯಮಂತ್ರಿಗಳು ಈ ಕುರಿತು ವರದಿ ಕೇಳಿದ್ದಾರೆ. ವಿದ್ಯುತ್ ಕಡಿತದಿಂದ ಈ ಘಟನೆ ನಡೆದಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತು ತನಿಖೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.