ಮಧ್ಯಪ್ರದೇಶ; ಸಿಎಂ ಕಮಲನಾಥ್ ಭೇಟಿಯಾದ ಬಿಜೆಪಿ ಶಾಸಕರು!
ಇಂದೋರ್, ಮಾರ್ಚ್ 7: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ ಇನ್ನೂ ಮುಂದುವರೆದಿದೆ. ಈಗಾಗಲೇ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾಂಗ್ರೆಸ್ ಶಾಸಕರೊಬ್ಬರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಕೂಡ ರಿವರ್ಸ್ ಆಪರೇಷನ್ಗೆ ಮುಂದಾಗಿದೆ.
ಮಧ್ಯಪ್ರದೇಶದ ಮೂವರು ಬಿಜೆಪಿ ಶಾಸಕರು ಮುಖ್ಯಮಂತ್ರಿ ಕಮಲನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರ ಎಂದು ವರದಿಗಳು ಬಂದಿವೆ. ಬಿಜೆಪಿ ಶಾಸಕರಾದ ಶರದ್ ಕೌಲ್, ಸಂಜಯ್ ಪಾಠಕ್ ಹಾಗೂ ನಾರಾಯಣ್ ತ್ರಿಪಾಠಿ ಎನ್ನುವ ಶಾಸಕರು ಕಮಲನಾಥ್ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಆಪರೇಷನ್ ಕಮಲ; ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮ!
ಈಗಾಗಲೇ ಮಧ್ಯಪ್ರದೇಶದ ಸುವಸ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ದಾಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಕಮಲನಾಥ್ ನೇತೃತ್ವದ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಮದ್ಯಪ್ರದೇಶದಲ್ಲಿ ಕಾಂಗ್ರೆಸ್ ಇತರ ಪಕ್ಷೇತರ ಶಾಸಕರನ್ನು ನಂಬಿ ಸರ್ಕಾರ ರಚಿಸಿದೆ. 230 ಬಲದ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 109, ಕಾಂಗ್ರೆಸ್ 114 ಹಾಗೂ ಇತರರು 7 ಜನ ಸ್ಥಾನ ಪಡೆದಿದ್ದರು. ಬಹುಮತಕ್ಕೆ 116 ಸ್ಥಾನಗಳ ಅಗತ್ಯತೆ ಇದೆ.
ಮಂಗಳವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಅಪಹರಿಸಿ ಬೆಂಗಳೂರಿಗೆ ಕರೆದುಕೊಂಡಿ ಹೋಗಿತ್ತು ಎಂದು ಆರೋಪಿಸಲಾಗಿತ್ತು. ಇದರಿಂದ ಕಮಲನಾಥ್ ಸಂಕಷ್ಟದಲ್ಲಿ ಸಿಲುಕಿದ್ದಾರೆ.