'ಲಸಿಕೆ ಪಡೆದ ಪುರಾವೆ ಬೇಕಿಲ್ಲ, ಯಾಕೆಂದ್ರೆ ಕುಡುಕರು ಸುಳ್ಳು ಹೇಳುವುದಿಲ್ಲ'
ಖಾಂಡ್ವಾ (ಮಧ್ಯಪ್ರದೇಶ), ನವೆಂಬರ್ 19: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಎಲ್ಲಾ ಕ್ಷೇತ್ರಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗುತ್ತಿದೆ. ಜೊತೆಗೆ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಕೊರೊನಾ ವಿರುದ್ಧ ಹೋರಾಡುವಲ್ಲಿ ಲಸಿಕೆ ಬಹುಮುಖ್ಯ ಪಾತ್ರ ವಹಿಸುವದರಿಂದ ಮಧ್ಯಪ್ರದೇಶದ ಖಾಂಡ್ವಾದಲ್ಲಿ ಜಿಲ್ಲಾಡಳಿತ ಮದ್ಯ ಖರೀದಿಸಲು ಲಸಿಕೆ ಕಡ್ಡಾಯಗೊಳಿಸಿದೆ. ಆದರೆ ಅಬಕಾರಿ ಅಧಿಕಾರಿಯೊಬ್ಬರು ಕೊರೊನಾ ಲಸಿಕೆ ಬಗ್ಗೆ ಅಸಡ್ಡೆ ತೋರಿದ್ದಾರೆ.
ಕೊರೊನಾವೈರಸ್ ಹರಡದಂತೆ ತಡೆಯಲು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಮದ್ಯವನ್ನು ಮಾರಾಟ ಮಾಡಲು ಜಿಲ್ಲಾಡಳಿತ ಖಾಂಡ್ವಾದ ಎಲ್ಲಾ ಮದ್ಯದಂಗಡಿಗಳಿಗೆ ಸೂಚನೆ ನೀಡಿತ್ತು. ಆ ಮೂಲಕ ಜನರಿಗೆ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಆದರೆ ಎಎನ್ಐ ಅಬಕಾರಿ ಅಧಿಕಾರಿ ಆರ್ಪಿ ಕಿರಾರ್ ಅವರು ಮಧ್ಯೆ ಖರೀದಿ ಮಾಡುವವರ ವ್ಯಾಕ್ಸಿನೇಷನ್ ಪುರಾವೆ ಅಗತ್ಯವಿಲ್ಲ. ಯಾಕೆಂದರೆ ಕುಡಿದವರು ಸುಳ್ಳು ಹೇಳುವುದಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಸದ್ಯ ಭಾರೀ ವಿರೋಧಕ್ಕೆ ಕಾರಣವಾಗಿದೆ. ಕೊರೊನಾ ಬಗ್ಗೆ ಇಡೀ ಜಗತ್ತೇ ಎಚ್ಚರ ವಹಿಸಿರುವಾಗ ಕುಡುಕರ ಮಾತನ್ನು ಯಾವುದೇ ಪುರಾವೆ ಇಲ್ಲದೆ ನಂಬಿ ಎನ್ನುವ ಮಾತನ್ನು ಅಬಕಾರಿ ಅಧಿಕಾರಿ ಹೇಳಿದ್ದು ಜಿಲ್ಲಾಡಳಿತದ ಕೆಂಗಣಿಕ್ಕೆ ಗುರಿಯಾಗಿದೆ.
"ಯಾವುದೇ ವ್ಯಾಕ್ಸಿನೇಷನ್ ಪುರಾವೆ ಅಗತ್ಯವಿಲ್ಲ. ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ ಎಂದು ಕೇವಲ ಮೌಖಿಕ ಭರವಸೆ ಸಾಕು. ಮದ್ಯಮಾರಾಟ ಮಾಡಬಹುದು. ಮದ್ಯಪಾನ ಮಾಡುವವರು ಸುಳ್ಳು ಹೇಳುವುದಿಲ್ಲ..." ಎಂದು ಎಎನ್ಐ ಅಬಕಾರಿ ಅಧಿಕಾರಿ ಆರ್ಪಿ ಕಿರಾರ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಈ ಹಿಂದೆ ಖಾಂಡ್ವಾದ ಎಲ್ಲಾ ಮದ್ಯದಂಗಡಿಗಳಲ್ಲಿ ಸಂಪೂರ್ಣವಾಗಿ ವೈರಸ್ ವಿರುದ್ಧ ಲಸಿಕೆ ಹಾಕಿದವರಿಗೆ ಮಾತ್ರ ಮದ್ಯ ಮಾರಾಟ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು.
"ಜಿಲ್ಲಾಡಳಿತ ಖಾಂಡ್ವಾ ಕರೆದ ಸಭೆಯಲ್ಲಿ ನೀಡಿದ ಸೂಚನೆಗಳ ಪ್ರಕಾರ, ಪ್ರಸ್ತುತ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಾಗಿ ನಡೆಸುತ್ತಿರುವ ಮೆಗಾ ಲಸಿಕೆ ಅಭಿಯಾನದ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರು ಲಸಿಕೆ ಹಾಕಿಸಿಕೊಳ್ಳಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 55 ದೇಶ ಮತ್ತು 19 ವಿದೇಶಿ ಮದ್ಯದಂಗಡಿಗಳ ಮದ್ಯ ಮಾರಾಟವನ್ನು ಲಸಿಕೆಯ ಎರಡೂ ಡೋಸ್ ಪಡೆದ ವ್ಯಕ್ತಿಗಳು/ಗ್ರಾಹಕರಿಗೆ ಮಾತ್ರ ಮಾರಾಟ ಮಾಡಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರಪಂಚದಾದ್ಯಂತದ ಸರ್ಕಾರಗಳು ವಿವಿಧ ಪ್ರೋತ್ಸಾಹಗಳನ್ನು ಘೋಷಿಸುವ ಮೂಲಕ ಅಥವಾ ನಿರ್ದಿಷ್ಟ ಸೇವೆಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸುವ ಮೂಲಕ ಲಸಿಕೆ ಹಿಂಜರಿಕೆಯನ್ನು ಎದುರಿಸಲು ಪ್ರಯತ್ನಿಸುತ್ತಿವೆ.
ಭಾರತದ ಕೋವಿಡ್-19 ವ್ಯಾಕ್ಸಿನೇಷನ್ ಗುರುವಾರ ಸಂಜೆ 115 ಕೋಟಿ ಮೈಲಿಗಲ್ಲನ್ನು ದಾಟಿದೆ. ನಿನ್ನೆ ಸಂಜೆ 7 ಗಂಟೆಯವರೆಗೆ 65 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ಗಳನ್ನು ನೀಡಲಾಯಿತು. ಈ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಶುಕ್ರವಾರ ಆರು ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ಮಧ್ಯಪ್ರದೇಶದಲ್ಲಿ COVID-19 ಸಂಖ್ಯೆ 7,92,999 ಕ್ಕೆ ಏರಿಕೆಯಾಗಿದೆ. ಆದರೆ ರಾಜ್ಯದಲ್ಲಿ 3.65 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Recommended Video
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ COVID-19 ಗೆ ಸಂಬಂಧಿಸಿದ ಯಾವುದೇ ಹೊಸ ಸಾವುಗಳು ವರದಿಯಾಗದ ಕಾರಣ ಸಾವಿನ ಸಂಖ್ಯೆ 10,525 ಕ್ಕೆ ಬದಲಾಗದೆ ಉಳಿದಿದೆ. 6 ರೋಗಿಗಳು ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಈವರೆಗೆ ಗುಣಮುಖರಾದವರ ಸಂಖ್ಯೆ 7,82,396 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈಗ 78 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಜೊತೆಗೆ 56,435 ಸ್ವ್ಯಾಬ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎಂಪಿಯಲ್ಲಿ ಪರೀಕ್ಷೆಗಳ ಸಂಖ್ಯೆ 2,12,62,140 ಕ್ಕೆ ಏರಿಕೆಯಾಗಿದೆ. ಶುಕ್ರವಾರ 3,65,477 ಸೇರಿದಂತೆ ರಾಜ್ಯದಲ್ಲಿ ಇದುವರೆಗೆ 7,92,63,355 ಕೋವಿಡ್-19 ಲಸಿಕೆ ಡೋಸ್ಗಳನ್ನು ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಮಧ್ಯಪ್ರದೇಶದಲ್ಲಿ ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 7,92,999 ರಷ್ಟಿದ್ದು ಹೊಸ ಪ್ರಕರಣಗಳು 06 ದಾಖಲಾಗಿವೆ. ಸಾವಿನ ಸಂಖ್ಯೆ 10,525 ರಷ್ಟಿದೆ (ಯಾವುದೇ ಬದಲಾವಣೆಯಿಲ್ಲ), ಚೇತರಿಸಿಕೊಂಡವರ ಸಂಖ್ಯೆ 7,82,396 ತಲುಪಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 78 ಇದೆ. ಈವರೆಗೆ ಒಟ್ಟು 2,12,62,140 ಪರೀಕ್ಷೆಗಳನ್ನು ಮಾಡಲಾಗಿದೆ.