"ಸಿಎಂ ಮತ್ತು ನಾನು ಕೈಜೋಡಿಸಿದ ಮೇಲೆ ಪ್ರತಿಪಕ್ಷಕ್ಕೇನು ಕೆಲಸ"
ಭೋಪಾಲ್, ಅಕ್ಟೋಬರ್.28: ಮಧ್ಯಪ್ರದೇಶದಲ್ಲಿ ನಾನು ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಕೈಜೋಡಿಸಿದ ಮೇಲೆ ವಿರೋಧ ಪಕ್ಷಗಳ ಆಟವೇನೂ ನಡೆಯುವುದಿಲ್ಲ ಎಂದು ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಇಂದೋರ್ ನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. "ಯಾವಾಗ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಮತ್ತು ನಾನು ಒಟ್ಟಿಗೆ ಕೈಜೋಡಿಸುತ್ತೀವೋ ಅಲ್ಲಿಗೆ ಪ್ರತಿಪಕ್ಷಗಳಿಗೆ ಏನೂ ಉಳಿದಿರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕೈಗಾರಿಕೆಗಳ ವರ್ಗಾವಣೆ ಮತ್ತು ಲಿಕ್ಕರ್ ಮಾಫಿಯಾ ಬಗ್ಗೆ ಪ್ರಚಾರದಲ್ಲೇ ಬ್ಯುಸಿ ಆಗಿ ಬಿಟ್ಟಿದೆ" ಎಂದು ಜ್ಯೋತಿರಾದಿತ್ಯ ಸಿಂಧಿಯಾ ದೂಷಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಜನರಿಗೆ ಕೊವಿಡ್-19 ಲಸಿಕೆ ಉಚಿತ.. ಉಚಿತ..!
"ಮುಂಬರುವ ಚುನಾವಣೆಗಳಲ್ಲಿ ನಾವು ಸತ್ಯ ಮತ್ತು ಸುಳ್ಳನ್ನು ಆಯ್ಕೆ ಮಾಡಬೇಕಿದೆ. ಪ್ರಗತಿ ಮಾನದಂಡವನ್ನು ಇಟ್ಟುಕೊಂಡು ನಾವು ಸತ್ಯ ಅಥವಾ ಸುಳ್ಳನ್ನು ಚುನಾಯಿಸಬೇಕಿದೆ. ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಅಭ್ಯರ್ಥಿ ತುಳಸಿ ಸಿಲಾವತ್ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ಸನ್ವರ್ ಕ್ಷೇತ್ರದ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನರ್ಮದಾ ನದಿಯಿಂದ ನೀರು ತರಿಸುವುದಕ್ಕಾಗಿ ಶ್ರಮಿಸಿದ್ದಾರೆ ಎಂದು ಸಿಂಧಿಯಾ ಹೇಳಿದರು.
"ಹಣ ಗಳಿಕೆಗೆ ಸೀಮಿತಗೊಂಡಿದ್ದ ಕಾಂಗ್ರೆಸ್ ಸರ್ಕಾರ"
"ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಕಮನಾಥ್ ನೇತೃತ್ವದ ಸರ್ಕಾರವು ಕಳೆದ 15 ತಿಂಗಳುಗಳ ಆಡಳಿತದಲ್ಲಿ ಕೇವಲ ಹಣ ಗಳಿಕೆಗಷ್ಟೇ ಆದ್ಯತೆ ನೀಡಿತ್ತು. ಆದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ಸರ್ಕಾರವು ಕಷ್ಟ ಮತ್ತು ಸುಖದಲ್ಲಿ ಸಾರ್ವಜನಿಕರ ಜೊತೆಗಿದೆ" ಎಂದು ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್.03ರಂದು ಮತದಾನ ನಡೆಯಲಿದ್ದು, ನವೆಂಬರ್.10ರಂದು ಫಲಿತಾಂಶ ಹೊರಬೀಳಲಿದೆ. 25 ಶಾಸಕರ ರಾಜೀನಾಮೆ ಮತ್ತು ಮೂವರು ಶಾಸಕರ ಅಕಾಲಿಕ ಮರಣದಿಂದ 28 ಕ್ಷೇತ್ರಗಳಲ್ಲಿ ಶಾಸಕ ಸ್ಥಾನವು ತೆರವಾಗಿತ್ತು. ಮಧ್ಯಪ್ರದೇಶದ 230 ಕ್ಷೇತ್ರಗಳ ಪೈಕಿ ಬಿಜೆಪಿಯ 107 ಶಾಸಕರು, ಕಾಂಗ್ರೆಸ್ಸಿನ 88, ನಾಲ್ವರು ಪಕ್ಷೇತರ ಶಾಸಕರು, ಇಬ್ಬರು ಬಿಎಸ್ ಪಿ ಮತ್ತು ಒಬ್ಬ ಸಮಾಜವಾದಿ ಪಕ್ಷದ ಶಾಸಕರಿದ್ದಾರೆ.