ಮಹಾಕಾಲೇಶ್ವರನಿಗೆ ಪೂಜೆ ಸಲ್ಲಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ
ಉಜ್ಜೈನ್ (ಮಧ್ಯಪ್ರದೇಶ), ಮೇ 13: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಪ್ರಸಿದ್ಧ ಮಹಾಕಾಲೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಉಜ್ಜೈನ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರೋಡ್ ಶೋ ನಡೆಸಿದರು. ಮೇ ಹತ್ತೊಂಬತ್ತನೇ ತಾರೀಕು ಇಲ್ಲಿ ಮತದಾನ ನಡೆಯಲಿದ್ದು, ಇಪ್ಪತ್ಮೂರಕ್ಕೆ ಫಲಿತಾಂಶ ಹೊರಬೀಳಲಿದೆ.
ನನ್ನ ಜೀವನದಲ್ಲಿ ಇಂತಹ ಹೇಡಿ, ದುರ್ಬಲ ಪ್ರಧಾನಿ ನೋಡಿಲ್ಲ ಎಂದ ಪ್ರಿಯಾಂಕಾ ಗಾಂಧಿ ವಾದ್ರಾ
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ಕೇಂದ್ರದ ಮಾಜಿ ಸಚಿವ ಸುರೇಶ್ ಪಚೌರಿ ಮತ್ತು ಇತರ ನಾಯಕರು ಆಕೆಯ ಜತೆಗೆ ದೇವಾಲಯಕ್ಕೆ ತೆರಳಿದ್ದರು. ಪ್ರಿಯಾಂಕಾ ಕೆಂಪು ಸೀರೆ ಉಟ್ಟಿದ್ದರೆ, ಆಕೆ ಪಕ್ಕದಲ್ಲಿ ಇದ್ದ ಕಮಲ್ ನಾಥ್ ಒಟ್ಟಾರೆ ಕೇಸರಿ ದಿರಿಸು ಧರಿಸಿದ್ದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪ್ರಿಯಾಂಕಾ ಗಾಂಧಿ ಒಂದು ಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಆ ನಂತರ ಅವರು ನಡೆಸಿದ ರೋಡ್ ಶೋಗೆ ಭಾರೀ ಬೆಂಬಲ ವ್ಯಕ್ತವಾಯಿತು ಎಂದು ಕಾಂಗ್ರೆಸ್ ರಾಜ್ಯ ವಕ್ತಾರರಾದ ಶೋಭಾ ಓಜಾ ತಿಳಿಸಿದ್ದಾರೆ. ಕಾಂಗ್ರೆಸ್ ನಿಂದ ಉಜ್ಜೈನ್ ನಲ್ಲಿ ಮಾಜಿ ಶಾಸಕ ಬಾಬುಲಾಲ್ ಮಾಲವೀಯ ಕಣದಲ್ಲಿ ಇದ್ದರೆ, ಬಿಜೆಪಿಯಿಂದ ಅನಿಲ್ ಫಿರೋಜಿಯಾ ಇದ್ದಾರೆ.
ಉತ್ತರಪ್ರದೇಶದ ಪೂರ್ವ ಭಾಗದ ಉಸ್ತುವಾರಿಯನ್ನು ಪ್ರಿಯಾಂಕಾ ಗಾಂಧಿ ವಹಿಸಿಕೊಂಡ ನಂತರ ಅವರ ರಾಜಕೀಯ ಜೀವನದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದಕ್ಕೂ ಮುನ್ನ ಅವರು ತಮ್ಮ ಕುಟುಂಬದ ಪರವಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು ಮತ್ತು ಪಕ್ಷಕ್ಕೆ ಸಲಹೆಗಾರ್ತಿಯಾಗಿ ಅಧಿಕೃತ ಹುದ್ದೆಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದರು.
ಮೋದಿಗೆ ದೆಹಲಿ ಹುಡುಗಿಯ ಓಪನ್ ಚಾಲೆಂಜ್ ಎಂದ ಪ್ರಿಯಾಂಕಾ
ರೂಪಿನಲ್ಲಿ ತನ್ನ ಅಜ್ಜಿ ಇಂದಿರಾ ಗಾಂಧಿ ಅವರನ್ನು ಹೋಲುವ ಪ್ರಿಯಾಂಕಾ ಗಾಂಧಿ ಅವರಿಗೆ ಜನರನ್ನು ಆಕರ್ಷಿಸುವ ಶಕ್ತಿ ಇದೆ. ಈ ಬಾರಿಯ ಚುನಾವಣೆಯಲ್ಲಿ ಆರ್ಥಿಕತೆ ಮತ್ತು ಉದ್ಯೋಗದ ವಿಷಯವನ್ನು ಆಧಾರವಾಗಿ ಇಟ್ಟುಕೊಂಡು, ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.