ಬೆಂಬಲ ವಾಪಸ್ ಎಂದ ಮಾಯಾವತಿಗೆ ಕಾಂಗ್ರೆಸ್ ಉತ್ತರವೇನು?
ಭೋಪಾಲ್, ಜನವರಿ 2: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ತನ್ನ ಬೆಂಬಲ ಕಾಂಗ್ರೆಸ್ಸಿಗೆ ಎಂದು ಘೋಷಿಸಿದ್ದ ಬಿಎಸ್ಪಿ ಇದೀಗ ಹೊಸ ಕ್ಯಾತೆ ತೆಗೆದಿದೆ!
ಯಾವ ಷರತ್ತಿಲ್ಲದೆ ಅಂದು ಬೆಂಬಲನೀಡಿದ್ದ ಬಿಎಸ್ಪಿ, ಇದೀಗ ದಲಿತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಈ ಕೂಡಲೇ ವಾಪಸ್ತೆಗೆದುಕೊಳ್ಳಬೇಕು, ಇಲ್ಲವೆಂದರೆ ನಾನು ಬೆಂಬಲ ವಾಪಸ್ ಪಡೆಯುತ್ತೇನೆ ಎಂದಿದ್ದರು.
ಷರತ್ತು ಹಾಕಿ ಕಾಂಗ್ರೆಸ್ಗೆ ಬೆದರಿಕೆ ಒಡ್ಡಿದ ಮಾಯಾವತಿ
ಆದರೆ ಮಾಯಾವತಿ ಅವರ ಬೆದರಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, 'ಮಾಯಾವತಿಯವರ ಹೇಳಿಕೆಯನ್ನು ನಾವು ಬೆದರಿಕೆ ಎಂದು ಪರಿಗಣಿಸಿಲ್ಲ. ನಾವು ಈ ಮೊದಲೇ ದಲಿತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಆದೇಶಿಸಿದ್ದೆವು' ಎಂದಿದೆ.
ಉತ್ತರ ಪ್ರದೇಶದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ಗೆ ಕಿಮ್ಮತ್ತಿಲ್ಲ?!
ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಎಸ್ಪಿ ಅಗತ್ಯ ಕಾಂಗ್ರೆಸ್ಸಿಗೆ ಇಲ್ಲವಾದರೂ, ಲೋಕಸಭಾ ಚುನಾವಣೆಗೂ ಮುನ್ನ ಬಿಎಸ್ಪಿ ಜೊತೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಬೇಕಾದ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದ್ದರಿಂದಲೇ ಬಿಎಸ್ಪಿ ಮುನಿಸಿಕೊಳ್ಳುವಂಥ ಯಾವುದೇ ಹೇಳಿಕೆಯನ್ನೂ ಕಾಂಗ್ರೆಸ್ ನೀಡುತ್ತಿಲ್ಲ.
ಜಾಣ ಉತ್ತರ ನೀಡಿದ ಕಾಂಗ್ರೆಸ್
'ಮಾಯಾವತಿಯವರ ಹೇಳಿಕೆಯನ್ನು ನಾವು ಬೆದರಿಕೆ ಎಂದು ಪರಿಗಣಿಸಿಲ್ಲ. ನಾವು ಈ ಮೊದಲೇ ದಲಿತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಆದೇಶಿಸಿದ್ದೆವು' ಎಂದು ಕಾಂಗ್ರೆಸ್ ಜಾಣ ಉತ್ತರ ನೀಡಿದೆ. ಈ ಸಂದರ್ಭದಲ್ಲಿ ಮಾಯಾವತಿ ಮತ್ತು ಪರಿಶಿಷ್ಟ ವರ್ಗದವರ ನಿಷ್ಠುರ ಕಟ್ಟಿಕೊಳ್ಳುವುದು ಒಳ್ಳೆಯದಲ್ಲ ಎಂದನ್ನು ಬಲ್ಲ ಕಾಂಗ್ರೆಸ್ ಮಾಯಾವತಿ ಅವರ ಮಾತನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.
ಪ್ರಕರಣ ದಾಖಲಾಗಿದ್ದೇಕೆ?
ಪರಿಶಿಷ್ಟ ಜಾತಿ/ಪರಿಶಿಷ್ಟ ಜನಾಂಗ ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಆಗಸ್ಟ್ 2ರಂದು ಕರೆಯಲಾಗಿದ್ದ ಭಾರತ ಬಂದ್ ಸಂದರ್ಭದಲ್ಲಿ ಎರಡೂ ರಾಜ್ಯಗಳಲ್ಲಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಮ್ಮ ಪಕ್ಷದ ಅಮಾಯಕ ಕಾರ್ಯಕರ್ತರ ವಿರುದ್ಧ ಕೇಸುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಮಾಯಾವತಿ ಅವರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು.
ಕಾಂಗ್ರೆಸ್ ಸುಭದ್ರ
ರಾಜಸ್ಥಾನದಲ್ಲಿ 99 ಸ್ಥಾನ ಗಳಿಸಿರುವ ಕಾಂಗ್ರೆಸ್ ಒಂದು ಸ್ಥಾನದಿಂದ ಬಹಮತ ಪಡೆಯಲು ವಿಫಲವಾಗಿದ್ದರೆ, ಮಧ್ಯ ಪ್ರದೇಶದಲ್ಲಿ 114 ಸ್ಥಾನ ಗಳಿಸಿದ್ದ ಕಾಂಗ್ರೆಸ್ ನಾಲ್ಕು ಸ್ಥಾನಗಳಿಂದ ಬಹುಮತ ಪಡೆಯಲು ವಿಫಲವಾಗಿತ್ತು. ಎರಡೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಯ್ಕೆಯಲ್ಲಿ ಗುದ್ದಾಟ ನಡೆದಿದ್ದರೂ ಸರಕಾರ ಸುಸೂತ್ರವಾಗಿ ರಚನೆಯಾಗಿದ್ದವು. ಆದರೆ, ವಸ್ತುಸ್ಥಿತಿಯೇನೆಂದರೆ, ಭಾರತ ಬಂದ್ ಜರುಗಿದಾಗ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ವಿರುದ್ಧ ದಂಗೆ ಎಬ್ಬಿಸಿದ ಪ್ರಕರಣ ದಾಖಲಿಸಿದಾಗ ಎರಡೂ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿತ್ತು. ಈಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೇನಂತೆ, ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧದ ಕೇಸ್ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ ಮಾಯಾವತಿ.
ಮಾಯಾವತಿ ಲೆಕ್ಕಾಚಾರವೇನು?
ತಮಾಷೆ ಅಂದ್ರೆ, ಮಧ್ಯ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ಗೆದ್ದಿರುವುದು ಕೇವಲ 2 ಸೀಟು ಮಾತ್ರ ಮತ್ತು ರಾಜಸ್ಥಾನದಲ್ಲಿ ಮಾಯಾವತಿ ಪಕ್ಷ 6 ಸೀಟುಗಳನ್ನು ಗೆದ್ದಿದೆ. ಮಾಯಾವತಿ ಬೆಂಬಲ ಹಿಂತೆಗೆದುಕೊಂಡರೂ ಸರಕಾರವೇನು ಬಿದ್ದು ಹೋಗುವುದಿಲ್ಲ. ಏಕೆಂದರೆ, ಬೆಂಬಲ ನೀಡಲು ಸ್ವತಂತ್ರ ಅಭ್ಯರ್ಥಿಗಳೇ ಬೇಕಾದಷ್ಟಿದ್ದಾರೆ. ಆದರೂ, ಇಂಥ ಬ್ಲಾಕ್ ಮೇಲ್ ತಂತ್ರ ಬಳಸುವುದರಲ್ಲಿ ನಿಸ್ಸೀಮರಾಗಿರುವ ಮಾಯಾವತಿ ತಮ್ಮದೇ ಶೈಲಿಯ ರಾಜಕೀಯ ಆಟವಾಡುತ್ತಿದ್ದಾರೆ. ಅದೂ ಅಲ್ಲದೆ, ಲೋಕಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ಸಿಗೆ ತಮ್ಮ ಅಗತ್ಯ ಇದ್ದೇ ಇದೆ ಎಂಬುದನ್ನು ಬಲ್ಲ ಮಾಯಾವತಿ, ಈಗಿನಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.