ನಕಲಿ ಪಾಸ್ ಪೋರ್ಟ್ ಕೇಸ್ : ನಟಿ ಮೋನಿಕಾಗೆ ಖುಲಾಸೆ ಎತ್ತಿ ಹಿಡಿದ ಹೈಕೋರ್ಟ್
ಭೋಪಾಲ್, ನವೆಂಬರ್ 19: ಭೂಗತ ಪಾತಕಿ ಅಬುಸಲೇಂ ಸಂಗಾತಿಯಾಗಿದ್ದ ಬಾಲಿವುಡ್ ನಟಿ ಮೋನಿಕಾ ಬೇಡಿ ಅಲಿಯಾಸ್ ಫೌಜಿಯಾ ಉಸ್ಮಾನ್ ಗೆ ಮಂಗಳವಾರದಂದು ಮಧ್ಯಪ್ರದೇಶ ಹೈಕೋರ್ಟಿನಿಂದ ಶುಭ ಸುದ್ದಿ ಸಿಕ್ಕಿದೆ.
ನಕಲಿ ಪಾಸ್ಪೋರ್ಟ್ ಪ್ರಕರಣವೊಂದರ ಹಿನ್ನೆಲೆಯಲ್ಲಿ 3 ವರ್ಷ ಸೆರೆಮನೆವಾಸಕ್ಕೆ ಗುರಿಯಾಗಿದ್ದ ಮೋನಿಕಾ, ಹೈದರಾಬಾದಿನ ಚೆಂಚಲಗುಡ ಮಹಿಳಾ ಕಾರಾಗೃಹದಲ್ಲಿದ್ದರು. ಜೈಲಿನಲ್ಲಿ ಇದ್ದಷ್ಟು ಕಾಲ ಸಹಕೈದಿಗಳಿಗೆ ಇಂಗ್ಲೀಷ್ ಟೀಚರ್ ಆಗಿದ್ದರು. ಜಾಮೀನಿನಿಂದ ಹೊರ ಬಂದ ಬಳಿಕ ಚಿತ್ರರಂಗದತ್ತ ಮುಖ ಮಾಡಿದ್ದರು. ಕೋರ್ಟಿನಿಂದ ಈ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರು.
ಆದರೆ ಪ್ರಕರಣದಲ್ಲಿ ಮೋನಿಕಾ ಖುಲಾಸೆಗೊಂಡಿರುವುದನ್ನು ಮತ್ತೊಮ್ಮೆ ಪ್ರಶ್ನಿಸಲಾಗಿತ್ತು. ಸೋಮವಾರದಂದು ಜಸ್ಟೀಸ್ ವಿಷ್ಣು ಪ್ರತಾಪ್ ಸಿಂಗ್ ಚೌಹಾಣ್ ಅವರಿದ್ದ ಏಕಸದಸ್ಯ ಪೀಠವು ಖುಲಾಸೆ ಆದೇಶವನ್ನು ಎತ್ತಿ ಹಿಡಿದಿದೆ. ಈ ಹಿಂದಿನ ಆದೇಶದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಅಥವಾ ಅಪೀಲ್ ನಲ್ಲಿ ಪ್ರಕರಣ ಮುಂದುವರೆಸುವ ಯಾವುದೇ ಅಂಶ ಕಂಡು ಬಂದಿಲ್ಲ ಎಂದು ಹೇಳಿದೆ.
ವಕೀಲ ಉಪಾಧ್ಯಾಯ್
ದಾಖಲೆಗಳ ತುಲನೆ ಮಾಡಲು ತಂದಿದ್ದ ವರದಿಯಲ್ಲಿ ಬೇಡಿ ಹಸ್ತಾಕ್ಷರ ಇಲ್ಲ ಎಂಬ ಅಂಶವನ್ನು ಪೊಲೀಸ್ ತನಿಖೆಯಿಂದ ಬೆಳಕಿಗೆ ತರಲು ವಿಫಲವಾಗಿದ್ದಾರೆ ಎಂದು ನ್ಯಾಯಾಲಯವು ಪರಿಗಣಿಸಿದೆ. ಸಹಿಯನ್ನು ತನಿಖೆಗೊಳಪಡಿಸಿಲ್ಲ, ಈ ಸಂದರ್ಭದಲಿ ಮರು ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ, ಈ ಹಿಂದಿನ ಆದೇಶದಲ್ಲಿ ಈ ಬಗ್ಗೆ ಗಮನ ಹರಿಸಲಾಗಿದೆ ಎಂದು ಜಸ್ಟೀಸ್ ಚೌಹಾಣ್ ತಮ್ಮ ಆದೇಶದಲ್ಲಿ ಹೇಳಿದರು.
ಇದಲ್ಲದೆ ಮೋನಿಕಾ ಬೇಡಿ ವಿರುದ್ಧ ರಾಜ್ಯ ಸರ್ಕಾರ ಹಾಗೂ ಮತ್ತೊಂದು ಪತ್ರಿಕಾ ವರದಿ ಆಧಾರ ಮೇಲೆ ದಾಖಲಾಗಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ಮೊಕದ್ದಮೆಯನ್ನು ನ್ಯಾಯಾಲಯವು ರದ್ದುಗೊಳಿಸಿದೆ,
2007ರ ಸೆಪ್ಟೆಂಬರ್ 6ರಂದು ಆದೇಶ
ಹೈದರಾಬಾದಿನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ನಂತರ ಕಾನೂನು ಸಮರದಲ್ಲಿ ತೊಡಗಿದ್ದ ಮೋನಿಕಾಗೆ 2007ರ ಸೆಪ್ಟೆಂಬರ್ 6ರಂದು ಭೋಪಾಲ್ ನ ಮೇಲ್ಮನವಿ ನ್ಯಾಯಮಂಡಳಿಯಿಂದ ಈ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು. ಮೋನಿಕಾ ಬೇಡಿ ಹಾಗೂ ಇತರರ ವಿರುದ್ಧ ಕೊಹ್ ಇ ಫಿಜಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 419, 420, 467, 468, 471, 120 ಬಿ ಹಾಗೂ 182 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬೆಳ್ಳಿತೆರೆಗೆ ಮರಳಿದ್ದ ಮೋನಿಕಾ ಬೇಡಿ
ಚಂಚಲಗುಡ ಜೈಲಿನಿಂದ ಹೊರ ಬಂದ ಬಳಿಕ ಮಾತನಾಡಿದ್ದ ಮೋನಿಕಾ, ''ಈ ಪ್ರಕರಣದಿಂದ ಪಾಠ ಕಲಿತಿದ್ದೇನೆ.ಭವಿಷ್ಯದಲ್ಲಿ ಹುಷಾರಾಗಿರುತ್ತೇನೆ. ಇನ್ನುಮುಂದೆ ನನ್ನ ಜೀವನದಲ್ಲಿ ಇಂತಹ ಘಟನೆಗಳು ಮರುಕಳಿಸುವುದಿಲ್ಲ. ಈಗ ನಾನು ಸಂತಸದಲ್ಲಿದ್ದೇನೆ. ಇದಕ್ಕಾಗಿ ದೇವರಿಗೆ ಕೃತಜ್ಞಳಾಗಿದ್ದೇನೆ'' ಎಂದಿದ್ದರು.
ಬಿಡುಗಡೆಯ ನಂತರ ಟಿವಿ ಷೋ ಬಿಗ್ ಬಾಸ್ ಹಾಗೂ ಜಲಕ್ ದಿಕ್ಲಾಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆನಂತರ ಬಾಂಗ್ಲಾ , ನೇಪಾಳಿ ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿದ್ದ ಈಕೆಗೆ ಈಗ ಪಂಜಾಬಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.
'ನನ್ನಾಸೆಯ ಹೂವೆ" ಮತ್ತು 'ದ್ರೋಣ" ಎಂಬ ಜಗ್ಗೇಶ್ ನಾಯಕತ್ವದ ಎರಡು ಕನ್ನಡ ಚಿತ್ರಗಳಲ್ಲಿ ಈಕೆ ಬಿಂದಾಸ್ ನಾಯಕಿಯಾಗಿ ನಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಬು ಸಲೇಂ ಗೆಳತಿಯಾಗಿದ್ದ ಮೋನಿಕಾ
ಮುಂಬೈ ಸರಣಿ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಅಬು ಸಲೇಂ ಅವರು ಕಳೆದ ಏಪ್ರಿಲ್ ತಿಂಗಳಿನಲ್ಲಿ ತಮ್ಮ ಮದುವೆಗಾಗಿ ಜೈಲಿನಿಂದ ಹೊರಕ್ಕೆ ಹೋಗಲು ಪೆರೋಲ್ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಜಾಗೊಂಡಿತ್ತು. 1993 ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನ ಮೃತರಾಗಿದ್ದರು, 713 ಜನ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಅಬು ಸಲೇಂ ಕೈವಾಡವೂ ಇದೆ ಎಂಬುದು ವಿಚಾರಣೆಯ ನಂತರ ಸಾಬೀತಾದ ಹಿನ್ನೆಲೆಯಲ್ಲಿ ಟಾಡಾ(Terrorist and Disruptive Activity ) ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ಅವರೀಗ ಮುಂಬೈಯ ತಾಲೋಜಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.