''ಹನುಮಾನ್ ಚಾಲೀಸಾ ಪಠಣ ಮಾಡಿ, ವೈರಸ್ ಮುಕ್ತರಾಗಿ''
ಭೋಪಾಲ್, ಜುಲೈ 26: ಹಪ್ಪಳ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಕೊರೊನಾವೈರಸ್ ಮುಕ್ತರಾಗಿ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಕರೆ ನೀಡಿದ್ದು ನೆನಪಿರಬಹುದು. ಇದೇ ರೀತಿ ಅನೇಕ ರಾಜಕಾರಣಿಗಳು ಅವೈಜ್ಞಾನಿಕ ವಿಧಾನಗಳನ್ನು ಬಳಸಲು ಜನತೆಗೆ ಕರೆ ನೀಡಿ ನಗೆಪಾಟಲಿಗೆ ಒಳಗಾಗಿದ್ದಾರೆ. ಕೆಲವರು ದೇವರನ್ನು ಮುಂದಿಟ್ಟುಕೊಂಡು ಜನರ ಓಲೈಕೆಗೆ ಮುಂದಾಗಿದ್ದಾರೆ.
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕೂಡಾ ಇಂಥ ಹೇಳಿಕೆ ನೀಡಿದ್ದಾರೆ. ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ, ಕೊರೊನಾವೈರಸ್ ಓಡಿಸಿ ಎಂದು ಕರೆ ನೀಡಿದ್ದಾರೆ.
ವೈದ್ಯರು, ಸಂಶೋಧಕರನ್ನು ಮೀರಿಸುತ್ತದೆ ರಾಜಕಾರಣಿಗಳ ಕೊವಿಡ್ ಲಸಿಕೆ!
ಭೋಪಾಲ್ ನಲ್ಲಿ ಜುಲೈ 24ರಿಂದ ಆಗಸ್ಟ್ 4ರ ತನಕ ಪ್ರತಿದಿನ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕೊರೊನಾವೈರಸ್ ದೂರಾಗಿಸಲು ಇದೊಂದೆ ಮಾರ್ಗ. ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಲಿದೆ. ಆಧ್ಯಾತ್ಮಿಕ ಮಾರ್ಗದಲ್ಲಿ ನಮ್ಮ ಪ್ರಯತ್ನ ನಾವು ಮಾಡೋಣ, ದೇಶದ ಹಿಂದುಗಳೆಲ್ಲ ಒಕ್ಕೊರಲಿನಿಂದ ಹನುಮಾನ್ ಚಾಲೀಸಾ ಪಠಣ ಮಾಡಿದರೆ ಕೊರೊನಾ ಮುಕ್ತರಾಗಲು ಸಾಧ್ಯ ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.
2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರು ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಹೆಮ್ಮೆ, ಹೇಮಂತ್ ಕರ್ಕರೆ ಮತ್ತು ನಾಥೂ ರಾಮ್ ಗೊಡ್ಸೆ ಬಗ್ಗೆ ನೀಡಿದ ಹೇಳಿಕೆಯೂ ವಿವಾದಕ್ಕೀಡಾಗಿತ್ತು.