ನನಗಿಂತ ದೊಡ್ಡ ಸಮೀಕ್ಷೆ ಯಾವುದಿದೆ : ಚೌಹಾಣ್ ಆತ್ಮವಿಶ್ವಾಸದ ಹೇಳಿಕೆ
ಭೋಪಾಲ್, ಡಿಸೆಂಬರ್ 08 : ಡಿಸೆಂಬರ್ 7ರಂದು ಸಂಜೆ ಪ್ರಕಟವಾದ ಹಲವಾರು ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಕ್ಕೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.
ಎಬಿಪಿ ನ್ಯೂಸ್ ಸಮೀಕ್ಷೆ : ಎಂಪಿಯಲ್ಲಿ ಬೀರಲಿದೆ ಕಾಂಗ್ರೆಸ್ ಗೆಲುವಿನ ನಗೆ?
"ನಾನು ಮಾಡಿರುವ ಸಮೀಕ್ಷೆಗಿಂತ ದೊಡ್ಡದಾದ ಸಮೀಕ್ಷೆ ಯಾವುದಿದೆ? ನಾನು ಹಗಲು ರಾತ್ರಿ ಇಲ್ಲಿನ ಜನರೊಂದಿಗೆ ಕಾಲ ಕಳೆದಿದ್ದೇನೆ. ಹೀಗಾಗಿ ನಾನು ಅತ್ಯಂತ ವಿಶ್ವಾಸದಿಂದ ಹೇಳುತ್ತಿದ್ದೇನೆ, ಭಾರತೀಯ ಜನತಾ ಪಕ್ಷ ಖಂಡಿತವಾಗಿ ಸರಕಾರ ರಚಿಸುತ್ತದೆ. ಇದು ಇಲ್ಲಿನ ಜನರು, ರೈತರು, ಬಡವರು, ಮಕ್ಕಳು ಮತ್ತು ಮಹಿಳೆಯರಿಗಾಗಿ ಅಗತ್ಯವಿದೆ" ಎಂದು ಶಿವರಾಜ್ ಸಿಂಗ್ ಚೌಹಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಕಸ್ಮಾತ್ ಚುನಾವಣೋತ್ತರ ಸಮೀಕ್ಷೆ ಸತ್ಯವಾದರೆ...
ಶುಕ್ರವಾರ ಸಂಜೆ ಪ್ರಕಟವಾದ ಬಹುತೇಕ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಗೆಲ್ಲಲಿದೆ ಅಥವಾ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿವೆ. ಟೈಮ್ಸ್ ನೌ - ಸಿಎನ್ಎಕ್ಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಮಾತ್ರ ಬಿಜೆಪಿಗೆ ಬಹುಮತ (126 ಸ್ಥಾನ) ಸಿಗಲಿದೆ ಎಂದು ಹೇಳಿದೆ. ಟುಡೇಸ್ ಚಾಣಕ್ಯ ನಡೆಸಿದ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಸಿಗೆ ಬಹುಮತ ಗಳಿಸಲು ಒಂದು ಸ್ಥಾನ ಮಾತ್ರ ಕೊರತೆಯಾಗಲಿದೆ. ಉಳಿದೆಲ್ಲ ಸಮೀಕ್ಷೆಗಳು ಬಿಜೆಪಿ ಪರವಾಗಿಲ್ಲದಿರುವುದು ಭಾರತೀಯ ಜನತಾ ಪಕ್ಷಕ್ಕೆ ತಲೆನೋವು ತಂದಿದೆ.
ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂ.116
230 ಸ್ಥಾನಗಳಿರುವ ಮಧ್ಯ ಪ್ರದೇಶದ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಸಾಬೀತುಪಡಿಸಲು ಬೇಕಿರುವ ಮ್ಯಾಜಿಕ್ ನಂಬರ್ 116 ಸ್ಥಾನಗಳು. 2013ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಗೆಲುವು ಗಳಿಸಿ 165 ಸೀಟುಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಕೇವಲ 58 ಸೀಟುಗಳನ್ನು ಮಾತ್ರ ಗಳಿಸಿತ್ತು. ಬಹುಜನ ಸಮಾಜ ಪಕ್ಷ 4 ಮತ್ತು 3 ಸ್ವತಂತ್ರ ಪಕ್ಷಗಳ ಪಾಲಾಗಿದ್ದವು. ಆದರೆ, ಕಳೆದ ಬಾರಿಯ ಮ್ಯಾಜಿಕ್ ಈ ಬಾರಿ ನಿರೀಕ್ಷಿಸುವಂತಿಲ್ಲ.
ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷದ ಗೆಲುವು?
ಅತಂತ್ರ ಎಂದು ಹೇಳಿವೆ ಬಹುತೇಕ ಸಮೀಕ್ಷೆ
ಎಬಿಪಿ-ಸಿಎಸ್ಡಿಎಸ್ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ (126 ಸ್ಥಾನ) ಬರುತ್ತದೆಂದು ಹೇಳಿದ್ದರೆ, ಆಕ್ಸಿಸ್ ಮೈ ಇಂಡಿಯಾ, ಜನ್ ಕಿ ಬಾತ್, ರಿಪಬ್ಲಿಕ್, ನ್ಯೂಸ್ 24 - ಪೇಸ್, ಇಂಡಿಯು ಟುಡೇ, ರಿಪಬ್ಲಿಕ್ ಸಿವೋಟರ್, ನ್ಯೂಸ್ ನೇಷನ್ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತವೆ ಎಂದು ವರದಿ ಮಾಡಿವೆ. ಎಲ್ಲ ಸಮೀಕ್ಷೆಗಳಿಗಿಂತ ನಿಖರ ಎಂದು ಹೇಳಲಾಗುವ ಟುಡೇಸ್ ಚಾಣಕ್ಯ ಕೂಡ ಕಾಂಗ್ರೆಸ್ಸಿಗೆ ಬಹುಮತ ಪಡೆಯಲು ಒಂದು ಸ್ಥಾನ ಕಡಿಮೆ ಸಿಗಲಿದೆ ಎಂದು ಹೇಳಿದೆ.
ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್
ಕರ್ನಾಟಕದ ಜ್ಯೋತಿಷಿ ಏನಂತಾರೆ?
ಕರ್ನಾಟಕದ ಒಬ್ಬ ಖ್ಯಾತ ಜ್ಯೋತಿಷಿಯ ಪ್ರಕಾರ, ಮಧ್ಯ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಗಳಿಸದಿದ್ದರೂ ಅಥವಾ ಅತಂತ್ರ ಸ್ಥಿತಿ ನಿರ್ಮಾಣವಾದರೂ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ನಡೆಯುವ ರಾಜಕೀಯದಲ್ಲಿ ಯಾವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು. ಒಂದು ವೇಳೆ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ದೊರಕಿದರೆ ಗತ್ಯಂತರವಿಲ್ಲದೆ ಶಿವರಾಜ್ ಸಿಂಗ್ ಚೌಹಾಣ್ ಅವರು 15 ವರ್ಷಗಳ ನಂತರ ವಿರೋಧ ಪಕ್ಷದ ಸ್ಥಾನದಲ್ಲಿ ಕೂಡಬೇಕಾಗುತ್ತದೆ.
ಮಧ್ಯಪ್ರದೇಶ ಎಕ್ಸಿಟ್ ಪೋಲ್ : ಯಾವ ಪಕ್ಷಕ್ಕೂ ಬಹುಮತವಿಲ್ಲ, ಅತಂತ್ರ
ಚೌಹಾಣ್ ಮಾತಿಗೆ ಟ್ವಿಟ್ಟಿಗರ ತಮಾಷೆ
ಆದರೆ, ಶಿವರಾಜ್ ಸಿಂಗ್ ಚೌಹಾಣ್ ತಮಗೆ ವಿಶ್ವಾಸವಿದ್ದು ತಾವೇ ಸರಕಾರ ರಚಿಸುವುದಾಗಿ ಹೇಳಿರುವುದನ್ನು ಟ್ವಿಟ್ಟಿಗರು ತಮಾಷೆ ಮಾಡಲು ಶುರು ಮಾಡಿದ್ದಾರೆ. ಮಾಮಾ ತೊ ಗಯೋ, ಮಾಮಾಗೆ ಹೋಗುವ ಸಮಯ ಬಂದಿದೆ, ಅವರು ಸಾಕಷ್ಟು ಮಜಾ ಮಾಡಿದ್ದಾರೆ ಎಂದೆಲ್ಲ ಕಿಚಾಯಿಸುತ್ತಿದ್ದಾರೆ. ಇವಿಎಂ ಮೇಲೆ ಅಷ್ಟೊಂದು ವಿಶ್ವಾಸವೇ, ಅಷ್ಟು ವಿಶ್ವಾಸ ಬೇಡ ಎಂದೆಲ್ಲ ಕಾಲೆಳೆಯುತ್ತಿದ್ದಾರೆ. ಅವರು ಹೇಳಿದ್ದು ನಿಜವಾಗಲಿ, ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಲಿ ಎಂದು ಹಲವು ಬಿಜೆಪಿ ಅಭಿಮಾನಿಗಳು ಕೂಡ ಟ್ವೀಟ್ ಮಾಡುತ್ತಿದ್ದಾರೆ.
ಡಿಸೆಂಬರ್ 11ರಂದು ಫಲಿತಾಂಶ
ಕೆಲ ಸಮೀಕ್ಷೆಗಳು ಕಾಂಗ್ರೆಸ್ಸಿಗೆ ಹೆಚ್ಚಿನ ಸ್ಥಾನಗಳು ದೊರೆಯಲಿವೆ ಅಥವಾ ಬಹುಮತ ಸಿಗಲಿವೆ ಎಂದು ಹೇಳಿದರೂ ಕಾಂಗ್ರೆಸ್ ಪಾಳಯದಲ್ಲಿ ಅಷ್ಟೊಂದು ಸಂಭ್ರಮದ ವಾತಾವರಣ ಕಂಡುಬರುತ್ತಿಲ್ಲ. ಆದರೆ, ಈ ಸಮೀಕ್ಷೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭಾರೀ ವಿಶ್ವಾಸ ತುಂಬಿರುವುದಂತೂ ಗ್ಯಾರಂಟಿ. ಅವರು ರಾಜ್ಯದ ಉದ್ದಗಲಕ್ಕೂ ಅಡ್ಡಾಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ರಾಜಸ್ಥಾನದಂತೆ ಇಲ್ಲಿ ಕೂಡ ಇಬ್ಬರು ಮುಖ್ಯಮಂತ್ರಿ ಪದವಿಗೆ ಸೆಣಸುತ್ತಿದ್ದಾರೆ. ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಹಿರಿಯ ನಾಯಕ ಕಮಲ್ ನಾಥ್ ಅವರು ಮುಖ್ಯಮಂತ್ರಿ ಪೀಠವೇರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಅದೃಷ್ಟ ಯಾರಿಗೆ ಒಲಿಯುವುದೋ? ಡಿಸೆಂಬರ್ 11ರಂದು ಮಂಗಳವಾರ ತಿಳಿಯಲಿದೆ.