ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಮತ್ತೆ ಆಘಾತ, ಮತ್ತೊಬ್ಬ ಶಾಸಕ ರಾಜೀನಾಮೆ
ಭೋಪಾಲ್, ಮಾರ್ಚ್ 11: ಮಧ್ಯಪ್ರದೇಶದಲ್ಲಿ ಆಡಳಿತರೂಢ ಕಾಂಗ್ರೆಸ್ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಸಿಎಂ ಕಮಲ್ ನಾಥ್ ಮಾಡಿದ್ದ ಸಚಿವ ಸಂಪುಟದ ಸರಣಿ ರಾಜೀನಾಮೆ ತಂತ್ರ ತಿರುಗುಬಾಣವಾಗುವ ಲಕ್ಷಣ ಕಂಡು ಬಂದಿದೆ. ಶಾಸಕ ಸ್ಥಾನಕ್ಕೆ ಮತ್ತೊಬ್ಬ ಕಾಂಗ್ರೆಸ್ ಮುಖಾಂಡ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಈ ಸಮಯಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಸಂಖ್ಯೆ 20ಕ್ಕೇರಿದೆ.
ಈ ನಡುವೆ ಮಂಗಳವಾರ ರಾತ್ರಿ ಭೋಪಾಲ್ ನಿಂದ ಒಂದು ತಂಡ ದೆಹಲಿಗೆ ಬಸ್ ಮೂಲಕ ಪ್ರಯಾಣ ಬೆಳೆಸಿದ್ದು, ಪ್ರಧಾನಿ ಮೋದಿಗೆ ಜೈಕಾರ ಹಾಕಿ, ಸಂಭ್ರಮದಿಂದ ಡ್ಯಾನ್ಸ್ ಮಾಡಿದ್ದಾರೆ. ಇನ್ನೊಂದೆಡೆ, ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಿಎಂ ಕಮಲನಾಥ್ ತಿಳಿಸಿದ್ದಾರೆ.
ಬಿಜೆಪಿ ಸೇರುವ ಜ್ಯೋತಿರಾದಿತ್ಯ ಸಿಂಧಿಯಾ ಲೆಕ್ಕಾಚಾರವೇನು?
ಕಾಂಗ್ರೆಸ್ ಮುಖಂಡರಾದ ಸಜ್ಜನ್ ಸಿಂಗ್ ವರ್ಮಾ ಹಾಗೂ ಡಾ.ಗೋವಿಂದ್ ಸಿಂಗ್ ಬೆಂಗಳೂರಿಗೆ ತೆರಳಲಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದು, ದೇವನಹಳ್ಳಿ ರೆಸಾರ್ಟಿನಲ್ಲಿ ಬೀಡು ಬಿಟ್ಟಿರುವ 19 ಬಂಡಾಯ ಶಾಸಕರ ಮನವೊಲಿಕೆ ಪ್ರಯತ್ನ ನಡೆಯಲಿದೆ.
ಜ್ಯೋತಿರಾದಿತ್ಯಾ ಸಿಂಧಿಯಾ ಬಣದಲ್ಲಿ 19 ಶಾಸಕರು
ಈ ಹಿಂದೆ ರಾಜೀನಾಮೆ ನೀಡಿರುವ ಶಾಸಕರೆಲ್ಲರೂ ಜ್ಯೋತಿರಾದಿತ್ಯಾ ಸಿಂಧಿಯಾ ಅವರ ಬೆಂಬಲಿಗರು ಎಂದು ನಂಬಲಾಗಿದೆ. ಎಲ್ಲರೂ ರಾಜಭವನಕ್ಕೆ ಇಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದರು. ಈಗ ಶಾಸಕ ಬಿಸಾಹುಲಾಲ್ ಸಿಂಗ್ ಅವರು ವಿಧಾನಸಭೆ ಸಭಾಪತಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ರಾಜೀನಾಮೆ ನೀಡಿದ ಶಾಸಕರೆಲ್ಲರೂ ಬಿಜೆಪಿ ಸೇರಲಿದ್ದಾರೆ ಎಂಬ ಸುಳಿವನ್ನು ಸಿಂಗ್ ನೀಡಿದ್ದಾರೆ.
ಸಿಂಧಿಯಾ ರಾಜ್ಯಸಭೆಗೆ
ಬಿಜೆಪಿ ಮೂಲಗಳ ಮಾಹಿತಿ ಪ್ರಕಾರ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತದೆ. ಬಳಿಕ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಗುತ್ತದೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಕೇಂದ್ರ ಸಚಿವರೊಬ್ಬರು ನಿರಾಕರಿಸಿದ್ದಾರೆ. ಮಾರ್ಚ್ 26ರಂದು ಮಧ್ಯಪ್ರದೇಶ ವಿಧಾನಸಭೆಯಿಂದ ಮೂವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಿಗದಿಯಾಗಿದೆ. ಮಾರ್ಚ್ 13ರ ತನಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮಾರ್ಚ್ 11 ರಂದು ಸಭೆ ಸೇರಲಿದ್ದು, ತನ್ನ ನಿರ್ಧಾರ ಪ್ರಕಟಿಸಲಿದೆ.
ಮಾರ್ಚ್ 16ರಂದು ವಿಶ್ವಾಸಮತ ಯಾಚನೆ
ಜ್ಯೋತಿರಾದಿತ್ಯ ಸಿಂಧಿಯಾ ಅವರ ಜೊತೆ ಕಾಂಗ್ರೆಸ್ನ 19 ಶಾಸಕರು ರಾಜೀನಾಮೆ ನೀಡಿದ್ದಾರೆ.ಬಿಸಾಹುಲಾಲ್ ಸಿಂಗ್ ಸೇರಿಸಿದರೆ ರಾಜೀನಾಮೆ ನೀಡಿದವರ ಸಂಖ್ಯೆ 20ಕ್ಕೇರಿದೆ. ಇದರಿಂದಾಗಿ ಕಮಲನಾಥ್ ನೇತೃತ್ವದ ಸರ್ಕಾರ ಅಲ್ಪ ಮತಕ್ಕೆ ಕುಸಿದೆ. ಮಾರ್ಚ್ 16ರಂದು ಮಧ್ಯಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 16ರಂದು ಆರಂಭವಾಗಲಿದ್ದು, ಅಂದು ವಿಶ್ವಾಸಮತವನ್ನು ಸಾಬೀತು ಮಾಡಬೇಕಿದೆ. ಸರ್ಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿರುವ ಕಮಲನಾಥ್ ಏನು ಮಾಡುತ್ತಾರೋ ಕಾದುನೋಡಬೇಕಿದೆ.
ವಿಧಾನಸಭೆ ಬಲಾಬಲವೇನು?
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಕಾಂಗ್ರೆಸ್ 114, ಬಿಜೆಪಿ 107ಶಾಸಕರ ಬಲವನ್ನು ಹೊಂದಿವೆ. 4 ಪಕ್ಷೇತರರು, ಇಬ್ಬರು ಬಿಎಸ್ಪಿ ಶಾಸಕರು, ಒಬ್ಬರು ಸಮಾಜವಾದಿ ಪಕ್ಷದ ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. 2 ಸ್ಥಾನಗಳು ಖಾಲಿಯಿವೆ.ಆದರೆ, ಶಾಸಕರ ಸರಣಿ ರಾಜೀನಾಮೆಯಿಂದಾಗಿ ಲೆಕ್ಕಾಚಾರ ಬದಲಾಗಿದ್ದು, ಕಾಂಗ್ರೆಸ್ 114-20 ಅಥವಾ ಬಿಜೆಪಿ 107+20 ಎಂದು ಓದಿಕೊಳ್ಳಬಹುದು. ಶಿವರಾಜ್ ಸಿಂಗ್ ಚೌಹಾಣ್ 4ನೇ ಬಾರಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.