ಮಾ. 16ಕ್ಕೆ ಬಹುಮತ ಸಾಬೀತು ಮಾಡಲು ಕಲಮನಾಥ್ಗೆ ಸೂಚನೆ
ಭೋಪಾಲ್, ಮಾರ್ಚ್ 15 : ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ಗೆ ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತು ಮಾಡಿ ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ. 22 ಶಾಸಕರ ರಾಜೀನಾಮೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ.
ಮಾರ್ಚ್ 16ರ ಸೋಮವಾರ ಮಧ್ಯಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲ ಲಾಲ್ಜಿ ಥಂಡನ್ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಬಹುಮತವನ್ನು ಕಮಲನಾಥ್ ಸಾಬೀತು ಮಾಡಬೇಕು.
ಮಧ್ಯಪ್ರದೇಶ : ರಾಜೀನಾಮೆ ನೀಡಿದ 22 ಶಾಸಕರಿಗೆ ಸ್ಪೀಕರ್ ನೋಟಿಸ್
ರಾಜ್ಯಪಾಲರು ಈ ಕುರಿತು ಮುಖ್ಯಮಂತ್ರಿಗಳ ಕಚೇರಿಗೂ ಪತ್ರ ಬರೆದಿದ್ದಾರೆ. ಯಾವುದೇ ಕಾರಣಕ್ಕೂ ವಿಶ್ವಾಸ ಮತ ಸಾಬೀತು ಮಾಡುವ ಪ್ರಕ್ರಿಯೆಯನ್ನು ಮುಂದೂಡಬಾರದು, ಸ್ಥಗಿತಗೊಳಿಸಬಾರದು. ಸೋಮವಾರ ಪ್ರಕ್ರಿಯೆ ನಡೆಯಬೇಕು ಎಂದು ಸೂಚಿಸಿದ್ದಾರೆ.
"22 ಶಾಸಕರು ವಿಧಾನಸಭೆ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಗಮನಿಸಿದ್ದೇನೆ" ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಶಾಸಕರು ರಾಜೀನಾಮೆ ಪತ್ರವನ್ನು ಪ್ರತ್ಯೇಕವಾಗಿ ನನಗೂ ಸಹ ಕಳಿಸಿದ್ದಾರೆ. ಮಾರ್ಚ್ 10ರಂದು ಶಾಸಕರ ರಾಜೀನಾಮೆ ಪತ್ರ ತಲುಪಿದೆ. ಸಂವಿಧಾನದ 174 ಮತ್ತು 175 (2) ನಿಯಮಗಳ ಅನ್ವಯ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ಸೂಚಿಸುತ್ತಿದ್ದೇನೆ" ಎಂದು ರಾಜ್ಯಪಾಲರು ಹೇಳಿದ್ದಾರೆ.
ಮಧ್ಯಪ್ರದೇಶ: ಮಹಾರಾಜರ ದಿನ ಹೋದವು, ಸರ್ಕಾರ ಉಳಿಯಲಿದೆ!
ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತು ಪ್ರಕ್ರಿಯೆ ನಡೆಯಬೇಕು. ಈ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಬೇಕು. ಮಾರ್ಚ್ 16ರಂದೇ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.
"ಮುಖ್ಯಮಂತ್ರಿಗಳಾದ ನಿಮ್ಮ ಶಿಫಾರಸಿನಂತೆ ಸಂಪುಟದ 6 ಸಚಿವರ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿದೆ. ಮಾರ್ಚ್ 13ರ ನಿಮ್ಮ ಪತ್ರದಲ್ಲಿ ಬಹುಮತ ಸಾಬೀತಿಗೆ ಸಿದ್ಧ ಎಂದು ಹೇಳಿದ್ದೀರಿ" ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ವಿಧಾನಸಭೆ ಬಲಾಬಲ : ಮಧ್ಯಪ್ರದೇಶ ವಿಧಾನಸಭೆಯ ಒಟ್ಟು ಸದಸ್ಯ ಬಲ 230. ಬಹುಮತ ಸಾಬೀತು ಮಾಡಲು ಬೇಕಾದ ಮ್ಯಾಜಿಕ್ ನಂಬರ್ 115. ಕಾಂಗ್ರೆಸ್ ಶಾಸಕರು 114 (22 ರಾಜೀನಾಮೆ), ಬಿಜೆಪಿ 109.
ರಾಜ್ಯದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಸಿಂಧಿಯಾ ಬೆಂಬಲಿಸಿ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಬಳಿಕ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಮೊತ್ತಕ್ಕೆ ಕುಸಿದಿದೆ. ಬಹುಮತ ಸಾಬೀತು ಪಡಿಸಲು ಸರ್ಕಾರ ವಿಫಲವಾದರೆ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ.