ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ? ನೋ ಚಾನ್ಸ್ ಎಂದ ಬಿಜೆಪಿ
ಭೋಪಾಲ್, ಮಾರ್ಚ್ 04: "ಬಿಜೆಪಿ ಅಧಿಕಾರಕ್ಕಾಗಿ ಕಾದು ಕುಳಿತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೂ ಸೂಕ್ತ ಅವಕಾಶವಿದೆ. ಆದರೆ, ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕಾಂಗ್ರೆಸ್ನ ನಡೆಯಿಂದಾಗಿ ಹಲವು ಬೆಳವಣಿಗೆ ನಡೆಯಲಿದೆ" ಎಂದು ಶಿವರಾಜ್ ಸಿಂಗ್ ಚೌವಾಣ್ ಹೇಳಿದ್ದಾರೆ. ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯ ಆರಂಭಿಸಿದೆ ಎಂಬ ಆರೋಪಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
''ತಮ್ಮ ಶಾಸಕರಿಗೆ ಆಮಿಷವೊಡ್ಡಿ ಅವರನ್ನು ಸೆಳೆದುಕೊಳ್ಳುವ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿ.ಡಿ ಶರ್ಮ, ಕಾಂಗ್ರೆಸ್ ಸರ್ಕಾರವು ಬ್ಲ್ಯಾಕ್ ಮೇಲ್ ಸರ್ಕಾರ ಎಂದು ಹೇಳಿದ್ದಾರೆ.
ಕಳೆದ ರಾತ್ರಿ ನಡೆದ ಹೈಡ್ರಾಮಾದಲ್ಲಿ ಗುರುಗ್ರಾಮದ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕಮಲ್ ನಾಥ್ ಸರ್ಕಾರದ ಸಚಿವರಾದ ಜಿತು ಪಟ್ವಾರಿ ಹಾಗೂ ಜೈವರ್ಧನ್ ಸಿಂಗ್ ಅವರು 8 ಶಾಸಕರನ್ನು ಹೋಟೆಲ್ ನಿಂದ ಕರೆದುಕೊಂಡಿದ್ದು ಹೋಗಿದ್ದು ಈಗ ಚರ್ಚೆ ವಿಷಯವಾಗಿದೆ. ಪ್ರತಿ ಶಾಸಕರಿಗೆ 25 ರಿಂದ 30 ಕೋಟಿ ರು ಆಫರ್ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ
ಆದರೆ, ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ ಮುಖ್ಯಸ್ಥ ಶರ್ಮ, ಇಂಥ ಯಾವುದೇ ಪ್ರಯತ್ನವನ್ನು ಬಿಜೆಪಿ ಮಾಡುತ್ತಿಲ್ಲ, ತಮ್ಮ ಸರ್ಕಾರ ಅಸ್ಥಿರಗೊಳ್ಳುತ್ತಿರುವುದನ್ನು ತಡೆಯಲು ಆಗದೆ ಕಮಲ್ ನಾಥ್ ಈ ರೀತಿ ಹೇಳುತ್ತಿದ್ದಾರೆ ಎಂದಿದ್ದಾರೆ. ಕಮಲ್ ನಾಥ್, ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ದಿಗ್ವಿಜಯ ಸಿಂಗ್ ನಡುವೆ ಆಂತರಿಕ ಕಲಹವಿರುವುದು ಗುಟ್ಟಾದ ವಿಷಯವೇನಲ್ಲ, ಈ ಎಪಿಸೋಡಿನಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸಚಿವರ ಆರೋಪವೇನು?
ಕಾಂಗ್ರೆಸ್ ಸಚಿವರ ಆರೋಪವೇನು?: ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಸಚಿವ ನರೋತ್ತಮ್ ಮಿಶ್ರಾ, ಭೂಪೇಂದ್ರ ಸಿಂಗ್ ಹಾಗೂ ರಾಮ್ ಪಾಲ್ ಸಿಂಗ್ ಅವರು 8 ಮಂದಿ ಶಾಸಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಶಾಸಕ ಬಿಸಾಹುಲಾಲ್ ಸಿಂಗ್ ಅವರನ್ನು ಕರೆದೊಯ್ದಿದ್ದಾರೆ ಎಂಬ ಮಾಹಿತಿಯಿದೆ.
ಮಧ್ಯಪ್ರದೇಶ ವಿಧಾನಸಭೆ ಬಲಾಬಲ
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಕಾಂಗ್ರೆಸ್ 114, ಬಿಜೆಪಿ 107ಶಾಸಕರ ಬಲವನ್ನು ಹೊಂದಿವೆ. 4 ಪಕ್ಷೇತರರು, ಇಬ್ಬರು ಬಿಎಸ್ಪಿ ಶಾಸಕರು, ಒಬ್ಬರು ಸಮಾಜವಾದಿ ಪಕ್ಷದ ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. 2 ಸ್ಥಾನಗಳು ಖಾಲಿಯಿವೆ.
ಕಮಲ್ ನಾಥ್ ಗೆ ಆತಂಕ ತಪ್ಪಿದ್ದಲ್ಲ
''ತಮ್ಮ ಶಾಸಕರಿಗೆ ಆಮಿಷವೊಡ್ಡಿ ಅವರನ್ನು ಸೆಳೆದುಕೊಳ್ಳುವ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಅವರ ತಂತ್ರಗಳಿಗೆ ಬಲಿಯಾಗಲು ನಮ್ಮ ರಾಜ್ಯ ಕರ್ನಾಟಕವಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದರು.
ಲೋಕಸಬೆ ಚುನಾವಣೆಯ ಫಲಿತಾಂಶದ ನಂತರ ಮಧ್ಯಪ್ರದೇಶದಲ್ಲಿ ಸರ್ಕಾರ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದ್ದು, ಮುಖ್ಯಮಂತ್ರಿ ಕಮಲ್ ನಾಥ್ ಆತಂಕದಲ್ಲಿದ್ದಾರೆ.