ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಅಖಿಲೇಶ್ ಬೆಂಬಲ, ಮಾಯಾ ನಡೆ ನಿಗೂಢ
ಭೋಪಾಲ್, ಡಿಸೆಂಬರ್ 11:ಮಧ್ಯಪ್ರದೇಶ ಚುನಾವಣೆ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮ್ಯಾಜಿಕ್ ನಂಬರ್ ದಾಟುವುದು ಕಷ್ಟವಾಗತೊಡಗಿದೆ. 116 ಮ್ಯಾಜಿಕ್ ನಂಬರ್ ದಾಟುವ ಗುರಿಯನ್ನು ಹೊಂದಿರುವ ಈ ಎರಡು ಪಕ್ಷಗಳಿಗೆ ಪಕ್ಷೇತರರು ಹಾಗೂ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಬೆಂಬಲ ಅತ್ಯಗತ್ಯ.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸಿದ್ದಾರೆ. ಅತಂತ್ರ ವಿಧಾನಸಭೆ ಪರಿಸ್ಥಿತಿಯಲ್ಲಿ ಬೆಂಬಲ ನೀಡಲು ಸಿದ್ಧ ಎಂದು ಅಖಿಲೇಶ್ ಹೇಳಿದ್ದಾರೆ.
ಮಧ್ಯ ಪ್ರದೇಶ ಅತಂತ್ರ? ಯಾರ ಕೈಗೂ ಸಿಗದ ಪ್ರಳಯಾಂತಕಿ ಮಾಯಾವತಿ
ಕಳೆದ ಚುನಾವಣೆಯಲ್ಲಿ ಕೇವಲ 4 ಸ್ಥಾನ ಮಾತ್ರ ಗೆದ್ದಿದ್ದ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಈ ಬಾರಿ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸದ್ಯ ತನ್ನ ವಿಜೇತ ಅಭ್ಯರ್ಥಿಗಳನ್ನು ದೆಹಲಿಗೆ ಕೂಡಲೇ ಬರುವಂತೆ ಮಾಯಾವತಿ ಫರ್ಮಾನು ಹೊರಡಿಸಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ನಡೆಯಬಹುದಾದ ವ್ಯಾಪಾರಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಕರ್ನಾಟಕ ಮತ್ತು ಛತ್ತೀಸ್ಗಢದಲ್ಲಿ ಬೇರೆ ಪಕ್ಷಗಳೊಂದಿಗೆ ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಆದರೆ, ಸದ್ಯ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ಸಿನ ಉದ್ದೇಶವಲ್ಲ. ಮೈತ್ರಿಕೂಟದ ಪಕ್ಷಕ್ಕೆ ಹಾನಿಯಾಗುವುದನ್ನು ತಡೆಗಟ್ಟಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಮಾಯಾವತಿ ಹೇಳಿದ್ದರು. ಸೀಟು ಹಂಚಿಕೆ ವ್ಯತ್ಯಾಸವೇ ಮಾಯಾವತಿ ಮುನಿಸಿಗೆ ಕಾರಣ ಎನ್ನಬಹುದು.
ಪಂಚರಾಜ್ಯ ಚುನಾವಣೆ ಫಲಿತಾಂಶ LIVE:ರೋಚಕ ಘಟ್ಟದಲ್ಲಿ ಮಧ್ಯಪ್ರದೇಶ ಫಲಿತಾಂಶ
ಮಧ್ಯಾಹ್ನ 1.30ರ ಟ್ರೆಂಡಿಂಗ್ ನಂತೆ 230 ಸ್ಥಾನಗಳ ಪೈಕಿ : ಬಿಜೆಪಿ 109, ಕಾಂಗ್ರೆಸ್ 110, ಬಿಎಸ್ಪಿ 5, ಇತರೆ 6