ಫೋಟೊ, ಪೂಜೆಗಾಗಿ 2 ಗಂಟೆ ಆಕ್ಸಿಜನ್ ಟ್ಯಾಂಕರ್ ತಡೆಹಿಡಿದ ರಾಜಕೀಯ ಮುಖಂಡರು!
ಇಂದೋರ್, ಏಪ್ರಿಲ್ 19: ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರು ಹಾಗೂ ಇತರೆ ರೋಗಿಗಳಿಗೆ ಆಮ್ಲಜನಕದ ಕೊರತೆ ಎದುರಾಗಿ ಸಾವಿನ ಪ್ರಕರಣಗಳು ಉಂಟಾಗುತ್ತಿದ್ದರೆ, ಆಮ್ಲಜನಕದ ವಿಚಾರದಲ್ಲಿಯೂ ನಮ್ಮ ರಾಜಕೀಯ ಧುರೀಣರು ಲಾಭ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್ಗೆ ಆಮ್ಲಜನಕದ ಕೊರತೆಯನ್ನು ನೀಗಿಸಲು 30 ಟನ್ನಷ್ಟು ಆಮ್ಲಜನಕವನ್ನು ಟ್ಯಾಂಕರ್ ಒಂದರಲ್ಲಿ ಗುಜರಾತ್ನಿಂದ ರವಾನಿಸಲಾಗಿತ್ತು.
ಆದರೆ ನಗರದಲ್ಲಿ ತುರ್ತು ಸಂದರ್ಭದಲ್ಲಿ ಸರಿಯಾಗಿ ಆಮ್ಲಜನಕ ಸಿಗದೆ ಆಸ್ಪತ್ರೆಗಳು ಪರದಾಡುತ್ತಿದ್ದರೆ ರಾಜಕೀಯ ಮುಖಂಡರು ಆಮ್ಲಜನಕವನ್ನು ಅನ್ಲೋಡ್ ಮಾಡಲು ಬಿಡದೆ ಅದರ ಎದುರು ಫೋಟೊ ತೆಗೆಸಿಕೊಳ್ಳುವುದಕ್ಕಾಗಿ ಎರಡು ಗಂಟೆ ಸಮಯ ವ್ಯರ್ಥ ಮಾಡಿಸಿದ್ದಾರೆ.
ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿಡದ 5 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್
ದುರಂತವೆಂದರೆ ಆಮ್ಲಜನಕವನ್ನು ತುರ್ತಾಗಿ ತಲುಪಿಸುವ ಜವಾಬ್ದಾರಿ ಹೊಂದಿದ್ದ ಟ್ಯಾಂಕರ್ ಚಾಲಕ, ಶನಿವಾರ ರಾತ್ರಿ 1 ಗಂಟೆಗೆ ಜಾಮ್ನಗರದಿಂದ 700 ಕಿಮೀ ದೂರ ಚಾಲನೆ ಮಾಡಿಕೊಂಡು ಬಂದಿದ್ದರು. ಈ ನಡುವೆ ಕೇವಲ ಮೂರು ಗಂಟೆ ನಿದ್ದೆ ಮತ್ತು ಒಮ್ಮೆ ಮಾತ್ರ ಊಟಕ್ಕಾಗಿ ವಾಹನ ನಿಲ್ಲಿಸಿದ್ದರು.
ಆದರೆ, ಸ್ಥಳೀಯ ಪಿಲ್ಲಿಂಗ್ ಸ್ಟೇಷನ್ ತಲುಪುವ ಮೊದಲೇ ವಾಹನವನ್ನು ಎರಡು ಕಡೆ ತಡೆಯಲಾಗಿತ್ತು. ಚಂದನ್ ನಗರ್ ಸ್ಕ್ವೇರ್ ಮತ್ತು ಎಂಆರ್-10ರಲ್ಲಿ ಟ್ಯಾಂಕರ್ ಅನ್ನು ನಿಲ್ಲಿಸಿ ರಾಜಕೀಯ ಧುರೀಣರು ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.
'ಕೋವಿಡ್ ಸಮಯದಲ್ಲಿ ಆಕ್ಸಿಜನ್ ಎಷ್ಟು ಅಗತ್ಯ ಎನ್ನುವುದು ಅರಿವಿದ್ದ ಕಾರಣ ನಾನು ದಾರಿಯುದ್ದಕ್ಕೂ ಕಣ್ಣುಮಿಟುಕಿಸದಂತೆ ಬಂದಿದ್ದೆ. ಆದರೆ ಮಧ್ಯಪ್ರವೇಶಿಸಿ ಸ್ಥಳಕ್ಕೆ ತಲುಪುವ ಮುನ್ನ ಎರಡು ಗಂಟೆ ವ್ಯರ್ಥ ಮಾಡಿಸಿದ್ದಾರೆ' ಎಂದು ಚಾಲಕ ಶೈಲೇಂದ್ರ ಕುಶ್ವಾಹ್ ಹೇಳಿದ್ದಾರೆ.
What is the game forget Delhi then pick.up any BJP ruled state and see what's happening .how long can you hold your eye shut..this is Indore where for 2 hrs oxygen tanker was held back during these hours for pooja& photop... pic.twitter.com/fi5oDuSbmp
— Sapna hariharan (@chimni_sapna) April 19, 2021
ಚಂದನ್ ನಗರ್ ಸ್ಕ್ವೇರ್ನಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಗೌರವ್ ರಂದಿವೆ ನೇತೃತ್ವದಲ್ಲಿ ಮೊದಲು ಟ್ಯಾಂಕರ್ ಅನ್ನು ತಡೆದು ನಿಲ್ಲಿಸಿದ ಕಾರ್ಯಕರ್ತರನ್ನು ಕೆಲ ಸಮಯದ ಬಳಿಕ ಸಚಿವ ತುಳಸಿ ಸಿಲಾವತ್ ಸೇರಿಕೊಂಡಿದ್ದರು. ಈ ಯೋಜನೆ ಬಗ್ಗೆ ಮೊದಲೇ ಮಾಧ್ಯಮದವರಿಗೆ ಮಾಹಿತಿ ನೀಡಲಾಗಿತ್ತು. ಟ್ಯಾಂಕರ್ ಎದುರು ಫೋಟೊ, ವಿಡಿಯೋಗಳನ್ನು ತೆಗೆಸಿಕೊಂಡ ಮುಖಂಡರು, ಬಳಿಕ ಭಾಷಣ ಮಾಡಿದರು. ಕಲೆಕ್ಟರ್ ಮನೀಶ್ ಸಿಂಗ್ ನೇತೃತ್ವದ ಅಧಿಕಾರಿಗಳ ತಂಡ, ಟ್ಯಾಂಕರ್ ಮುಂದೆ ಸಾಗುವಂತೆ ವ್ಯವಸ್ಥೆ ಮಾಡಿತು.
ಬಳಿಕ ಎಂಆರ್-10ರಲ್ಲಿ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ, ಶಾಸಕರಾದ ರಮೇಶ್ ಮೆಂಡೊಲಾ ಮತ್ತು ಆಕಾಶ್ ವಿಜಯವರ್ಗಿಯ ಟ್ಯಾಂಕರ್ ಅನ್ನು ಸ್ವಾಗತಿಸಿ, ಅದಕ್ಕೆ ಬಲೂನ್ಗಳಿಂದ ಅಲಂಕಾರ ಮಾಡಿದರು. ಅಷ್ಟೇ ಅಲ್ಲ, ಟ್ಯಾಂಕರ್ಗೆ ಪೂಜಾರಿಯಿಂದ ಪೂಜೆಯೂ ನೆರವೇರಿತು. ಕೊನೆಗೂ ಟ್ಯಾಂಕರ್ ಎರಡು ಗಂಟೆ ತಡವಾಗಿ ಸ್ಥಳಕ್ಕೆ ತಲುಪಿತು. ಅಲ್ಲಿ ಆಕ್ಸಿಜನ್ ಅನ್ಲೋಡ್ ಮಾಡಲು ಇನ್ನೂ ಒಂದು ಗಂಟೆಯಷ್ಟು ಸಮಯ ಬೇಕಾಯಿತು.