ಇಂದೋರ್-ಕೋಲ್ಕತ್ತಾ ನಡುವೆ ಶ್ರಮಿಕ್ ರೈಲು ಸಂಚಾರಕ್ಕೆ ಮನವಿ
ಭೋಪಾಲ್, ಮೇ.18: ವಲಸೆ ಕಾರ್ಮಿಕರು ಗೂಡು ಸೇರುವುದಕ್ಕೆ ಸಹಕಾರ ನೀಡಬೇಕು ಎಂದು ಕೋರಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಾ ನಡುವೆ ಶ್ರಮಿಕ್ ರೈಲು ಸಂಚಾರದ ಅಗತ್ಯತೆ ಬಗ್ಗೆ ಭಾರತೀಯ ರೈಲ್ವೆ ಸಚಿವಾಲಯದ ಗಮನ ಸೆಳೆಯುವಂತೆ ಮಮತಾ ಬ್ಯಾನರ್ಜಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶ್ರಮಿಕ್ ರೈಲುಗಳಿಗೂ ಕೆಂಪು ಬಾವುಟ ತೋರಿದರಾ ಮಮತಾ ಬ್ಯಾನರ್ಜಿ?
ಮದ್ಯಪ್ರದೇಶದ ಇಂದೋರ್ ಕೈಗಾರಿಕೆ, ವಾಣಿಜ್ಯ, ವ್ಯಾಪಾರ ಹಾಗೂ ಶಿಕ್ಷಣದ ಪ್ರಮುಖ ಕೇಂದ್ರವಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಿಂದ ಸಾಕಷ್ಟು ಮಂದಿ ಇಂದೋರ್ ಗೆ ವಲಸೆ ಬಂದಿದ್ದಾರೆ. ಮಧ್ಯಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸಿಲುಕಿರುವ ಪಶ್ಚಿಮ ಬಂಗಾಳದ ನೂರಾರು ವಲಸೆ ಕಾರ್ಮಿಕರು ವಾಪಸ್ ತೆರಳುವುದಕ್ಕೆ ಶ್ರಮಿಕ್ ರೈಲು ಸಂಚಾರದಿಂದ ಅನುಕೂಲವಾಗುತ್ತದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಮನವಿ ಮಾಡಿದ್ದಾರೆ.
ತವರಿನತ್ತ ಮಿಡಿದ ಹೃದಯ:
ಭಾರತ ಲಾಕ್ ಡೌನ್ ನಿಂದಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತೆ ಆಗಿದೆ. ಈ ಹಿನ್ನೆಲೆ ಪಶ್ಚಿಮ ಬಂಗಾಳಕ್ಕೆ ವಾಪಸ್ ತೆರಳಲು ವಲಸೆ ಕಾರ್ಮಿಕರು ಹಾತೊರೆಯುತ್ತಿದ್ದು, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಪರಿತಪಿಸುತ್ತಿದ್ದಾರೆ. ಇಂದೋರ್ ಹಾಗೂ ಕೋಲ್ಕತ್ತಾ ನಡುವೆ ಶ್ರಮಿಕ್ ರೈಲು ಬಿಡುವಂತೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆಯುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮದ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಮನವಿ ಮಾಡಿಕೊಂಡಿದ್ದಾರೆ.