ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆಗೆ ಕರ್ನಾಟಕವೇ ಮಾದರಿ
ಭೋಪಾಲ್, ಜುಲೈ 2: ಕೊರೊನಾ ಆರಂಭದಲ್ಲಿ ಸರ್ಕಾರದ ರಚನೆ ಮಾಡಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿರುವ ಜ್ಯೋತಿರಾದಿತ್ಯಸಿಂಧಿಯಾ ಅವರ ಹತ್ತು ಆಪ್ತರು ಸೇರಿದಂತೆ ಸುಮಾರು 28 ಶಾಸಕರನ್ನು ಇಂದು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
Recommended Video
ಸರ್ಕಾರ ರಚನೆಯಾಗಿ ಸುಮಾರು ನಾಲ್ಕು ತಿಂಗಳಾದ ಬಳಿಕ ಮೊದಲ ಬಾರಿಗೆ ಸಂಪುಟ ವಿಸ್ತರಣೆ ನಡೆಯುತ್ತಿದೆ.ಈಗಾಗಲೇ ಚೌಹಾಣ್ ಸಂಪುಟದಲ್ಲಿ ಐವರು ಸಚಿವರಿದ್ದು, ಇನ್ನು 28 ಸಚಿವರನ್ನು ಸೇರಿಸಿಕೊಳ್ಳಲು ಅವಕಾಶವಿದೆ.
ಕಾಂಗ್ರೆಸ್ ಸರ್ಕಾರ ಉರುಳಿಸುವ ಯತ್ನ ಮಾಡಿಲ್ಲ: ಶಿವರಾಜ್
ಕಳೆದ ಕೆಲವು ದಿನಗಳಿಂದ ಸಂಪುಟ ವಿಸ್ತರಣೆಗೆ ಸಿಂಧಿಯಾ ಬೆಂಬಲಿಗರಿಂದ ಒತ್ತಡ ಹಚ್ಚುತ್ತಲೇ ಇತ್ತು. ಈ ಹಿಂದೆ ಕಮಲ್ನಾಥ್ ಸರ್ಕಾರದಲ್ಲಿ ಬೆಂಬಲ ಸಿಗಲಿಲ್ಲ ಎಂಬ ಕಾರಣಕ್ಕೆ ಸಿಂಧಿಯಾ ಹಾಗೂ ಸಿಂಧಿಯಾ ಪರ ಶಾಸಕರು ಬಿಜೆಪಿ ಸೇರಿದ್ದರು. ಹೀಗಾಗಿ ಸಂಪುಟ ವಿಸ್ತರಣೆ ಶಿವರಾಜ್ ಸಿಂಗ್ ಚೌಹಾಣ್ಗೆ ಅನಿವಾರ್ಯವಾಗಿತ್ತು.
ಚೌಹಾಣ್ ಆಪ್ತರಿಗೆ ಜಾಗವಿಲ್ಲ
ಸಂಪುಟ ವಿಸ್ತರಣೆಗೆ ಶಿವರಾಜ್ ಸಿಂಗ್ ಚೌಹಾಣ್ ಸಿಂಗ್ ಆಪ್ತರಿಗೆ ಸ್ಥಾನ ಸಿಗುವುದು ಕಷ್ಟವಾಗಿದೆ, ಸರ್ಕಾರ ಉಳಿಸಿಕೊಳ್ಳಲು ಹಾಗೂ ಸರ್ಕಾರ ರಚನೆಗೆ ಕಾರಣರಾದ ಸಿಂಧಿಯಾ ಆಪ್ತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅನಿವಾರ್ಯ . ಹೀಗಾಗಿ ಸಂಪುಟ ವಿಸ್ತರಣೆಯಲ್ಲಿ ಶಿವರಾಜ್ ಸಿಂಗ್ ಅತ್ಯಾಪ್ತರಿಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.ಈ ಕುರಿತು ಪರೋಕ್ಷ ಹೇಳಿಕೆ ನೀಡಿರುವ ಚೌಹಾಣ್, ಮಂಥನ ಆದಾಗ ಅಮೃತ ಹೊರ ಬೀಳುತ್ತದೆ. ವಿಷವನ್ನು ಶಿವನೇ ನುಂಗಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ರಚನೆಯಾಗಿದೆ ಆಪ್ತರನ್ನು ಸಂಬಾಳಿಸಿ
ಶಿವರಾಜ್ ಸಿಂಗ್ ಚೌಹಾಣ್ ಇಚ್ಛೆಯಂತೆ ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಯಾಗಿದೆ. ಹೀಗಾಗಿ ಆಪ್ತರನ್ನು ಸಂಬಾಳಿಸಿಕೊಳ್ಳಬೇಕು. ಸರ್ಕಾರ ರಚನೆಗೆ ಕಾರಣರಾದವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದು ಅನಿವಾರ್ಯ. ಹೀಗಾಗಿ ಸಿಂಧಿಯಾ ಆಪ್ತರಿಗೆ ಸಚಿವ ಸ್ಥಾನ ನೀಡಬೇಕಾಗುತ್ತದ. ಅತೃಪ್ತ ಶಾಸಕರ ಬಳಗ ಬೆಳೆಯದಂತೆ ನೋಡಿಕೊಳ್ಳಿ ಎಂದು ಚೌಹಾಣ್ ಗೆ ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.ಅಧಿಕಾರದ ಚುಕ್ಕಾಣಿ ಹಿಡಿದಿರುವ ಚೌಹಾಣ್ ತಮ್ಮ ಖುರ್ಚಿಗಾಗಿ ಅತ್ಯಾಪ್ತರನ್ನು ಸಂಬಾಳಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಚೌಹಾಣ್ಗೂ ಬಿಎಸ್ವೈ ರೀತಿಯ ಸಂಕಟ
ಕರ್ನಾಟಕದಲ್ಲೂ ಸರ್ಕಾರ ರಚನೆಯಾದಾಗ ಆಪ್ತರಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗಿರಲಿಲ್ಲ. ನಿಮ್ಮ ಇಚ್ಛೆಯಂತೆ ಸರ್ಕಾರ ರಚಿಸಿದ್ದೇವೆ ಈಗ ನಿಮ್ಮ ಆಪ್ತರನ್ನು ಸಂಬಾಳಿಸಿ ಎಂದು ಯಡಿಯೂರಪ್ಪಗೂ ಹೈಕಮಾಂಡ್ ಸೂಚಿಸಿತ್ತು. ಈಗ ಇದೇ ಮಾದರಿ ಮಧ್ಯಪ್ರದೇಶದಲ್ಲಿ ಬಂದಿದೆ.
ಸಿಂಧಿಯಾಗೂ ಶೀಘ್ರವೇ ಸಚಿವ ಸ್ಥಾನ
ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಶೀಘ್ರವೇ ಸಚಿವ ಸಂಪುಟಕ್ಕೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಿಂಧಿಯಾಗೆ ಪ್ರಮುಖ ಕ್ಯಾಬಿನೆಟ್ ದರ್ಜೆಯ ಖಾತೆ ನೀಡಲು ಮೋದಿ ನಿರ್ಧರಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಸಮಯ ನಿಗದಿಯಾಗಿಲ್ಲ.