ಸರ್ದಾರ್ ಸರೋವರ್ ಯೋಜನೆ ಸಂತ್ರಸ್ತರಿಗಾಗಿ ಮೇಧಾ ಮತ್ತೆ ಪ್ರತಿಭಟನೆ
ಭೋಪಾಲ್ , ನವೆಂಬರ್ 18: ನರ್ಮದಾ ಬಚಾವೋ ಆಂದೋಲನ್( ಎನ್ ಬಿಎ) ನಾಯಕಿ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಸರದಾರ್ ಸರೋವರ್ ಅಣೆಕಟ್ಟು(ಎಸ್ಎಸ್ ಡಿ) ಯೋಜನೆಯಿಂದಾಗಿ ಸಂತ್ರಸ್ತರಾದವರಿಗೆ ಪರಿಹಾರ ಕೊಡಿಸಲು ಅನಿರ್ಧಿಷ್ಟಾವಧಿಗೆ ನಿರಶನ ಆರಂಭಿಸಿದ್ದಾರೆ.
ನೂರಾರು ಪ್ರತಿಭಟನಾಕಾರರು, ಯೋಜನೆಯಿಂದ ಪುನರ್ವಸತಿ ಸಿಗದವರು ಸೇರಿದಂತೆ ಅನೇಕ ಮಂದಿ ಪಾಲ್ಗೊಂಡಿದ್ದಾರೆ. ಈ ಯೋಜನೆಯಿಂದ ಸಂಕಷ್ಟಕ್ಕೀಡಾಗಿರುವ ಮಧ್ಯಪ್ರದೇಶದ ಜನತೆಗೆ ನಿಯಮದ ಪ್ರಕಾರ ಸೂಕ್ತ ಪರಿಹಾರ ಸಿಗಬೇಕಿದೆ, ಬೇಡಿಕೆಗಳು ಈಡೇರುವ ತನಕ ಹೋರಾಟ ಮುಂದುವರೆಯಲಿದೆ ಎಂದು ಮೇಧಾ ಹೇಳಿದರು.
ದೇಶಕ್ಕೆ ಸರ್ದಾರ್ ಸರೋವರ್ ಅಣೆಕಟ್ಟೆ ಸಮರ್ಪಿಸಿದ ಮೋದಿ
1961ರಲ್ಲಿ ನರ್ಮದಾ ನದಿಗೆ ಅಡ್ಡವಾಗಿ ಸರ್ದಾರ್ ಸರೋವರ್ ಅಣೆಕಟ್ಟನ್ನು ಕಟ್ಟಬೇಕೆಂಬ ಯೋಜನೆಗೆ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಶಿಲಾನ್ಯಾಸ ನೆರವೇರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದರು. 2014ರಕ್ಕೂ ಮೊದಲೇ ಅಣೆಕಟ್ಟು ಸಿದ್ಧವಾಗಿದ್ದರೂ, ಅಣೆಕಟ್ಟಿಗೆ ಕ್ರೆಸ್ಟ್ ಗೇಟ್ ಅಳವಡಿಸಲು ಆಗಿನ ಯುಪಿಎ ಸರ್ಕಾರ ಸುಮಾರು 6 ವರ್ಷಗಳವರೆಗೆ ಅನುಮತಿ ನೀಡಿರಲಿಲ್ಲ. 2014ರಲ್ಲಿ ಮೋದಿ ಪ್ರಧಾನಿಯಾದ ನಂತರ, ಕೇವಲ 17 ದಿನಗಳಲ್ಲಿ ಕ್ರೆಸ್ಟ್ ಗೇಟ್ ಅಳವಡಿಕೆಗೆ ಹಸಿರು ನಿಶಾನೆ ನೀಡಿದರು.
ನರ್ಮದಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು
ಈ ಅಣೆಕಟ್ಟು ನರ್ಮದಾ ಜಿಲ್ಲೆಯ ಕೆವಾದಿಯಾ ಪ್ರಾಂತ್ಯದಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು. 1.2 ಕಿ.ಮೀ. ಉದ್ದವಿರುವ ಈ ಅಣೆಕಟ್ಟು, 163 ಮೀಟರ್ ಆಳವಿದೆ.
ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ನಲ್ಲಿ ಗುಜರಾತ್ ಮಾತ್ರವಲ್ಲ ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳೂ ಪ್ರಯೋಜನ ಪಡೆಯಲಿವೆ. ಸರ್ದಾರ್ ಅಣೆಕಟ್ಟಿನಲ್ಲಿ ಒಟ್ಟಾರೆಯಾಗಿ ಉತ್ಪತ್ತಿಯಾಗುವ ವಿದ್ಯುತ್ ನಲ್ಲಿ ಶೇ. 27ರಷ್ಟು ಮಧ್ಯಪ್ರದೇಶಕ್ಕೆ, ಶೇ. 16ರಷ್ಟು ಗುಜರಾತ್ ಗೆ ಸಲ್ಲುತ್ತದೆ. ಮಹಾರಾಷ್ಟ್ರಕ್ಕೆ ಶೇ. 57ರಷ್ಟು ವಿದ್ಯುತ್ ಸರಬರಾಜು ಆಗುತ್ತದೆ.
ಈ ಅಣೆಕಟ್ಟಿನಿಂದ ಗುಜರಾತ್ ನ ಸುಮಾರು 18 ಲಕ್ಷ ಹೆಕ್ಟೇರ್ ನಷ್ಟು ಭೂಮಿ ನೀರಾವರಿಯಾಗಲಿದೆ. ಇದಲ್ಲದೆ, ಗುಜರಾತ್ ರಾಜ್ಯದ ಸುಮಾರು 9 ಸಾವಿರ ಹಳ್ಳಿಗಳಿಗೆ ಕಾಲುವೆಗಳ ಮೂಲಕ ಕುಡಿಯಲು ಹಾಗೂ ವ್ಯವಸಾಯಕ್ಕೆ ನೀರು ದೊರಕಲಿದೆ.
ಹೊಲಗಳನ್ನು ಕಳೆದುಕೊಂಡ ರೈತರು
ಅಣೆಕಟ್ಟಿನಿಂದಾಗಿ ಮುಳುಗಡೆಗೊಂಡ ಹಳ್ಳಿಗರ ಜನರಿಗೆ ಹಾಗೂ ಹೊಲಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪುನರ್ವಸತಿ, ಪರಿಹಾರ ಸಿಗುವವರೆಗೂ ನರ್ಮದಾ ಅಣೆಕಟ್ಟಿನ ನಿರ್ಮಾಣವನ್ನು ಸ್ಥಗಿತಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು. ಹಾಗಾಗಿ, 1996ರಲ್ಲಿ ಈ ಅಣೆಕಟ್ಟಿನ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಆನಂತರ, 2000ರಲ್ಲಿ ನಿರಾಶ್ರಿತರಿಗೆ ಸೂಕ್ತ ಪರಿಹಾರ ನೀಡಬೇಕೆಂಬ ಕಟ್ಟಾಜ್ಞೆಯೊಂದಿಗೆ ಈ ಅಣೆಕಟ್ಟಿನ ನಿರ್ಮಾಣಕ್ಕೆ ಸುಪ್ರೀಂ ಒಪ್ಪಿಗೆ ನೀಡಿತು.
ಬದುಕೇ ನೀರು ಪಾಲಾಗುವ ಸಂದರ್ಭದಲ್ಲೂ ಹೋರಾಟ ನಿಲ್ಲಿಸದ ನೀರೆ!
ಕಾನೂನಿನ ಪ್ರಕಾರ ಸಿಗಬೇಕಾದ ಪುನರ್ ವಸತಿ
ಮುಳುಗಡೆ ಪ್ರದೇಶದ ಜನರಿಗೆ ಕಾನೂನಿನ ಪ್ರಕಾರ ಸಿಗಬೇಕಾದ ಪುನರ್ ವಸತಿ ಸೌಲಭ್ಯವಾಗಲಿ, ಪರಿಹಾರ ನಿಧಿಯಾಗಲಿ ಸಿಗುವುದಿಲ್ಲ. ಪರಿಸರ, ಜನಜೀವನಕ್ಕೆ ಮಾರಕವಾಗಿದೆ. ಮೋದಿ ಅವರು ಗುಜರಾತಿನ ಮಾಜಿ ಸಿಎಂ ಆಗಿ ಪ್ರತಿಕ್ರಿಯೆ ನೀಡುತ್ತಾರೋ ಅಥವಾ ಪ್ರಧಾನಿಯಾಗಿ ಜವಾಬ್ದಾರಿ ನಡೆ ಇಡುತ್ತಾರೋ ನೋಡಬೇಕಿದೆ ಎಂದು ನರ್ಮದಾ ಬಚಾವೋ ಹೋರಾಟ ಸಮಿತಿ ಹೇಳಿದೆ.
ಅಣೆಕಟ್ಟಿನ ಎತ್ತರ ಹೆಚ್ಚಳದಿಂದ ಸಮಸ್ಯೆ
2006ರಲ್ಲಿ ನರ್ಮದಾ ನಿಯಂತ್ರಣ ಪ್ರಾಧಿಕಾರ ಅಣೆಕಟ್ಟಿನ ಎತ್ತರವನ್ನು 121.92 ಮೀಟರ್ ಗಳಿಗೆ ಎತ್ತರಿಸಲು ನಿರ್ದೇಶಿಸಿತ್ತು. ಅಣೆಕಟ್ಟಿನ ಎತ್ತರವನ್ನು ಏರಿಸುವುದರಿಂದ ಸುಮಾರು 6.8 ಲಕ್ಷ ಹೆಕ್ಟೇರುಗಳಷ್ಟು ಹೆಚ್ಚುವರಿ ಜಮೀನಿಗೆ ನೀರಾವರಿ ಒದಗಿಸಬಹುದು ಹಾಗೂ ಶೇ 40 ರಷ್ಟು ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯವಿದೆ ಎಂದು ಗುಜರಾತ್ ಸರ್ಕಾರ ಸಮರ್ಥಿಸಿಕೊಂಡಿದೆ.
ಸರ್ದಾರ್ ಸರೋವರ್ ಅಣೆಕಟ್ಟನ್ನು 17 ಮೀಟರ್ ಏರಿಸಲು ನರ್ಮದಾ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ. ಅಣೆಕಟ್ಟನ್ನು ಈಗಿರುವ 121 ಮೀ.ನಿಂದ 138 ಮೀಟರ್'ಗೆ ಎತ್ತರಿಸಲು ಪ್ರಾಧಿಕಾರದಿಂದ ಅನುಮತಿ ದೊರೆತಿದೆ. ಈ ಆದೇಶದಿಂದಾಗಿ ಸುಮಾರು ಎರಡೂವರೆ ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.