ವಯಸ್ಸಾದ ಮೇಲೆ ಸಾಯಲೇಬೇಕಲ್ಲ; ಸಚಿವರ ಆಘಾತಕಾರಿ ಉತ್ತರ
ಭೋಪಾಲ್, ಏಪ್ರಿಲ್ 15: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪುವವರ ಪ್ರಮಾಣ ಏರಿಕೆಯಾಗಿದ್ದು, ಈ ಕುರಿತ ಪ್ರಶ್ನೆಯೊಂದಕ್ಕೆ ಮಧ್ಯಪ್ರದೇಶ ಸಚಿವ ಪ್ರೇಮ್ ಸಿಂಗ್ ಪಟೇಲ್ ನೀಡಿರುವ ಉತ್ತರ ಅಸೂಕ್ಷ್ಮವಾಗಿದ್ದು, ಟೀಕೆ ವ್ಯಕ್ತವಾಗಿದೆ.
ಕೊರೊನಾ ಸೋಂಕಿನಿಂದ ಸಂಭವಿಸುತ್ತಿರುವ ಸಾವನ್ನು ಯಾರಿದಂದಲೂ ತಡೆಯಲು ಸಾಧ್ಯವಿಲ್ಲ. ವಯಸ್ಸಾಗುತ್ತಿರುವ ಜನರು ಸಾಯುತ್ತಿದ್ದಾರೆ. ವಯಸ್ಸಾದ ಮೇಲೆ ಸಾಯಲೇಬೇಕಲ್ಲ ಎಂದು ಪ್ರಶ್ನಿಸಿದ್ದಾರೆ. ಸಚಿವರು ನೀಡಿರುವ ಈ ಹೇಳಿಕೆಯ ವಿಡಿಯೋವನ್ನು ಎಎನ್ಐ ಪ್ರಕಟಿಸಿದೆ.
ಆಕ್ಸಿಜನ್ ಮಾಸ್ಕ್ ಕಿತ್ತುಹಾಕಿದ ವಾರ್ಡ್ ಬಾಯ್: ಕೋವಿಡ್ ರೋಗಿ ಸಾವು
"ಕೊರೊನಾ ಸೋಂಕಿನಿಂದಾಗಿ ಈ ಸಾವುಗಳು ಸಂಭವಿಸುತ್ತಿವೆ ಎಂಬುದನ್ನು ಒಪ್ಪುತ್ತೇನೆ. ಆದರೆ ಯಾರೂ ಈ ಸಾವನ್ನು ತಡೆಯಲು ಸಾಧ್ಯವಿಲ್ಲ. ನಾನೊಬ್ಬನೇ ಈ ಮಾತನ್ನು ಹೇಳುತ್ತಿಲ್ಲ. ಆದರೆ ಈ ಸೋಂಕಿನ ವಿರುದ್ಧ ಎಲ್ಲರೂ ಹೋರಾಡಲು ಸಹಕರಿಸಬೇಕಿದೆ" ಎಂದು ಹೇಳಿದ್ದಾರೆ.
"ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚಿಸಿದ್ದೇವೆ. ಜನರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವೈದ್ಯರನ್ನು ಭೇಟಿಯಾಗಬೇಕು. ನಾವು ವೈದ್ಯರನ್ನೂ ನಿಯೋಜಿಸಿದ್ದೇವಲ್ಲವೇ" ಎಂದಿದ್ದಾರೆ. ದಿನನಿತ್ಯ ಸೋಂಕಿನಿಂದ ಹಲವರು ಸಾಯುತ್ತಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ. ಈ ಸಾವಿನ ಬಗ್ಗೆ ಹೇಳುವುದಾದರೆ, ಕೆಲವರಿಗೆ ವಯಸ್ಸಾಗುತ್ತಿದೆ. ಈ ಕಾರಣಕ್ಕೇ ಸಾಯುತ್ತಿದ್ದಾರೆ. ವಯಸ್ಸಾದವರು ಸಾಯಲೇಬೇಕಲ್ಲವೇ ಎಂದು ಹೇಳಿದ್ದಾರೆ.
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಜಿಲ್ಲೆಯಲ್ಲಿ ಕೊರೊನಾ ಸಂಬಂಧಿ ವ್ಯವಸ್ಥೆಗಳ ಉಸ್ತುವಾರಿಯನ್ನು ಪಟೇಲ್ ಅವರಿಗೆ ವಹಿಸಿದ್ದರು. ಅವರೇ ಈ ರೀತಿ ಅಸೂಕ್ಷ್ಮವಾಗಿ ಮಾತನಾಡಿದ್ದಾರೆ ಎಂದು ಟೀಕೆ ವ್ಯಕ್ತಗೊಂಡಿದೆ.
#WATCH: MP Minister Prem Singh Patel speaks on deaths due to #COVID19. He says, "Nobody can stop these deaths. Everyone is talking about cooperation for protection from Corona...You said that many people are dying every day. People get old and they have to die." (14.04.2021) pic.twitter.com/os3iILZGyM
— ANI (@ANI) April 15, 2021
ಮಧ್ಯಪ್ರದೇಶದಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಅಂತ್ಯಸಂಸ್ಕಾರ ನಡೆಸುವುದೇ ಸವಾಲಾಗಿದೆ. "ಕೆಲವು ದಿನಗಳಿಂದ ಸಾವನ್ನಪ್ಪುವವರ ಸಂಖ್ಯೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಸುಮಾರು 200 ಮಂದಿಯನ್ನು ಹೂತಿದ್ದೇವೆ. ಜಾಗವೇ ಇಲ್ಲದಂತಾಗಿದೆ. ಇದೀಗ ಎರಡು ಕೆರೆ ಜಾಗವನ್ನು ನೀಡಲಾಗಿದೆ" ಎಂದು ಭೋಪಾಲದಲ್ಲಿನ ಭದ್ಬದಾ ವಿಶ್ರಾಮ್ ಘಾಟ್ನಲ್ಲಿನ ಕೆಲಸಗಾರರು ಹೇಳುತ್ತಾರೆ.
ಮಧ್ಯಪ್ರದೇಶದಲ್ಲಿ ಸೋಂಕಿನಿಂದಾಗಿ ಕಳೆದ 24 ಗಂಟೆಗಳಲ್ಲಿ 51 ಮಂದಿ ಸಾವನ್ನಪ್ಪಿದ್ದಾರೆ.