ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಸಿಎಂ ಕಮಲನಾಥ್ ಕೌಂಟರ್
ಭೂಪಾಲ್, ಮಾರ್ಚ್.04: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳ ನಂತರದಲ್ಲಿ ರಾಜ್ಯಸಭೆ ಚುನಾವಣೆ ಹೊಸ್ತಿಲಲ್ಲೇ ಆಪರೇಷನ್ ಕಮಲಕ್ಕೆ ಮರುಜೀವ ಬಂದಿದೆ. ಕಾಂಗ್ರೆಸ್ ಶಾಸಕರ ನಡೆಯಿಂದ ರಾಜಕೀಯ ವಲಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ.
ಎರಡು ರಾಜ್ಯಸಭಾ ಸ್ಥಾನಗಳನ್ನು ಜಯಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ತಂತ್ರ ರೂಪಿಸಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ 10 ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆಂದು ಹೇಳಲಾಗುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಶಾಸಕರಿಗೆ ಸಿಎಂ ಕಮಲನಾಥ್ ವಿಪ್ ಜಾರಿಗೊಳಿಸಿದ್ದಾರೆ.
ಆಪರೇಷನ್ ಕಮಲ; ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮ!
ಆಪರೇಷನ್ ಕಮಲಕ್ಕೆ ಕೌಂಟರ್ ಕೊಡಲು ಮುಖ್ಯಮಂತ್ರಿ ಕಮಲನಾಥ್ ತಂತ್ರ ರೂಪಿಸಲಾಗಿತ್ತು. ಬಿಜೆಪಿ ಶಾಸಕರನ್ನು ಕಾಂಗ್ರೆಸ್ ನತ್ತ ಸೆಳೆಯಲು ಪ್ಲಾನ್ ಮಾಡಲಾಗಿದ್ದು, ಆ ನಿಟ್ಟಿನಲ್ಲಿ ಯಶಸ್ವಿಯೂ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಆಪರೇಷನ್ ಕಮಲ V/S ಆಪರೇಷನ್ ಪಂಜಾ
ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಬಲೆ ಬೀಸಿದ್ದರೆ, ಇದಕ್ಕೆ ಪ್ರತಿತಂತ್ರವಾಗಿ ಬಿಜೆಪಿಯ ಶಾಸಕರಿಗೆ ಕಾಂಗ್ರೆಸ್ ಕೈ ಬೀಸಿ ಕರೆಯುತ್ತಿದೆ. ಆಪರೇಷನ್ ಕಮಲಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಆಪರೇಷನ್ ಪಂಜಾ ನಡೆಸುತ್ತಿದೆ. ಆ ಮೂಲಕ ವಿರೋಧಿ ಗುಂಪಿನ ಶಾಸಕರನ್ನು ಸೆಳೆಯಲು ಸ್ಕೆಚ್ ಹಾಕಲಾಗಿದೆ.
ಬಿಜೆಪಿಯ 6 ಶಾಸಕರಿಗೆ ಕಾಂಗ್ರೆಸ್ ಸಂಪರ್ಕ
ಮಧ್ಯಪ್ರದೇಶದ 6 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ದೆಹಲಿಯಲ್ಲಿ ಇರುವ ಆರು ಮಂದಿ ಶಾಸಕರ ಪೈಕಿ ಶರದ್ ಕೋಲ್ ಮತ್ತು ನಾರಾಯಣ ತ್ರಿಪಾಠಿ ಎಂಬುವವರ ಜೊತೆ ಸಿಎಂ ಕಮಲನಾಥ್ ನೇರ ಸಂಪರ್ಕದಲ್ಲಿದ್ದಾರೆ. ಉಳಿದಂತೆ ಚಂದ್ಲಾ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ಪ್ರಜಾಪತಿ, ಜೈತ್ ಪುರ್ ಕ್ಷೇತ್ರದ ಬಿಜೆಪಿ ಶಾಸಕ ಮನೀಷ್ ಸಿಂಗ್, ತಿಕಂಘರ್ ಕ್ಷೇತ್ರದ ಬಿಜೆಪಿ ಶಾಸಕ ರಾಕೇಶ್ ಗಿರಿ ಮತ್ತು ಬಂದ್ವಘರ್ ಕ್ಷೇತ್ರದ ಬಿಜೆಪಿ ಶಾಸಕ ಶಿವನಾರಾಯಣ ಸಿಂಗ್ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಶಾಸಕರಿಗೆ 25 ಕೋಟಿ ರೂಪಾಯಿ ಹಣದ ಆಮಿಷ
ಇನ್ನು, ಕಾಂಗ್ರೆಸ್ ನಿಂದ ಬಿಜೆಪಿಗೆ ತೆರಳುವ ಶಾಸಕರಿಗೆ 25 ಕೋಟಿ ರೂಪಾಯಿ ಹಣದ ಆಮಿಷವೊಡ್ಡಲಾಗಿದೆ ಎಂದು ಸಬಲ್ ಘರ್ ಶಾಸಕ ಬೈಜನಾಥ್ ಕುಶ್ವಾ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದರ ಜೊತೆಗೆ 25 ಕೋಟಿ ರೂಪಾಯಿ ನೀಡುವುದಾಗಿ ತಮಗೆ ಬಿಜೆಪಿಯಿಂದ ಆಮಿಷ ಬಂದಿತ್ತು ಎಂದು ಕುಶ್ವಾ ದೂರಿದ್ದಾರೆ. ಬಿಜೆಪಿಯು ಕಪ್ಪುಹಣವನ್ನು ಬಳಸಿಕೊಂಡು ಆಪರೇಷನ್ ಕಮಲ ನಡೆಸುತ್ತಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸಲಿದೆ ಎಂದು ಸಚಿವ ಬಿ.ಎಸ್.ರಥೋರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಎಸ್ ಪಿ ಮತ್ತು ಬಿಎಸ್ ಪಿ ಶಾಸಕರಿಗೂ ಬಿಜೆಪಿ ಬಲೆ"
ಕಾಂಗ್ರೆಸ್ ಅಷ್ಟೇ ಅಲ್ಲದೇ, ಮಧ್ಯಪ್ರದೇಶದಲ್ಲಿರುವ ಎಸ್ಪಿ ಮತ್ತು ಬಿಎಸ್ಪಿ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು ಸ್ಕೆಚ್ ಹಾಕಿದೆ. ಆಪರೇಷನ್ ಕಮಲಕ್ಕಾಗಿ ಇಬ್ಬರು ಶಾಸಕರನ್ನು ಬಿಜೆಪಿ ಶಾಸಕ ಭೂಪೇಂದರ್ ಸಿಂಗ್ ನವದೆಹಲಿಗೆ ಕರೆದೊಯ್ದಿದ್ದಾರೆ. ಬಿಎಸ್ ಪಿ ಶಾಸಕ ರಾಮಬಾಯ್ ಮನವೊಲಿಕೆಗೆ ಕಸರತ್ತು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.