ಚಿನ್ನ, ಬೆಳ್ಳಿಯಲ್ಲ, ಈರುಳ್ಳಿ ಕಳುವಾಗಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕೇಸ್!
ಭೂಪಾಲ್, ಡಿಸೆಂಬರ್.04: ಈರುಳ್ಳಿ, ಈರುಳ್ಳಿ, ಈರುಳ್ಳಿ. ದೇಶದ ತುಂಬಲ್ಲ ಜನರ ಬಾಯಲ್ಲಿ ಈರುಳ್ಳಿಯದ್ದೇ ಜಪ. ಬೆಳಗಾದರೂ ಈರುಳ್ಳಿ ಸಂಜೆಯಾದರೂ ಈರುಳ್ಳಿ ಬೆಲೆ ಮೇಲೆಯೇ ಜನರು ಕಣ್ಣು ಇರಿಸಿರುತ್ತಾರೆ. ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ.
ಇದರ ಮಧ್ಯೆ ಬೆಳೆದ ಈರುಳ್ಳಿಗೆ ಒಳ್ಳೆ ಬೆಲೆ ಬಂದಿದೆ. ಈಗಲೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರಾಯಿತು ಎಂದು ಕನಸು ಕಟ್ಟಿಕೊಂಡಿದ್ದ ರೈತನಿಗೆ ರಾತ್ರೋರಾತ್ರಿ ಶಾಕ್ ಹೊಡೆದಿದೆ. ರೈತನು ಸಂಗ್ರಹಿಸಿಟ್ಟಿದ್ದ ಈರುಳ್ಳಿ ರಾತ್ರಿ ಕಳೆದು ಬೆಳಕು ಮೂಡುವುದರಲ್ಲೇ ಮಂಗಮಾಯವಾಗಿದೆ.
ಶತಕವೀರ ಈರುಳ್ಳಿಯಿಂದ ಮತ್ತೊಂದು ದಾಖಲೆ
ಇಷ್ಟುದಿನ ಚಿನ್ನ, ಬೆಳ್ಳಿ, ಹಣವನ್ನು ಕದಿಯುತ್ತಿದ್ದ ಕಳ್ಳರಿಗೂ ಇದೀಗ ಈರುಳ್ಳಿ ಮೇಲೆ ಕಣ್ಣು ಹಾಕಿದ್ದಾರೆ. ಸಾವಿರಾರು ರೂಪಾಯಿ ಮೌಲ್ಯದ ಈರುಳ್ಳಿಯನ್ನು ಕದ್ದು ಎಸ್ಕೇಪ್ ಆಗಿರುವ ವಿಚಿತ್ರ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.
ಇದೇ ಗ್ರಾಮದಲ್ಲಿ ಈರುಳ್ಳಿ ಕಳ್ಳತನ!
ಹೌದು, ರೈತನು ಕಷ್ಟಪಟ್ಟು ಬೆಳೆದ ಈರುಳ್ಳಿ ಬೆಳೆಗೆ ಖದೀಮರು ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲೇ ಕನ್ನ ಹಾಕಿದ್ದಾರೆ. ಅಷ್ಟಕ್ಕೂ ಇಂಥದೊಂದು ಘಟನೆ ಮಧ್ಯಪ್ರದೇಶದ ಮಾಲ್ವಾ ಜಿಲ್ಲೆ ಮಂಡಸೂರು ಪ್ರದೇಶದ ರಿಚ್ಚಾ ಗ್ರಾಮದಲ್ಲಿ ನಡೆದಿದೆ.
ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ
ಮಂಡಸೂರು ಪ್ರದೇಶ ರಿಚ್ಚಾ ಗ್ರಾಮದಲ್ಲಿ ಜೀತೇಂದ್ರ ಕುಮಾರ್ ಎಂಬ ರೈತ ತನ್ನ 1.6 ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆದಿದ್ದ. ಇನ್ನೇನು ಕಟಾವಿಗೆ ಬಂದ ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಷ್ಟರಲ್ಲೇ ರೈತನಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
ಈರುಳ್ಳಿ ಸಂಗ್ರಹಿಸಿಟ್ಟರೆ ಭಾರಿ ದಂಡ: ವ್ಯಾಪಾರಿಗಳೇ ಎಚ್ಚರ ಎಚ್ಚರ!
ಈರುಳ್ಳಿ ಹುಡುಕಿ ಕೊಡುವಂತೆ ಪೊಲೀಸರಿಗೆ ದೂರು!
ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಈರುಳ್ಳಿ ಕಳ್ಳತನವಾಗಿದ್ದು, ಇದರಿಂದ ನೊಂದ ರೈತ ಜೀತೇಂದ್ರ ಕುಮಾರ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ತನಗೆ ಸೂಕ್ತ ನ್ಯಾಯ ಒದಗಿಸುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದು, ಈರುಳ್ಳಿ ಕಳ್ಳತನದ ಬಗ್ಗೆ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾನೆ.
ಚಿನ್ನ ಬೇಡ, ಬೆಳ್ಳಿ ಬೇಡ, ಈರುಳ್ಳಿಯೇ ಸಾಕು!
ಈರುಳ್ಳಿ ಬೆಲೆ ಶತಕದ ಗಡಿ ದಾಟಿದ್ದೇ ದಾಟಿದ್ದು, ಚಿನ್ನ ಬೆಳ್ಳಿಗಿಂತ ಈರುಳ್ಳಿ ಕಳ್ಳತನದ ಬಗ್ಗೆಯೇ ಸಾಕಷ್ಟು ದೂರುಗಳು ದಾಖಲಾಗುತ್ತಿವೆ. ಇತ್ತೀಚಿಗಷ್ಟೇ ಮಧ್ಯಪ್ರದೇಶದಲ್ಲಿ ನಾಸಿಕ್ ನಿಂದ ಗೋರಖ್ ಪುರ್ ಗೆ ಸಾಗಿಸಲಾಗುತ್ತಿದ್ದ 20 ಲಕ್ಷ ಮೌಲ್ಯದ ಈರುಳ್ಳಿ ತುಂಬಿದ ಲಾರಿಯನ್ನೇ ಕಳ್ಳರು ಎಸ್ಕೇಪ್ ಮಾಡಿದ್ದರು.