ಒಂದು ಪರಿವಾರ ಮತ್ತು ಒಬ್ಬ ಚಾಯ್ ವಾಲಾ ನಡುವೆ ಆಗೇಬಿಡಲಿ ಮುಕಾಬಲಾ!
ಭೋಪಾಲ್, ನವೆಂಬರ್ 16: ಒಂದು ವಂಶದ ನಾಲ್ಕು ತಲೆಮಾರು ದೇಶಕ್ಕೆ ಏನು ಕೊಟ್ಟಿದೆ, ಮತ್ತು ಒಬ್ಬ ಚಾಯ್ವಾಲಾ ನಾಲ್ಕು ವರ್ಷದಲ್ಲಿ ದೇಶಕ್ಕೆ ಏನು ಕೊಟ್ಟಿದ್ದಾನೆ ಎಂಬುದರ ತುಲನೆ ಆಗಿಯೇ ಹೋಗಲಿ ಎಂದು ನರೇಂದ್ರ ಮೋದಿ ಅಬ್ಬರಿಸಿದರು.
ಮಧ್ಯಪ್ರದೇಶದಲ್ಲಿ ಭೂಪಾಲ್ ಬಳಿಯಿರುವ ಸಾಡೋಲ್ ನಲ್ಲಿ ಅವರು ಚುನಾವಣಾ rally ಯಲ್ಲಿ ಮಾತನಾಡಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಮೇಲೆ ಭಾರಿ ವಾಕ್ ಪ್ರಹಾರ ನಡೆಸಿದರು.
ಈ ಚುನಾವಣೆ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬುದಕ್ಕಾಗಿ ನಡೆಯುತ್ತಿರುವ ಚುನಾವಣೆ ಅಲ್ಲ ಇದು, ಮಧ್ಯಪ್ರದೇಶದ ಜನರ ಒಳಿತಿಗಾಗಿ, ಮಧ್ಯಪ್ರದೇಶದ ಭವಿಷ್ಯ ಹೇಗಿರಬೇಕೆಂದು ಜನ ನಿರ್ಣಯಿಸುವ ಚುನಾವಣೆ ಎಂದು ನರೇಂದ್ರ ಮೋದಿ ಹೇಳಿದರು.
ಬಾಯಲ್ಲಿ ರಾಮ, ಬಗಲಲ್ಲಿ ಚೂರಿ
ಬಾಯಲ್ಲಿ ರಾಮನಾಮ ಆದರೆ ಬಗಲಲ್ಲಿ ಚೂರಿ ಇಟ್ಟುಕೊಂಡು ಓಡಾಡುತ್ತಿದ್ದಾರೆ ಕಾಂಗ್ರೆಸ್ ನವರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನವರಿಗೆ ಸಿಟ್ಟು ಬಿಟ್ಟು ಇನ್ನೇನು ಬರುವುದಿಲ್ಲವಂತೆ. ಕಾಂಗ್ರೆಸ್ನ ಗುಣವೇ ಅದು, ಹೇಳುವುದು ಒಂದು ಮಾಡುವುದು ಒಂದು ಎಂದು ಅವರು ಮಧ್ಯಪ್ರದೇಶದ ಕಾಂಗ್ರೆಸ್ಗೆ ವ್ಯಂಗ್ಯ ಮಾಡಿದರು.
ಕಾಂಗ್ರೆಸ್ಗೆ ಪ್ರಶ್ನೆಗಳನ್ನು ಕೇಳಿ
ಕಾಂಗ್ರೆಸ್ನವರು ನಿಮ್ಮ ಮನೆಗೆ ಕಾಂಗ್ರೆಸ್ಗೆ ಬಂದಾಗ ಒಂದು ಮಾತು ಕೇಳಿ, ಐವತ್ತು ವರ್ಷ ಆಳಿದ ನೀವು ಏಕೆ ನಮಗಾಗಿ ರಸ್ತೆ ಮಾಡಲಿಲ್ಲ, ಶಾಲೆ ಮಾಡಲಿಲ್ಲ ಎಂದು ಅವರನ್ನು ಕೇಳಿ ಎಂದು ಮೋದಿ ಮತದಾರರಿಗೆ ಹೇಳಿದರು. ಕಾಂಗ್ರೆಸ್ಗೆ ಕೇವಲ ಸುಳ್ಳು ಹೇಳುವುದು ಮಾತ್ರ ಬರುತ್ತದೆ, ರಾತ್ರಿ ನಿದ್ದೆಯಲ್ಲೂ ಸುಳ್ಳನ್ನೇ ಹೇಳುತ್ತಾರೆ ಎಂದು ಮೋದಿ ಹೇಳಿದರು.
ನಾವು ಎಲ್ಲ ಕುಟುಂಬಕ್ಕೆ ಮನೆ ಕೊಡುತ್ತೇವೆ
2022ರ ಅಷ್ಟರಲ್ಲಿ, ನಾವು ಎಲ್ಲ ಕುಟುಂಬಕ್ಕೂ ಮನೆ ಕೊಡುತ್ತೇವೆ, ಈಗಾಗಲೇ ಮಧ್ಯಪ್ರದೇಶದಲ್ಲಿ 12000 ಮನೆಗಳನ್ನು ಕಟ್ಟಿಸಿ ಬಡವರಿಗೆ ಹಂಚಿದ್ದೇವೆ ಎಂದು ಮೋದಿ ಹೇಳಿದರು. ಅಷ್ಟೆ ಅಲ್ಲದೆ ಕಾಂಗ್ರೆಸ್ 50 ವರ್ಷ ಮಾಡಲಾಗದಿದ್ದ ಅನೇಕ ಕೆಲಸಗಳನ್ನು ನಾವು ಈಗಾಗಲೇ ಮಾಡಿ ಮುಗಿಸಿದ್ದೇವೆ ಎಂದು ಅವರು ಹೇಳಿದರು.
ನೋಟ್ಬ್ಯಾನ್ನಿಂದ ಕಾಂಗ್ರೆಸ್ಗೆ ತೊಂದರೆ
ನೋಟ್ ಬ್ಯಾನ್ನಿಂದ ಜನರಿಗೆ ತೊಂದರೆ ಆಗಲಿಲ್ಲ ಆಗಿದ್ದು ಕಾಂಗ್ರೆಸ್ ಗೆ ಮಾತ್ರ. ನೋಟ್ಬ್ಯಾನ್ನಿಂದ ಅವರು ಗಳಿಸಿಟ್ಟಿದ್ದ ಎಲ್ಲಾ ಹಣವನ್ನೂ ನಾನು ಎಳೆದು ತಂದೆ. ನೋಟ್ಬ್ಯಾನ್ ಆಗಿ ಎರಡು ವರ್ಷವಾದರೂ ಕಾಂಗ್ರೆಸ್ನವರು ಅಳುವುದು ನಿಲ್ಲಿಸಿಲ್ಲ ಎಂದು ಮೋದಿ ವ್ಯಂಗ್ಯ ಮಾಡಿದರು.