'ಭಿಕ್ಷಾಟನೆ' ವೃತ್ತಿ ಮಾಡಿಕೊಂಡಿದ್ದಾಕೆ ಇದೀಗ ಸಂಸದೆ!
ಭಾರತದ ನಾಗರಿಕರಾಗಿದ್ದರೆ, ವಯಸ್ಸಿನ ಮಿತಿಯನ್ನು ದಾಟಿದ್ದರೆ, ಚುನಾವಣಾ ಆಯೋಗದಿಂದ ಅನರ್ಹರಾಗಿರದಿದ್ದರೆ ಭಾರತದಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಈ ಚುನಾವಣೆಯಲ್ಲಿ ಹಣವಿಲ್ಲದವನು ಗೆದ್ದಿದ್ದಾನೆ, ಕೋಟ್ಯಧಿಪತಿಯು ಮಣ್ಣು ಮುಕ್ಕಿದ್ದಾನೆ.
ಲೋಕಸಭೆ ಚುನಾವಣೆಯಲ್ಲಿ ಅಆಇಈ ಬರೆಯಲು ಬಾರದವರಿಂದ ಹಿಡಿದುಕೊಂಡು ಸ್ನಾತಕೋತ್ತರ ಪದವಿ ಗಳಿಸಿದವರು, ಉನ್ನತ ಹುದ್ದೆ ಅಲಂಕರಿಸಿದ್ದವರು, ವೈದ್ಯರು, ಇಂಜಿನಿಯರುಗಳು, ಐಎಎಸ್ ಪಾಸ್ ಮಾಡಿದವರು, ಎಂಬಿಎ ಮಾಡಿದವರು, ವಿದೇಶಗಳಲ್ಲಿ ವ್ಯಾಸಂಗ ಓದಿದವರು ಕೂಡ ಚುನವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ಸ್ಪರ್ಧಿಸಿದವರಲ್ಲಿ ಹಲವರು ರೈತರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಕರು, ಉದ್ಯಮಿಗಳು, ಕಾಂಟ್ರಾಕ್ಟರುಗಳು, ರಾಜಕಾರಣಿಗಳು, ಸ್ವಯಂಉದ್ಯೋಗ ಮಾಡುತ್ತಿರುವವರು, ಕಟ್ಟಡ ನಿರ್ಮಾತೃಗಳು, ಪಿಂಚಣಿದಾರರು, ನಟರು, ಗೃಹಿಣಿಯರು, ಬ್ಯೂಟಿಷಿಯನ್ ಗಳು, ನಿವೃತ್ತ ಉದ್ಯೋಗಿಗಳು... ಹೀಗೆ ತರಹೇವಾರಿ ಜನರು ಅದೃಷ್ಟ ಪರೀಕ್ಷೆಯಲ್ಲಿ ಗೆದ್ದಿದ್ದಾರೆ.
ಅಂದು ಹಾಲಿನ ವ್ಯಾಪಾರಿ, ಇಂದು ಕೋಲಾರದ ಬಿಜೆಪಿ ಸಂಸದ!
ಇದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ. ಆದರೆ, ಇಂಥವರ ನಡುವೆ ತಾನು 'ಭಿಕ್ಷುಕಿ' ಎಂದು ಹೇಳಿಕೊಂಡು ಚುನಾವಣೆಗೆ ನಿಂತಿದ್ದಲ್ಲದೆ, ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಯನ್ನು ಮಣ್ಣುಮುಕ್ಕಿಸಿದ್ದಾರೆ ಎಂದರೆ ಅಚ್ಚರಿ ಪಡದಿರಲು ಸಾಧ್ಯವೆ? ಅವರಾರೆಂದು ಮುಂದೆ ಓದಿ.
ಪ್ರಗ್ಯಾ ಸಿಂಗ್ ವೃತ್ತಿ ಭಿಕ್ಷಾಟನೆ
ಆ ವ್ಯಕ್ತಿ ಮತ್ತಾರೂ ಅಲ್ಲ, ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ, ನಂತರ ಕೋರ್ಟಿನಿಂತ ಖುಲಾಸೆಯೂ ಆಗಿ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಚ್ಚರಿ ಮೂಡಿಸಿದ ಬಿಜೆಪಿ, 49 ವರ್ಷದ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್. ಯಸ್, ಅವರು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ತಮ್ಮ ಉದ್ಯೋಗವನ್ನು 'ಭಿಕ್ಷಾಟನ' ಎಂದು ನಮೂದಿಸಿಕೊಂಡಿದ್ದಾರೆ. ಗೆಲ್ಲ 542 ಸಂಸದರಲ್ಲಿ ತಮ್ಮ ವೃತ್ತಿ ಭಿಕ್ಷಾಟನ ಎಂದು ಹೇಳಿಕೊಂಡವರು ಇವರೊಬ್ಬರೇ. ಬಹುಶಃ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಸಾವಿರಾರು ಅಭ್ಯರ್ಥಿಗಲ್ಲಿ ತಮ್ಮ ವೃತ್ತಿ ಭಿಕ್ಷಾಟನ ಎಂದು ನಮೂದಿಸಿದವರಲ್ಲಿ ಇವರೊಬ್ಬರೇ ಇರಬಹುದು. ತಾವು ಸಾಧ್ವಿ ಆಗಿರುವುದರಿಂದ ವೃತ್ತಿಯನ್ನು ಭಿಕ್ಷಾಟನೆ ಎಂದು ಬರೆದುಕೊಂಡಿದ್ದಾರೆ.
ಪ್ರಗ್ಯಾ ಸ್ನಾತಕೋತ್ತರ ಪದವೀಧರೆ
ಸಾಧ್ವಿ ಪ್ರಗ್ಯಾ ಸಿಂಗ್ ಅವರು ತಮ್ಮ ವಿದ್ಯಾರ್ಹತೆಯನ್ನು ಸ್ನಾತಕೋತ್ತರ ಪದವಿ (ಕಲೆ) ಎಂದು ನಮೂದಿಸಿದ್ದಾರೆ. ಸಾಧ್ವಿ ಪ್ರಗ್ಯಾ ಸಿಂಗ್ ಅವರು 61.54ರಷ್ಟು ಶೇಕಡಾವಾರು ಮತಗಳನ್ನು, ಅಂದರೆ 866,482 ರಷ್ಟು ಮತ ಪಡೆದರೆ, ಅವರ ಸಮೀಪದ ಸ್ಪರ್ಧಿ ದಿಗ್ವಿಜಯ್ ಸಿಂಗ್ ಅವರು ಶೇ.35.63ರಷ್ಟು, ಅಂದರೆ 501,660. ಪ್ರಗ್ಯಾ ಅವರ ಮೇಲೆ ಮಾಲೇಗಾಂವ್ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಆರೋಪವಿದ್ದಿದ್ದರೂ, ಅವರ ಮೇಲೆಯೇ ನಂಬಿಕೆ ಇಟ್ಟ ಜನರು ಅವರನ್ನು ಭೋಪಾಲ್ ಕ್ಷೇತ್ರದಲ್ಲಿ 364,822 ಮತಗಳ ಅಂತರದಿಂದ ಭರ್ಜರಿಯಾಗಿ ಗೆಲ್ಲಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೇ ಸೀಟು. ಇದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ ನಕುಲ್ ಕಮಲ್ ನಾಥ್ ಅವರು ಚಿಂದ್ ವಾಡಾದಿಂದ ಗೆದ್ದಿದ್ದಾರೆ.
ವಿಧಾನಸಭೆಯಲ್ಲಿ ಗೆದ್ದಿದ್ದನ್ನು ಲೋಕಸಭೆಯಲ್ಲಿ ಕಳೆದುಕೊಂಡ ಕಾಂಗ್ರೆಸ್
ನಾಥೂರಾಮ್ ದೇಶಭಕ್ತ ಎಂದಿದ್ದ ಸಾಧ್ವಿ
ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಹೇಳಿ ವಿವಾದದ ಅಲೆಯೆಬ್ಬಿಸಿದ್ದ ಪ್ರಗ್ಯಾ ಸಿಂಗ್ ಅವರನ್ನು ಎಂದೂ ಕ್ಷಮಿಸುವುದಿಲ್ಲ ಎಂದು ಸ್ವತಃ ನರೇಂದ್ರ ಮೋದಿಯವರೇ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಪ್ರಗ್ಯಾ ಅವರು, ತಾವು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವುದಾಗಿ ಸ್ಪಷ್ಟನೆ ನೀಡಿ, ಕ್ಷಮೆಯನ್ನೂ ಕೋರಿದ್ದರು. ಒಬ್ಬ ಭಯೋತ್ಪಾದಕಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಹುಯಿಲೆಬ್ಬಿಸಿದ್ದವು. ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಪ್ರಗ್ಯಾ ಸಿಂಗ್ ಅವರು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಸದೆಬಡಿದಿದ್ದಾರೆ.
ಆಗ ಪೊಲೀಸ್ ಅಧಿಕಾರಿ ಈಗ ಸಂಸದ, ಹಿರಿಯ ಅಧಿಕಾರಿಗಳಿಂದ ಸೆಲ್ಯೂಟ್
ದಿಗ್ವಿಜಯಕ್ಕಾಗಿ ದಿಗ್ವಿಜಯ್ ಹೋಮಹವನ
ದಿಗ್ವಿಜಯ್ ಸಿಂಗ್ ಅವರು ವಿಜಯಕ್ಕಾಗಿ ನಾನಾ ಕಸರತ್ತುಗಳನ್ನು ಮಾಡಿದ್ದರು. ಭೋಪಾಲ್ ನಲ್ಲಿ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ನೂರಾರು ನಾಗಾ ಸಾಧುಗಳನ್ನು ಸೇರಿಸಿಕೊಂಡು ಕಾವಿಧಾರಿಗಳ ಸಮ್ಮುಖದಲ್ಲಿ ಒಂದಿಡೀ ದಿನ ಹೋಮ ಹವನದಲ್ಲಿ ಪಾಲ್ಗೊಂಡಿದ್ದರು. ಅನುಮತಿಯಿಲ್ಲದೆ ಹೋಮ ಹವನ ನಡೆಸಿದ್ದಕ್ಕಾಗಿ ಕಂಪ್ಯೂಟರ್ ಬಾಬಾನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಇಷ್ಟೆಲ್ಲ ಆದರೂ 'ಭಿಕ್ಷಾಟನೆ' ತನ್ನ ವೃತ್ತಿ ಎಂದ ಹೇಳಿಕೊಂಡಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ದಿಗ್ವಿಜಯ್ ಸಿಂಗ್ ಅವರು ದಿಗ್ವಿಜಯ ಸಾಧಿಸುವ ಬದಲು ದಿಗ್ಸೋಲನ್ನು ಕಂಡಿದ್ದಾರೆ.