ಜಿನ್ನಾ ಹೆಸರು ಹೇಳಿದ್ದು ಬಾಯಿತಪ್ಪಿನಿಂದ, ವಿಷಾದವೇಕೆ? : ಶತ್ರುಘ್ನ ಸಿನ್ಹಾ
ಚಿಂದವಾಡ (ಮಧ್ಯ ಪ್ರದೇಶ), ಏಪ್ರಿಲ್ 27 : "ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನ ಧೀಮಂತ ನಾಯಕ ಮೊಹಮ್ಮದ್ ಅಲಿ ಜಿನ್ನಾ ಅವರು ಭಾರೀ ಯೋಗದಾನ ನೀಡಿದ್ದಾರೆ" ಎಂದು ಹೇಳಿಕೆ ನೀಡಿದ್ದ ಶತ್ರುಘ್ನ ಸಿನ್ಹಾ ಅವರು, ಈ ಪ್ರಮಾದಕ್ಕಾಗಿ ವಿಷಾದಿಸಲು ನಿರಾಕರಿಸಿದ್ದಾರೆ.
ನಾನು ಹೇಳಲು ಹೊರಟಿದ್ದು ಮೌಲಾನಾ ಆಝಾದ್ ಅವರ ಹೆಸರನ್ನು. ಆದರೆ, 'ಸ್ಲಿಪ್ ಆಫ್ ಟಂಗ್'(ಬಾಯಿ ತಪ್ಪಿ)ನಿಂದಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಮೊಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಹೇಳಿದೆ. ಇದು ಮಾತಿನ ಭರದಲ್ಲಿ ಆಗಿದ್ದೇ ಹೊರತು, ಉದ್ದೇಶಪೂರ್ವಕವಲ್ಲವಾದ್ದರಿಂದ ವಿಷಾದ ವ್ಯಕ್ತಪಡಿಸುವ ಪ್ರಮೇಯವೇ ಇಲ್ಲ ಎಂದಿದ್ದಾರೆ.
ಜಿನ್ನಾ, ರಾಹುಲ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ : ಶತ್ರುಘ್ನ ಸಿನ್ಹಾ!
ಮಧ್ಯ ಪ್ರದೇಶದಲ್ಲಿ ಚಿಂದವಾಡದಿಂದ ಲೋಕಸಭೆಗೆ ಸ್ಪರ್ಧಿಸಿರುವ ನಕುಲ್ ನಾಥ್ (ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ) ಅವರ ಪರವಾಗಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಶತ್ರುಘ್ನ ಸಿನ್ಹಾ ಅವರು, ಮಹಾತ್ಮಾ ಗಾಂಧಿ ಮುಂತಾದವರ ಜೊತೆಗೆ ಮೊಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನೂ ತೆಗೆದುಕೊಂಡಿದ್ದರು. ಜಿನ್ನಾ ಅವರಿಂದಲೇ ಭಾರತ ಮತ್ತು ಪಾಕಿಸ್ತಾನಗಳೆರಡು ಇಬ್ಭಾಗವಾದವು ಎಂಬುದನ್ನು ಯಾರೂ ಮರೆತಿಲ್ಲ.
ಇಷ್ಟು ಮಾತ್ರವಲ್ಲ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಈಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಯೋಗದಾನವೂ ಇದೆ ಎಂದು ಶತ್ರುಘ್ನ ಸಿನ್ಹಾ ಸೇರಿಸಿದ್ದರು. ಕಾಂಗ್ರೆಸ್ ನ ಧೀಮಂತ ನಾಯಕರಾದ ಗಾಂಧಿ, ಜಿನ್ನಾ, ನೆಹರೂ, ಇಂದಿರಾ, ರಾಜೀವ್ ಮತ್ತು ರಾಹುಲ್ ಅವರು ದೇಶದ ವಿಕಾಸದಲ್ಲಿ, ಅಭಿವೃದ್ಧಿಯಲ್ಲಿ ಮತ್ತು ಸ್ವಾತಂತ್ರ್ಯದಲ್ಲಿ ಯೋಗದಾನ ಮಾಡಿದ್ದಾರೆ ಎಂದು ಸಿನ್ಹಾ ಹೇಳಿದ್ದರು. ಬಾಯಿತಪ್ಪಿನಿಂದ ಯಾವುದೇ ಮಾತನ್ನು ಸಿನ್ಹಾ ಆಡುವಂಥವರಲ್ಲ.
ಮತ್ತೆ ವಿವಾದದ ಕಿಡಿಯೆಬ್ಬಿಸಿರುವ 'ಖಾಮೋಶ್' ಶತ್ರುಘ್ನ ಸಿನ್ಹಾ
ಆದರೆ, ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟನೆ ನೀಡಲು ಮುಂದಾದ ಶತ್ರುಘ್ನ ಸಿನ್ಹಾ ಅವರು, ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಅವರಂಥ ಸ್ವಾತಂತ್ರ್ಯ ಯೋಧರ ಹೆಸರು ತೆಗೆದುಕೊಳ್ಳುವಾಗ ಮೌಲಾನಾ ಆಝಾದ್ ಹೆಸರು ಹೇಳುವ ಬದಲು ಬಾಯಿತಪ್ಪಿನಿಂದ ಮೊಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಹೇಳಿದೆ. ಈ ಹೇಳಿಕೆಯ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದಿದ್ದಾರೆ.
ಮೋದಿಯವರಿಗೆ ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿಲ್ಲ:ಶತ್ರುಘ್ನ ಸಿನ್ಹಾ
ಈ ಪ್ರಮಾದಕ್ಕಾಗಿ ವಿಷಾದವನ್ನಾಗಲಿ, ಕ್ಷಮೆಯನ್ನಾಗಲಿ ಕೇಳುವ ಪ್ರಶ್ನೆಯೇ ಇಲ್ಲ. ಆದರೆ, ನನ್ನ ವಿರುದ್ಧ ಏನಾದರೂ ವಿವಾದ ಸೃಷ್ಟಿಸುತ್ತಲೇ ಇರುವ ಎಲೆಕ್ಟ್ರಾನಿಕ್ ಮಾಧ್ಯಮಗಳು ಇದನ್ನು ಅಗತ್ಯಕ್ಕಿಂತ ದೊಡ್ಡದಾಗಿ ಮಾಡಿವೆ. ಇಲ್ಲಿ ಯಾವುದೇ ವಕ್ತಾರ ಸ್ಪಷ್ಟನೆ ನೀಡುತ್ತಿಲ್ಲ, ಸ್ವತಃ ನಾನೇ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಇಷ್ಟು ಸಣ್ಣ ಸಂಗತಿಗಾಗಿ ವಿಷಾದ ಏಕೆ ವ್ಯಕ್ತಪಡಿಸಬೇಕು ಎಂದು ಮಾಧ್ಯಮದವರನ್ನೇ ಶಾಟ್ ಗನ್ ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ.