ಮಧ್ಯಪ್ರದೇಶ: ಪ್ರಮಾಣ ವಚನ ಸ್ವೀಕರಿಸಿದ ಚುನಾಯಿತ ಮಹಿಳೆಯರ ಪತಿಯಂದಿರು
ಹೊಸದಾಗಿ ರಚನೆಯಾದ ಮಧ್ಯಪ್ರದೇಶ ಪಂಚಾಯತ್ಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಬದಲಿಗೆ ಪತಿ ಅಥವಾ ಕುಟುಂಬಗಳ ಪುರುಷ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರಿಂದ ಪುರುಷ ಪ್ರಧಾನ ವ್ಯವಸ್ಥೆಯಿಂದ ಮಹಿಳೆಯರನ್ನು ಕಡೆಗಣಿಸಲಾಗಿದ್ದು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುತ್ತಿದೆ.
ಇಂತಹ ಉಲ್ಲಂಘನೆಗಳು ಧಾರ್, ದಾಮೋಹ್, ಸಾಗರ್, ಪನ್ನಾ ಮತ್ತು ರೇವಾದಲ್ಲಿ ನಡೆದಿವೆ. ಇಲ್ಲಿ ಹಲವಾರು ಪ್ರೇಕ್ಷಕರ ನಡುವೆಯೇ ಪಂಚಾಯತ್ಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ ಅಥವಾ ಇತರ ಸಂಬಂಧಿಕರು ಅವರ ಪರವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪತಿ, ತಂದೆ ಅಥವಾ ಸೋದರ ಮಾವ ಪ್ರಮಾಣ ವಚನ ಸ್ವೀಕರಿಸುತ್ತಿರುವ ವಿಡಿಯೋಗಳು ಹೊರಬಿದ್ದಿವೆ.
"ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ. ಅರ್ಹ ಅಭ್ಯರ್ಥಿಗಳು ಮಾತ್ರ ಪ್ರಮಾಣ ವಚನ ಸ್ವೀಕರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ನಾವು ಈಗಾಗಲೇ ಕ್ರಮ ಕೈಗೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ. ಭವಿಷ್ಯದಲ್ಲಿ ಕುಟುಂಬದ ಸದಸ್ಯರು ಅಂತಹ ಯಾವುದೇ ಪ್ರಯತ್ನಗಳನ್ನು ತಡೆಯಲು ನಾವು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸಲಹೆಯನ್ನು ನೀಡುತ್ತೇವೆ "ಎಂದು ಮಧ್ಯಪ್ರದೇಶದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಉಮಾಕಾಂತ್ ಉಮ್ರಾವ್ ಹೇಳುತ್ತಾರೆ.
10 ಮಹಿಳೆಯರ ಪೈಕಿ 3 ಮಾತ್ರ ಉಪಸ್ಥಿತಿ
ಸಾಗರದ ಜೈಸಿನಗರ ಗ್ರಾಮದಲ್ಲಿ ಆಗಸ್ಟ್ 5 ರಂದು ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಪಂಚಾಯತಿಗೆ ಚುನಾಯಿತರಾದ 10 ಮಹಿಳೆಯರ ಪೈಕಿ ಮೂವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲು ಉಪಸ್ಥಿತರಿದ್ದರು. ಉಳಿದಂತೆ ಚುನಾಯಿತರ ಪುರುಷ ಸಂಬಂಧಿಗಳಿಗೆ ಪ್ರಮಾಣ ವಚನ ಬೋಧಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಿಳೆಯರು ಪ್ರಮಾಣ ವಚನ ಸ್ವೀಕರಿಸಲು ಹಿಂದೇಟು ಹಾಕಿರುವುದು, ಅವರ ಬದಲಿಗೆ ಪುರುಷ ಸಂಬಂಧಿಗಳು ಪ್ರಮಾಣ ವಚನ ಸ್ವೀಕರಿಸಿರುವುದು ಉಲ್ಲಂಘನೆಗೆ ಕಾರಣ ಗ್ರಾಮದಲ್ಲಿ ಗದ್ದಲಕ್ಕೆ ಕಾರಣವಾಯಿತು. ಇದರಿಂದಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಆಶಾರಾಮ್ ಸಾಹು ಅವರನ್ನು ಅಮಾನತು ಮಾಡಲಾಗಿದೆ.
ಬಿಜೆಪಿ ನಾಯಕ ಪ್ರಮಾಣ ವಚನ ಬೋಧನೆ
ಮಾತ್ರವಲ್ಲದೆ ಧಾರ್ನ ಸುಂಡ್ರೆಲ್ ಪಂಚಾಯತ್ನಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಅಲ್ಲಿ ಬಿಜೆಪಿ ನಾಯಕ ರಾಧೇಶ್ಯಾಮ್ ಕಾಸ್ರವಾಡಿಯಾ ಅವರು ಪ್ರಮಾಣ ವಚನ ಬೋಧಿಸಿದ್ದಾರೆ ಎಂದು ಹೇಳಲಾಗಿದೆ.
2020 ರ ಹೊತ್ತಿಗೆ ದೇಶದ 20 ರಾಜ್ಯಗಳು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ (PRI ಗಳು) ಮಹಿಳೆಯರಿಗೆ 50% ಮೀಸಲಾತಿಯನ್ನು ಒದಗಿಸುತ್ತವೆ. ಮಧ್ಯಪ್ರದೇಶ 1990 ರ ದಶಕದಿಂದಲೂ ಅರ್ಧದಷ್ಟು ಸರಪಂಚ್ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸುತ್ತದೆ. ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಸರಪಂಚ್ ಹುದ್ದೆಗೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಕಣದಲ್ಲಿದ್ದರು. ಈ ನಡುವೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಕಡೆಗಣಿಸಿರುವುದು ಬೆಳಕಿಗೆ ಬಂದಿದೆ. ಇಂತಹ ಉಲ್ಲಂಘನೆಗಳು ತಳಮಟ್ಟದ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ನಿಷ್ಪ್ರಯೋಜಕವಾಗಿಸುತ್ತದೆಯೇ ಎಂದು ಪ್ರಶ್ನಿಸಲು ಅನೇಕರನ್ನು ಪ್ರೇರೇಪಿಸಿದೆ.
ಮಹಿಳಾ ಮೀಸಲಾತಿಯನ್ನು ತೆರೆಮರೆಯಲ್ಲಿ ವಶ
"ಸಂವಿಧಾನದ 243 ನೇ ವಿಧಿಯು ಮಹಿಳೆಯರಿಗೆ ಮೀಸಲಾತಿಯ ಬಗ್ಗೆ ಮಾತನಾಡುತ್ತದೆ. 1993ರ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆಯನ್ನು ಮಧ್ಯಪ್ರದೇಶದಲ್ಲಿ ಅನುಮೋದಿಸಿದೆ. ಮಹಿಳೆಯರಿಗಾಗಿ ಎಷ್ಟೇ ಮೀಸಲಾತಿಗಳಿದ್ದರೂ ಪುರುಷ ಪ್ರಧಾನ ಸಮಾಜ ಅದನ್ನು ಬಲಗೈಯಿಂದ ನೀಡಿ ಎಡಗೈಯಿಂದ ಕಿತ್ತುಕೊಳ್ಳುತ್ತಿದೆ. ಇದು ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ಮತ್ತು ಅವರ ಸಬಲೀಕರಣದ ಉದ್ದೇಶವನ್ನು ಸೋಲಿಸುತ್ತಿದೆ"ಎಂದು ಜಬಲ್ಪುರ ನ್ಯಾಯಾಲಯದಲ್ಲಿ ಅಭ್ಯಾಸ ಮಾಡುವ ವಕೀಲ ಕ್ವಾಜಿ ಫಕ್ರುದ್ದೀನ್ ಹೇಳುತ್ತಾರೆ.
ತರಬೇತಿ ಅಗತ್ಯ
ಈ ಪಂಚಾಯತ್ ಚುನಾವಣೆಗಳ ಪ್ರಚಾರದ ಸಮಯದಲ್ಲಿಯೂ ಸಹ, ಪುರುಷರನ್ನು ಭವಿಷ್ಯದ ಸರಪಂಚ್ಗಳು ಎಂದು ಪ್ರಚಾರದ ವಸ್ತುವಿನ ಮೇಲೆ ಅವರ ಮುಖಗಳನ್ನು ಬಿಂಬಿಸಲಾಯಿತು. ಅನೇಕ ಬಾರಿ ಮಹಿಳೆಯರು ನಿಜವಾಗಿ ಸ್ಪರ್ಧಿಸುವುದಿಲ್ಲ. ಅವರ ಹೆಸರಿನಲ್ಲಿ ಕುಟುಂಬ ಸದಸ್ಯರು ಸ್ಪರ್ಧಿಸುತ್ತಾರೆ. ಇದು ಮಹಿಳಾ ಸಬಲೀಕರಣದ ಮುಳುವಾಗಿ ಪರಿಣಮಿಸಿದೆ. ಹೀಗಾಗಿ ಈ ಬಗ್ಗೆ ಮಹಿಳೆಯರಿಗೆ ತರಬೇತಿ ಅತ್ಯಗತ್ಯ.
ಸ್ಥಳೀಯ ಸಂಸ್ಥೆಗಳು ರಚನೆಯಾದ ನಂತರ ಏಳು ತಿಂಗಳ ಅವಧಿಯ ತರಬೇತಿ ಮತ್ತು ದೃಷ್ಟಿಕೋನ ಕಾರ್ಯಕ್ರಮವಿದೆ ಎಂದು ಹೇಳಿದರು. "ಲಿಂಗ ಸಂವೇದನೆಯು ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ ಮತ್ತು ಈ ಬಾರಿ ನಾವು ಹೆಚ್ಚುವರಿ ಒತ್ತು ನೀಡುತ್ತೇವೆ" ಎಂದು ಕ್ವಾಜಿ ಫಕ್ರುದ್ದೀನ್ ಅವರು ಹೇಳಿದರು.