ಕಡುಬಡವನ ಖಾತೆಗೆ 1 ಲಕ್ಷ ರೂ! ಮೋದಿ ಮಹಿಮೆ ಎಂದುಕೊಂಡರೆ ಆಗಿದ್ದೇ ಬೇರೆ!
ಭೋಪಾಲ್, ನವೆಂಬರ್ 22: ಕಪ್ಪುಹಣವನ್ನು ವಾಪಸ್ ತಂದು ಎಲ್ಲ ಭಾರತೀಯರ ಬ್ಯಾಂಕ್ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಚುನಾವಣೆಯ ಸಮಯದಲ್ಲಿ ವಿಪಕ್ಷಗಳಿಗೆ ಕಾಲೆಳೆಯುವ ಪ್ರಮುಖ ವಿಷಯವಾಗಿತ್ತು.
ತಮ್ಮ ಖಾತೆಗೆ 15 ಲಕ್ಷ ಬರುತ್ತದೆ ಎಂದು ಎಷ್ಟು ಜನ ನಂಬಿದ್ದರೂ, ಬಿಟ್ಟಿದ್ದರೋ ಗೊತ್ತಿಲ್ಲ. ಆದರೆ ರಾಜಸ್ಥಾನದ, ಭೊಪಾಲ್ ನ ಹುಕುಂ ಸಿಂಗ್ ಎಂಬ ಕಡುಬಡವನ ಖಾತೆಗೆ ಇದ್ದಕ್ಕಿದ್ದಂತೆ ಬಂದು ಬಿದ್ದ 1 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಣ ಆತನಿಗೆ ಅಚ್ಚರಿ ಮೂಡಿಸಿತ್ತು. ಪ್ರತಿ ತಿಂಗಳೂ ಹಣವನ್ನು ಡ್ರಾ ಮಾಡುತ್ತಿದ್ದ ಹುಕುಂ ಸಿಂಗ್ ಗೆ ತನ್ನ ಖಾತೆಯಲ್ಲಿ ಇಷ್ಟೊಂದು ಹಣ ಬಂದಿದ್ದು ಹೇಗೆ ಅನ್ನೋದು ಗೊತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಖಾತೆಗೆ ಹಣ ಹಾಕುತ್ತಿದ್ದರು ಎಂದು ಹುಕುಂ ಸಿಂಗ್ ತಿಳಿದಿದ್ದರಂತೆ!
ಭಿಕ್ಷುಕಿ ಬಳಿ ಪತ್ತೆಯಾಯಿತು 2 ಲಕ್ಷ ರೂಪಾಯಿ
ಆರು ತಿಂಗಳ ಕಾಲ ಹೀಗೆ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಯಾದ ಬಳಿಕ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಸೋನ್ಕರ್ ಎಂಬುವವರಿಗೆ ಒಂದು ದೂರು ಬಂದಿತ್ತು. ಬ್ಯಾಂಕ್ ನ ಖಾತೆದಾರರೊಬ್ಬರು ತಮ್ಮ ಖಾತೆಯಿಂದ ಪ್ರತಿ ತಿಂಗಳೂ ಹಣ ಡ್ರಾ ಮಾಡಲಾಗುತ್ತಿದೆ. ನಾನು ಅದನ್ನು ಪಾಸ್ ಬುಕ್ ಎಂಟ್ರಿ ಮಾಡುವಾಗ ಗಮನಿಸಿದೆ. ನನ್ನ ಖಾತೆಯಲ್ಲಿ ಇರಬೇಕಾದಷ್ಟು ಹಣ ಈಗಿಲ್ಲ ಎಂದು ದೂರು ನೀಡಿದ್ದರು. ಕೂಡಲೇ ಬ್ಯಾಂಕ್ ಮ್ಯಾನೇಜರ್ ಈ ಬಗ್ಗೆ ತನಿಖೆ ನಡೆಸಿದಾಗ ಇಬ್ಬರೂ ಹುಕುಂ ಸಿಂಗ್ ಎಂಬ ಹೆಸರಿನವರೇ ಆಗಿದ್ದು. ಒಂದೇ ದಿನ ಖಕಾತೆ ತೆರೆದಿದ್ದರು. ಬ್ಯಾಂಕ್ ಅಧಿಕಾರಿಗಳು ಗೊಂದಲಗೊಂಡು ಇಬ್ಬರಿಗೂ ಒಂದೇ ಖಾತೆ ನಂಬರ್ ಕೊಟ್ಟಿದ್ದರು. ಅದೇ ಈ ಎಲ್ಲಾ ಅವಾಂತರಗಳಿಗೂ ಕಾರಣ ಎಂದು ತಿಳಿದಿತ್ತು. ಈ ಬಗ್ಗೆ ಹುಕುಂ ಸಿಂಗ್ ಅವರನ್ನು ಮಾತನಾಡಿಸಿದರೆ, "ನನ್ನ ಖಾತೆಯಲ್ಲಿ ಯಾವತ್ತಿಗೂ ಅಷ್ಟು ಹಣವಿರುತ್ತಿರಲಿಲ್ಲ. ಆದರೆ ಪ್ರತಿ ತಿಂಗಳೂ ಹೆಚ್ಚಿನ ಹಣ ಜಮಾ ಆಗುತ್ತಿರುವುದನ್ನು ನೋಡಿ ಮೋದೀಜಿ ಹಾಕುತ್ತಿರಬಹುದು ಎಂದುಕೊಂಡು ಸುಮ್ಮನಾಗಿದ್ದೆ" ಎನ್ನುತ್ತಾರೆ!