ಹಿಸ್ಟರಿ ರಿಪೀಟ್ : ಕೊನೆಯ ಕ್ಷಣದಲ್ಲಿ ತಂದೆಯಂತೆ ಮಗನಿಗೂ ತಪ್ಪಿತು ಮುಖ್ಯಮಂತ್ರಿ ಗಾದಿ!
ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಸೋಮವಾರ (ಡಿ 17) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿಎಂ ರೇಸ್ ನಲ್ಲಿದ್ದ ಜ್ಯೋತಿರಾದಿತ್ಯ ಸಿಂದಿಯಾ ಮನವೊಲಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಹೈಕಮಾಂಡ್, ಅವರನ್ನು ದೆಹಲಿ ರಾಜಕೀಯಕ್ಕೆ ಹೆಚ್ಚಾಗಿ ಬಳಸುವ ಸಾಧ್ಯತೆಯಿದೆ.
ಉಪಮುಖ್ಯಮಂತ್ರಿ ಹುದ್ದೆ ಕೊಡುವುದಾಗಿ ರಾಹುಲ್ ಗಾಂಧಿ ಆಫರ್ ನೀಡಿದ್ದರೂ ಜ್ಯೋತಿರಾದಿತ್ಯ ಒಲ್ಲೆ ಎಂದಿದ್ದಾರೆ. 'ಮಾಪ್ ಕರೋ ಮಹಾರಾಜ್, ಅಪ್ನೆತೋ ಶಿವರಾಜ್' ಎನ್ನುವ ಬಿಜೆಪಿ ಕಾರ್ಯಕರ್ತರ ಘೋಷಣೆಯಿಂದ, ಜ್ಯೋತಿರಾದಿತ್ಯ ವರಿಷ್ಠರ ಮೇಲೆ ಬೇಸರಿಸಿಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ.
ಹೇಗೆ ಜ್ಯೋತಿರಾದಿತ್ಯಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೋ, ಹಾಗೆಯೇ ದಶಕಗಳ ಹಿಂದೆ, ಅವರ ತಂದೆ ಮಾಧವರಾವ್ ಸಿಂದಿಯಾ ಅವರಿಗೂ ಇದೇ ಪರಿಸ್ಥಿತಿ ಎದುರಾಗಿತ್ತು. ತಂದೆ ಮಗ ಇಬ್ಬರೂ, ಗಾಂಧೀ ಕುಟುಂಬಕ್ಕೆ ನಿಷ್ಟಾವಂತರಾಗಿದ್ದರೂ, ಮುಖ್ಯಮಂತ್ರಿ ಎನ್ನುವ ಪದವಿ ಸಿಂದಿಯಾ ಕುಟುಂಬಕ್ಕೆ ಅಂದೂ ದಕ್ಕಿಲ್ಲ.. ಇಂದೂ ದಕ್ಕಿಲ್ಲಾ.. ಮುಂದೇನೋ ಗೊತ್ತಿಲ್ಲಾ.
ಮಧ್ಯಪ್ರದೇಶದ ಸಂಸದರಾಗಿರುವ ಜ್ಯೋತಿರಾದಿತ್ಯ, ಮಧ್ಯಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್ ಅರಳಲು ಪ್ರಮುಖ ಕಾರಣಕರ್ತರಲ್ಲೊಬ್ಬರು. ಯುವಕರಿಗೆ ಪ್ರಾತಿನಿಧ್ಯ ನೀಡಬೇಕು ಎನ್ನುವುದು ರಾಹುಲ್ ಗಾಂಧಿ ನಿಲುವಾಗಿದ್ದರೂ, ಹಿರಿಯರನ್ನು ಕಡೆಗಣಿಸಬಾರದು ಎನ್ನುವ ಸೋನಿಯಾ ಗಾಂಧಿಯವರ ನಿಲುವಿನಿಂದ, ಒಂದೆಡೆ ಸಿಂದಿಯಾಗೂ ಸಿಎಂ ಹುದ್ದೆ ತಪ್ಪಿತು, ಇನ್ನೊಂದೆಡೆ ಸಚಿನ್ ಪೈಲಟಿಗೂ..
ಮಧ್ಯ ಪ್ರದೇಶದಲ್ಲಿ 'ಕಮಲ್' ಸರ್ಕಾರ! ಡಿ.17ರಂದು ಪ್ರಮಾಣವಚನ
ಈಗ ಹೀಗೆ ಜ್ಯೋತಿರಾದಿತ್ಯ ತನ್ನ ನಾಯಕ ರಾಹುಲ್ ಗಾಂಧಿಗೆ ಆಪ್ತರೋ, ಅದೇ ರೀತಿ ಮೂರು ದಶಕಗಳ ಹಿಂದೆ ಮಾಧವರಾವ್ ಸಿಂದಿಯಾ ಕೂಡಾ ರಾಜೀವ್ ಗಾಂಧಿ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಆದರೂ, ಅವರಿಗೆ ಸಿಎಂ ಹುದ್ದೆ ತಪ್ಪಿದ್ದು ಹೇಗೆ? ಮುಂದೆ ಓದಿ..
ಗುಣಾ (ಜ್ಯೋತಿರಾದಿತ್ಯ), ಇನ್ನೊಂದು ಚಿಂದ್ವಾರ (ಕಮಲ್ ನಾಥ್)
ಕಳೆದ ಸಾರ್ವತ್ರಿಕ (2014) ಚುನಾವಣೆಯಲ್ಲಿ ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದದ್ದು ಎರಡೇ ಕ್ಷೇತ್ರದಲ್ಲಿ ಒಂದು ಗುಣಾ (ಜ್ಯೋತಿರಾದಿತ್ಯ), ಇನ್ನೊಂದು ಚಿಂದ್ವಾರ (ಕಮಲ್ ನಾಥ್). ಇವರಿಬ್ಬರೂ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟೇ, ಅಸೆಂಬ್ಲಿ ಚುನಾವಣೆಯ ವೇಳೆ, ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು. ಅದರಲ್ಲೂ ಜ್ಯೋತಿರಾದಿತ್ಯ ಒಂದು ಕೈ ಮೇಲೆಂದೇ ಹೇಳಬಹುದು. ಸಚಿನ್ ಪೈಲಟ್ ತಾಳಿದಷ್ಟು ಕಠಿಣ ನಿಲುವನ್ನು ಜ್ಯೋತಿರಾದಿತ್ಯ ತಾಳದೇ ಇದ್ದಿದ್ದರಿಂದ, ಅವರ ಮನವೊಲಿಸುವುದು ಕಾಂಗ್ರೆಸ್ ಹೈಕಮಾಂಡಿಗೆ ಅಷ್ಟು ಕಷ್ಟವಾಗಿರಲಿಲ್ಲ.
ಅನುಭವಕ್ಕೆ ಮಣೆ : ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಕಮಲ್ ನಾಥ್
ಹಿರಿಯ ಕಾಂಗ್ರೆಸ್ಸಿಗ ಅರ್ಜುನ್ ಸಿಂಗ್ ತೀವ್ರ ವಿರೋಧ
1989ರಲ್ಲಿ ಇನ್ನೇನು ಮಾಧವರಾವ್ ಸಿಂದಿಯಾ ಸಿಎಂ ಹುದ್ದೆಗೇರಬೇಕಿತ್ತು, ಅಷ್ಟರಲ್ಲಿ ಹಿರಿಯ ಕಾಂಗ್ರೆಸ್ಸಿಗ ಅರ್ಜುನ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಸಿಂದಿಯಾಗೆ ಹುದ್ದೆ ಕೈತಪ್ಪಿತ್ತು. ಚುರ್ಹತ್ ಲಾಟರಿ ಹಗರಣದಲ್ಲಿ ಅರ್ಜುನ್ ಸಿಂಗ್ ಅವರು ಆರೋಪಿ ಸ್ಥಾನದಲ್ಲಿ ನಿಂತಾಗ, ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 23.01.1989ರಲ್ಲಿ ಅವರಿಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು.
'ಇಬ್ಬರು ಅತ್ಯಂತ ಶಕ್ತಿಶಾಲಿ ಸೇನಾನಿಗಳೆಂದರೆ ತಾಳ್ಮೆ ಹಾಗೂ ಸಮಯ'
ಅರ್ಜುನ್ ಸಿಂಗ್ ರಾಜೀನಾಮೆ
ವರಿಷ್ಠರ ಆದೇಶವನ್ನು ಪಾಲಿಸಿ ಅರ್ಜುನ್ ಸಿಂಗ್ ರಾಜೀನಾಮೆ ನೀಡಿದ್ದರು. ಜೊತೆಗೆ, ಮಾಧವರಾವ್ ಸಿಂದಿಯಾ ಅವರನ್ನು ಸಿಎಂ ಆಗದಂತೆ ನೋಡಿಕೊಳ್ಳುವಲ್ಲಿ ಸಿಂಗ್ ಯಶಸ್ವಿಯಾಗಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರ ಜೊತೆ ಮಾತುಕತೆ ನಡೆಸಿ, ಭೋಪಾಲ್ ಗೆ ಹಿಂದಿರುಗಿದ್ದ ಮಾಧವರಾವ್ ಸಿಎಂ ಆಗುವ ಅತಿಯಾದ ವಿಶ್ವಾಸದಲ್ಲಿದ್ದರು. ಆದರೆ ದೆಹಲಿಯಿಂದ ಮಾಧವರಾವ್ ವಾಪಸ್ ಹೊರಟ ಮೇಲೆ ನಡೆದಿದ್ದೇ ಬೇರೆ.
ಮೋತಿಲಾಲ್ ವೋರಾ
ಕಾಂಗ್ರೆಸ್ ಹೈಕಮಾಂಡ್, ಮಾಧವರಾವ್ ಸಿಂದಿಯಾ ಅವರಿಗೆ ಮಣೆಹಾಕುವ ಬದಲು, ಪಕ್ಷದ ಇನ್ನೋರ್ವ ನಿಷ್ಟಾವಂತ ಮೋತಿಲಾಲ್ ವೋರಾ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಘೋಷಿಸಿತು. ಮಾಧವರಾವ್ ಅವರ ಪರವಾಗಿ ಯಾರೂ ನಿಲ್ಲಬಾರದೆಂದು ಅರ್ಜುನ್ ಸಿಂಗ್, ಕೈ ಶಾಸಕರನ್ನೆಲ್ಲಾ ತಮ್ಮ ಆಪ್ತನ ಮನೆಯಲ್ಲಿ ಗೃಹಬಂಧನದಲ್ಲಿಇರಿಸಿದ್ದರು. ಅರ್ಜುನ್ ರಾಜಕೀಯ ಮೇಲಾಟದ ಮುಂದೆ ಮಾಧವರಾವ್ ಆಟ ನಡೆಯಲಿಲ್ಲ.
ಜ್ಯೋತಿರಾದಿತ್ಯ ಅವರ ಮೊದಲ ಪ್ರಯತ್ನಕ್ಕೆ ಹಿನ್ನಡೆಯಾಗಿದೆ
ಮೂವತ್ತು ವರ್ಷದ ಹಿಂದೆ ತಂದೆ ಮಾಧವರಾವ್ ಸಿಂದಿಯಾಗೆ ಸಿಎಂ ಹುದ್ದೆ ಸಿಗದಂತೆ ಅರ್ಜುನ್ ಸಿಂಗ್ ತಡೆಯುವಲ್ಲಿ ಯಶಸ್ವಿಯಾದರು. ಇಂದು ಜ್ಯೋತಿರಾದಿತ್ಯಗೆ ಮುಖ್ಯಮಂತ್ರಿ ಹುದ್ದೆ ಕೊಡಬಾರದೆಂದು ಹೈಕಮಾಂಡ್ ನಿಲುವಲ್ಲವಾಗಿದ್ದರೂ, ಹಿರಿಯರಿಗೆ ಮಣೆ ಹಾಕುವ ಲೆಕ್ಕಾಚಾರದಿಂದ ಅವರಿಗೆ ಸಿಎಂ ಹುದ್ದೆ ತಪ್ಪಿದೆ. ಒಟ್ಟಿನಲ್ಲಿ, ತಂದೆಗಂತೂ ಬಯಸಿದ್ದ ಹುದ್ದೆ ಸಿಗಲಿಲ್ಲ, ತಾನಾದರೂ ಟ್ರೈ ಮಾಡೋಣ ಎನ್ನುವ ಜ್ಯೋತಿರಾದಿತ್ಯ ಅವರ ಮೊದಲ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.