ಮಧ್ಯಪ್ರದೇಶದಲ್ಲಿ ಜನರಿಗೆ ಕೊವಿಡ್-19 ಲಸಿಕೆ ಉಚಿತ.. ಉಚಿತ..!
ಭೋಪಾಲ್, ಅಕ್ಟೋಬರ್.22: ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಯಾವುದೇ ರೀತಿಯ ಔಷಧಿ ಮತ್ತು ಲಸಿಕೆಯು ಸಂಶೋಧನೆಯಾಗಿಲ್ಲ. ಜಗತ್ತಿನಾದ್ಯಂತ ಸಮರೋಪಾದಿಯಲ್ಲಿ ಲಸಿಕೆ ಸಂಶೋಧನಾ ಕಾರ್ಯಗಳು ನಡೆಯುತ್ತಿವೆ.
ವಿಶ್ವ ಕೊವಿಡ್-19 ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದರೆ ಭಾರತದಲ್ಲಿ ಕೊವಿಡ್-19 ಲಸಿಕೆಯ ವಿತರಣೆ ಬಗ್ಗೆ ನಾಯಕರು ಘೋಷಣೆಗಳನ್ನು ಹೊರಡಿಸುತ್ತಿದ್ದಾರೆ. ಕೊರೊನಾವೈರಸ್ ಸೋಂಕಿಗೆ ಲಸಿಕೆ ಪತ್ತೆ ಆಗುತ್ತಿದ್ದಂತೆ ರಾಜ್ಯದ ಪ್ರತಿಯೊಬ್ಬ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಘೋಷಿಸಿದ್ದಾರೆ.
ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಉಚಿತ ವಿತರಣೆ: ಸಿಎಂ ಪಳನಿಸ್ವಾಮಿ
ಮಧ್ಯಪ್ರದೇಶದ ಪ್ರಜೆಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಉಚಿತವಾಗಿ ನೊವೆಲ್ ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ವಿತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಟ್ವೀಟ್ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಒಂದೇ ದಿನ 1045 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 1,64,341ಕ್ಕೆ ಏರಿಕೆಯಾಗಿದೆ.
ತಮಿಳುನಾಡು ಸಿಎಂ ಪಳನಿಸ್ವಾಮಿ ಘೋಷಣೆಗೆ ಟೀಕೆ:
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಕೂಡಾ ಈಗಾಗಲೇ ರಾಜ್ಯದಲ್ಲಿ ಕೊವಿಡ್-19 ಲಸಿಕೆಯನ್ನು ಉಚಿತವಾಗಿ ವಿತರಿಸುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಣೆಗೆ ಪ್ರತಿಪಕ್ಷಗಳು ಕಿಡಿ ಕಾರಿವೆ. "ಏನೋ ದೊಡ್ಡ ಸಾಧನೆ ಮಾಡಿದ ರೀತಿಯಲ್ಲಿ ಉಚಿತವಾಗಿ ಕೊವಿಡ್-19 ಲಸಿಕೆಯನ್ನು ರಾಜ್ಯದ ಜನರಿಗೆ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಸಾಂಕ್ರಾಮಿಕ ಪಿಡುಗು ಎದುರಾದಂತ ಸಂದರ್ಭದಲ್ಲಿ ಇದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಅದನ್ನು ಏನೋ ಉಚಿತವಾಗಿ ನೀಡಿದ ರೀತಿಯಲ್ಲಿ ಘೋಷಿಸಿದ್ದೀರಲ್ಲ" ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟ್ಯಾಲಿನ್ ಪ್ರಶ್ನಿಸಿದ್ದಾರೆ.