ಝೊಮ್ಯಾಟೊ ಪ್ರಕರಣ: ಟ್ವಿಟ್ಟರ್ ಪೋಸ್ಟ್ ಗೆ ಪೊಲೀಸರಿಂದ ವಾರ್ನಿಂಗ್
ಭೊಪಾಲ್, ಆಗಸ್ಟ್ 01: ಪ್ರಸಿದ್ಧ ಫುಡ್ ಡೆಲಿವರಿ app ಝೊಮ್ಯಾಟೋ ನಿನ್ನೆಯಿಂದ ಭಾರೀ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ವ್ಯಕ್ತಿಯೊಬ್ಬರು ತಾವು ಆರ್ಡರ್ ಮಾಡಿದ್ದ ಖಾದ್ಯವನ್ನು ಡೆಲಿವರಿ ಮಾಡುತ್ತಿರುವ ಹುಡುಗ ಹಿಂದು ಮತೀಯನಲ್ಲ ಎಂಬುದು ತಿಳಿಯುತ್ತಿದ್ದಂತೆಯೇ ಆರ್ಡರ್ ಕ್ಯಾನ್ಸಲ್ ಮಾಡಿದ್ದು!
ಡೆಲಿವರಿ ಬಾಯ್ ಹಿಂದುವಲ್ಲ ಎಂಬ ಕಾರಣಕ್ಕೆ ತಾನು ರೈಡರ್ ಅನ್ನು ಬದಲಾಯಿಸುವಂತೆ ಝೊಮ್ಯಾಟೋ ಬಳಿ ಕೇಳಿದ್ದೆ. ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ಆದ್ದರಿಂದ ನಾನು ಆರ್ಡರ್ ಕ್ಯಾನ್ಸಲ್ ಮಾಡಿದೆ ಎಂದು ಅಮಿತ್ ಶುಕ್ಲಾ ಎಂಬ ಮಧ್ಯಪ್ರದೇಶದ ಜಬಲ್ಪುರದ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು.
ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ zomato ಕೊಟ್ಟ ಉತ್ತರಕ್ಕೆ ಫಿದಾ ಆಗಲೇಬೇಕು!
ಅವರ ಟ್ವೀಟ್ ಗೆ ಸಾಕಷ್ಟು ಪರ-ವಿರೋಧದ ಪ್ರತಿಕ್ರಿಯೆ ಹೊರಬಂದಿತ್ತು. ಈ ಕುರಿತು ಇದೀಗ ಅಮಿತ್ ಶುಕ್ಲಾ ಅವರಿಗೆ ಜಬಲ್ಪುರ ಪೊಲೀಸರು ಎಚ್ಚರಿಕೆ ನೀಡಿದ್ದು, "ಇನ್ನು ಆರು ತಿಂಗಳಲ್ಲಿ ಇಂಥ ಮತ್ತೊಂದು ವಿವಾದಾತ್ಮಕ, ಪ್ರಚೋದನಾಕಾರಿ ಹೇಳಿಕೆಯ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ವೀಟ್ ಮಾಡಿದ್ದೇ ಹೌದಾದರೆ ನಿಮ್ಮನ್ನು ಜೈಲಿಗೆ ಹಾಕುತ್ತೇವೆ" ಎಂದಿದ್ದಾರೆ.
"ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವಂಥ ಯಾವುದೇ ನಡವಳಿಕೆಯ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಪೊಲೀಸರು ಹೇಳಿದರು.
ಮುಸ್ಲಿಂ ಶಾಸಕನಿಗೆ ರಾಮಜಪ ಮಾಡಲು ಒತ್ತಾಯಿಸಿದ ಬಿಜೆಪಿ ಸಚಿವ
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದ ಝೊಮ್ಯಾಟೋ "ಆಹಾರಕ್ಕೆ ಧರ್ಮವಿಲ್ಲ. ಆಹಾರವೇ ಧರ್ಮ" ಎಂದು ಉತ್ತರಿಸಿದೆ. ಜೊತೆಗೆ ಝೊಮ್ಯಾಟೋ ಸಂಸ್ಥಾಪಕ ದೀಪೀಂದರ್ ಗೋಯಲ್ ಅವರು ಸಹ ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದು, "ನಾವು ಭಾರತ ಎಂಬ ಪರಿಕಲ್ಪನೆಯ ಬಗ್ಗೆ ಹೆಮ್ಮೆ ಹೊಂದಿದ್ದೇವೆ. ಹಾಗೆಯೇ ನಮ್ಮ ಪಾಲುದಾರರು ಮತ್ತು ಗ್ರಾಹಕರ ವೈವಿಧ್ಯತೆಯ ಬಗ್ಗೆಯೂ ನಮಗೆ ಗೌರವವಿದೆ. ಆದರೆ ನಮ್ಮ ಮೌಲ್ಯಗಳನ್ನು ಮರೆಮಾಚುವಂಥ ಯಾವುದೇ ವ್ಯವಹಾರವನ್ನೂ ಕೈಚೆಲ್ಲಲು ನಾವು ಯೋಚಿಸುವುದಿಲ್ಲ. ಅದಕ್ಕಾಗಿ ನಮಗೆ ಪಶ್ಚಾತ್ತಾಪವಿಲ್ಲ" ಎಂದಿದ್ದರು.