ಗೋಹತ್ಯೆ ಆರೋಪ: ಇಬ್ಬರು ಆದಿವಾಸಿಗಳನ್ನು ಹೊಡೆದು ಕೊಂದ ಗ್ರಾಮಸ್ಥರು
ಭೋಪಾಲ್ ಮೇ 04: ಮಧ್ಯಪ್ರದೇಶದಲ್ಲಿ ಜನಸಮೂಹದ ಭಯಂಕರ ಮುಖ ಬಯಲಾಗಿದೆ. ರಾಜ್ಯದ ಸಿಯೋನಿ ಜಿಲ್ಲೆಯಲ್ಲಿ ಮಂಗಳವಾರ ಗೋಹತ್ಯೆ ಆರೋಪದ ಮೇಲೆ ಇಬ್ಬರು ಆದಿವಾಸಿಗಳನ್ನು ಸ್ಥಳೀಯರು ಹೊಡೆದು ಕೊಂದಿದ್ದಾರೆ. ಪೊಲೀಸರ ಪ್ರಕಾರ, 20 ಜನರ ಗುಂಪೊಂದು ಆದಿವಾಸಿಗಳ ಮನೆಗೆ ನುಗ್ಗಿ ಗೋಹತ್ಯೆ ಆರೋಪ ಮಾಡಿದ್ದಾರೆ. ನಂತರ ಇಬ್ಬರನ್ನು ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆದಿವಾಸಿಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ದಾಳಿಯ ಗುಂಪಿನಿಂದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಪಿನ ಇಬ್ಬರು ಆದಿವಾಸಿಗಳನ್ನು ಕೊಂದ ಘಟನೆ ಬದಲ್ಪರ್ ಹೊರಠಾಣೆಯ ಸಾಗರ್ ಮತ್ತು ಸಿಮಾರಿಯಾ ಗ್ರಾಮಗಳಿಂದ ಬಂದಿದೆ. ತಡರಾತ್ರಿ 15ರಿಂದ 20 ಮಂದಿ ಇಬ್ಬರು ಆದಿವಾಸಿಗಳನ್ನು ಗೋಮಾಂಸದೊಂದಿಗೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡದೆ ಥಳಿಸಿದ್ದಾರೆ. ಬಳಿಕ ಮೂವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಂಗಳವಾರ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಕೋಡಿಯಾ ಅವರು ಜಬಲ್ಪುರ್-ನಾಗ್ಪುರ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದಾರೆ. ಸಿಯೋನಿ ಪೊಲೀಸ್ ಮುಖ್ಯಸ್ಥ ಮತ್ತು ಇತರ ಅಧಿಕಾರಿಗಳು ಆದಿವಾಸಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಡಿಯೋ: ಮದುವೆ ಸಮಾರಂಭದಲ್ಲಿ ಕಾಲುಜಾರಿ ಬಿದ್ದ ಮಧ್ಯಪ್ರದೇಶ ಸಿಎಂ
ಘಟನೆಯಲ್ಲಿ 20 ಜನರ ವಿರುದ್ಧ ಆರೋಪ ಹೊರಿಸಲಾಗಿದ್ದು, ಈ ಪೈಕಿ ಆರು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಮಾರಾವಿ,' 15-20 ಜನರ ಗುಂಪು ಸಂತ್ರಸ್ತರ ಮನೆಗೆ ತೆರಳಿ ಹಸುವನ್ನು ಕೊಂದಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನು ಪ್ರಕರಣದಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದರು.
ಆರೋಪಿಗಾಗಿ ಪೊಲೀಸ್ ತಂಡ ಶೋಧ ನಡೆಸುತ್ತಿದೆ. ಆರೋಪಿಗಳಲ್ಲಿ ಕೆಲವರ ಹೆಸರು ಉಲ್ಲೇಖವಾಗಿದೆ (ದೂರಿನಲ್ಲಿ) ಮತ್ತು ಇತರರು ಅಪರಿಚಿತರಾಗಿದ್ದಾರೆ. ಎರಡು-ಮೂರು ಶಂಕಿತರನ್ನು ಬಂಧಿಸಿದ್ದೇವೆ. ಸಂತ್ರಸ್ತೆಯ ಮನೆಯಲ್ಲಿ ಸುಮಾರು 12 ಕೆಜಿ ಮಾಂಸ ಪತ್ತೆಯಾಗಿದೆ ಎಂದು ಮಾರಾವಿ ಹೇಳಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿರುವ ದೂರುದಾರ ಬ್ರಜೇಶ್ ಬತ್ತಿ ಮಾತನಾಡಿ, 'ಜನಸಮೂಹವು ಸಂಪತ್ ಬತ್ತಿ ಮತ್ತು ಧನ್ಸಾ ಎಂಬ ಇಬ್ಬರು ಆದಿವಾಸಿಗಳನ್ನು ಅಮಾನುಷವಾಗಿ ಥಳಿಸಿದೆ. ಅವರು ಸಾವನ್ನಪ್ಪಿದ್ದಾರೆ. ಇದರಿಂದಿರುವವರನ್ನು ಗುರುತಿಸಿ ನ್ಯಾಯ ನೀಡಬೇಕು' ಎಂದು ಮನವಿ ಮಾಡಿದ್ದಾರೆ. ಜೊತೆಗೆ ಉನ್ನತ ಮಟ್ಟದ ತನಿಖೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
Recommended Video