''ಕೊರೊನಾ 3ನೇ ಅಲೆ ತಡೆಯಲು ನಾಲ್ಕು ದಿನ ಯಜ್ಞ ಮಾಡಬೇಕು''
ಭೋಪಾಲ್, ಮೇ 12: ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವುದಕ್ಕೆ ಇಷ್ಟೆಲ್ಲಾ ಕಷ್ಟ ಪಡಬೇಕಿಲ್ಲ. ನಾಲ್ಕು ದಿನ ಯಜ್ಞ ಮಾಡಿದರೆ ಸಾಕು ಕೊರೊನಾ 3ನೇ ಅಲೆ ಬರುವುದಿಲ್ಲ ಎಂದು ಮಧ್ಯಪ್ರದೇಶದ ಸಚಿವೆ ಉಷಾ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೋವಿಡ್-19ಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ಅವರು ಸುದ್ದಿಯಾಗಿದ್ದಾರೆ.
ಭಾರತದಲ್ಲಿ 17.51 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ
ನಾಲ್ಕು ದಿನಗಳ ಕಾಲ ಯಜ್ಞ ನಡೆಸಿದರೆ ಕೋವಿಡ್-19 ಮೂರನೇ ಅಲೆ ಭಾರತವನ್ನು ತಲುಪಲು ಸಾಧ್ಯವಿಲ್ಲ. ಸದ್ಯ ಭಾರತದಲ್ಲಿ ಎರಡನೇ ಅಲೆ ಹಲವು ಸಮಸ್ಯೆ ಸೃಷ್ಟಿಸುತ್ತಿದೆ. ಎರಡನೇ ಅಲೆಯಿಂದ ಭಾರತ ನರಳುತ್ತಿದೆ. ಆರೋಗ್ಯ ಮೂಲ ಸೌಕರ್ಯ ವ್ಯವಸ್ಥೆಯನ್ನೇ ಅಲುಗಾಡಿಸಿದ್ದು, ಆರೋಗ್ಯ ಕಾರ್ಯಕರ್ತರ ಮೇಲೆ ಅಧಿಕ ಹೊರೆಯಾಗುತ್ತಿದೆ ಎಂದು ಸಚಿವೆ ಉಷಾ ಠಾಕೂರ್ ಹೇಳಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಶುದ್ಧೀಕರಣಕ್ಕಾಗಿ, ನಾಲ್ಕು ದಿನಗಳ ಕಾಲ ಯಜ್ಞವನ್ನು ಮಾಡಿ. ಇದನ್ನು ಯಜ್ಞ ಚಿಕಿತ್ಸೆ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ, ನಮ್ಮ ಪೂರ್ವಜರು ಸಾಂಕ್ರಾಮಿಕ ರೋಗಗಳನ್ನು ತೊಡೆದುಹಾಕಲು ಯಜ್ಞ ಚಿಕಿತ್ಸೆ ಮಾಡುತ್ತಿದ್ದರು. ಇದನ್ನು ಮಾಡುವುದರಿಂದ ಕೋವಿಡ್ ಮೂರನೇ ಅಲೆ ಭಾರತಕ್ಕೆ ಬರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಭಾರತದಲ್ಲಿ ಉತ್ತುಂಗಕ್ಕೇರಿದ ಕೋವಿಡ್ 19 ಪ್ರಕರಣ, 2 ಅಲೆ ಕಡಿಮೆಯಾಗುವ ನಿರೀಕ್ಷೆ
ತಜ್ಞರ ಪ್ರಕಾರ ಮೂರನೇ ಅಲೆ ಚಿಕ್ಕ ಮಕ್ಕಳಿಗೆ ಮಾರಕವಾಗಿದೆಯಂತೆ, ಇದಕ್ಕಾಗಿ ಮಧ್ಯಪ್ರದೇಶ ಸರ್ಕಾರವು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಾಂಕ್ರಾಮಿಕ ರೋಗವನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದು ಅವರು ಹೇಳಿದರು.