ಮಧ್ಯಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ; 3 ಕಡೆ ನಿಷೇಧಾಜ್ಞೆ ಜಾರಿ
ಭೋಪಾಲ್, ಏಪ್ರಿಲ್ 11: ಮಧ್ಯಪ್ರದೇಶದ ಖರ್ಗೊನ್ ಪ್ರದೇಶದಲ್ಲಿ ಭಾನುವಾರದ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದಿರುವ ಹಿಂಸಾಚಾರ ಹಿನ್ನೆಲೆ ನಗರದಲ್ಲಿ ನಿಷೇಧಾಜ್ಞೆ ಅನ್ನು ಜಾರಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖರ್ಗೊನ್ ನಗರದಲ್ಲಿ ನಡೆದಿರುವ ಹಿಂಸಾಚಾರದ ಹಿನ್ನೆಲೆ ನಗರದಲ್ಲಿ ಹೆಚ್ಚು ಜನರು ಸೇರುವುದುನ್ನು ನಿರ್ಬಂಧಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಗರಾದ್ಯಂತ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಿಂದೂ ದೇವರು ರಾಮನ ಜನ್ಮದಿನದ ಹಿನ್ನೆಲೆಯಲ್ಲಿ ರಾಮ ನವಮಿ ಆಚರಣೆಯ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದಿದೆ.
ಗುಜರಾತ್: ರಾಮನವಮಿ ಮೆರವಣಿಗೆ ವೇಳೆ ಕೋಮು ಘರ್ಷಣೆ: ಓರ್ವ ಸಾವು
"ತಾಲಾಬ್ ಚೌಕ್ ಪ್ರದೇಶದಿಂದ ರಾಮನವಮಿ ಮೆರವಣಿಗೆ ಪ್ರಾರಂಭವಾದಾಗ ಸಭೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಈ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು. ಈ ಮೆರವಣಿಗೆಯು ಖಾರ್ಗೋನ್ ನಗರವನ್ನು ಒಂದು ಸುತ್ತು ಸುತ್ತಬೇಕಾಗಿದ್ದು, ಹಿಂಸಾಚಾರದ ಹಿನ್ನೆಲೆ ಅದನ್ನು ಅರ್ಧಕ್ಕೆ ಕೈಬಿಡಲಾಯಿತು,'' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್ಎಸ್ ಮುಜಾಲ್ಡೆ ಹೇಳಿದ್ದಾರೆ.
ಧ್ವನಿವರ್ಧಕಗಳಲ್ಲಿ ಹಾಡು ಹಾಕುವುದಕ್ಕೆ ವಿರೋಧ:
ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮೆರವಣಿಗೆ ಸಂದರ್ಭದಲ್ಲಿ ಧ್ವನಿವರ್ಧಕಗಳಲ್ಲಿ ಹಾಡುಗಳನ್ನು ಹಾಕಿಕೊಂಡು ಹೋಗುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ವೇಳೆಯಲ್ಲೇ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಅದಲ್ಲದೇ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಅಶ್ರುವಾಯು ಸಿಡಿಸುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಇದರ ಬೆನ್ನಲ್ಲೇ ಜನರು ಮನೆಗಳಿಂದ ಹೊರಗೆ ಬಾರದಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಕಾಲಿಗೆ ಗಾಯ:
ಶ್ರೀ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಎಸ್ ಪಿ ಸಿದ್ಧಾರ್ಥ್ ಚೌಧರಿ ಕಾಲಿಗೆ ಕಲ್ಲಿನಿಂದ ಹೊಡೆದಿದ್ದು, ರಕ್ತಸ್ರಾವವಾಗಿ ಸ್ಟ್ರೆಚರ್ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ನಾಲ್ಕು ಮನೆಗೆ ಬೆಂಕಿ, ದೇವಸ್ಥಾನ ಧ್ವಂಸ:
ಮಧ್ಯಪ್ರದೇಶದ ಖರ್ಗೊನ್ ನಗರದಲ್ಲಿ ದುಷ್ಕರ್ಮಿಗಳು ನಾಲ್ಕು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ದೇವಸ್ಥಾನವೊಂದನ್ನು ಧ್ವಂಸಗೊಳಿಸಿರುವ ಘಟನೆಯು ವರದಿಯಾಗಿದೆ. ಇನ್ನು ನಗರದಲ್ಲಿ ಕಲ್ಲು ತೂರಾಟದ ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಖಾಕಿ ಪಡೆಯು ಫುಲ್ ಅಲರ್ಟ್ ಆಯಿತು. ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ.
ಹಿಂಸಾಚಾರದಲ್ಲಿ 5 ರಿಂದ 7 ಮಂದಿಗೆ ಗಾಯ:
Recommended Video
ಕೋಮು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿರುವ ಸೇಂಧ್ವಾ ಪಟ್ಟಣಕ್ಕೆ ತೆರಳುತ್ತಿದ್ದ ಆದಿವಾಸಿಗಳ ರಾಮ ನವಮಿ ಮೆರವಣಿಗೆಯನ್ನು ತಡೆದ ನಂತರ ಪಕ್ಕದ ಬರ್ವಾನಿ ಜಿಲ್ಲೆಯಲ್ಲಿಯೂ ಹಿಂಸಾಚಾರ ಮತ್ತು ಘರ್ಷಣೆಯ ಘಟನೆಗಳು ವರದಿಯಾಗಿವೆ. ಜೈ ಹಿಂದ್ ಚೌಕ್ ಮತ್ತು ಕ್ರಾಂತಿ ಚೌಕ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಎರಡು ಸಮುದಾಯಗಳ ನಡುವೆ ಮುಖಾಮುಖಿಯಾದ ಘಟನೆಗಳು ವರದಿಯಾಗಿದೆ. ಇನ್ನು, ಈ ವರೆಗಿನ ವರದಿಗಳ ಪ್ರಕಾರ ಹಿಂಸಾಚಾರದಲ್ಲಿ ಒಬ್ಬ ಇನ್ಸ್ ಪೆಕ್ಟರ್ ಸೇರಿದಂತೆ ಇಬ್ಬರು ಪೊಲೀಸರು ಸೇರಿ ಒಟ್ಟು 5 ರಿಂದ 7 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.