ಮಧ್ಯಪ್ರದೇಶದಲ್ಲಿ ಆಕ್ಸಿಜನ್ ಇಲ್ಲದೇ 6 ಕೊವಿಡ್ ರೋಗಿಗಳು ಸಾವು!
ಶಹ್ಡಾಲ್, ಏಪ್ರಿಲ್ 18: ಮಧ್ಯಪ್ರದೇಶದ ಶಹ್ಡಾಲ್ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಆಮ್ಲಜನಕದ ಸರಿಯಾದ ಪೂರೈಕೆ ಮತ್ತು ವ್ಯವಸ್ಥೆ ಇಲ್ಲದೇ ಭಾನುವಾರ ಆರು ಮಂದಿ ಕೊರೊನಾವೈರಸ್ ಸೋಂಕಿತರು ಪ್ರಾಣ ಬಿಟ್ಟಿದ್ದಾರೆ.
ಮೆಡಿಕಲ್ ಕಾಲೇಜು ಕೊವಿಡ್-19 ಕೇಂದ್ರದಲ್ಲಿ ಒಟ್ಟು 62 ಮಂದಿ ಕೊರೊನಾವೈರಸ್ ಸೋಂಕಿತರನ್ನು ದಾಖಲಿಸಿಕೊಳ್ಳಲಾಗಿದೆ. ತುರ್ತು ನಿಗಾ ಘಟಕದಲ್ಲಿ ದಾಖಲಾದ 6 ಮಂದಿ ಸೋಂಕಿತರಿಗೆ ಸರಿಯಾದ ಆಕ್ಸಿಜನ್ ವ್ಯವಸ್ಥೆಯಿಲ್ಲದೇ ಮೃತಪಟ್ಟಿದ್ದಾರೆ. ಉಳಿದಂತೆ ಗಂಭೀರ ಸ್ಥಿತಿಯಲ್ಲಿರುವ ಇತರೆ ರೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ಡೀನ್ ಡಾ.ಮಿಲಿಂದ್ ಶಿರಾಲ್ಕರ್ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ 3 ಬಾರಿ ಆಮ್ಲಜನಕ ಪೂರೈಕೆಗೆ ಸರ್ಕಾರದಿಂದ ಆರ್ಡರ್
ಕಳೆದ ಶನಿವಾರದಿಂದಲೇ ಕೊವಿಡ್-19 ಕೇಂದ್ರದಲ್ಲಿ ಲಿಕ್ವಿಡ್ ಆಕ್ಸಿಜನ್ ಸರಬರಾಜು ನಿಂತು ಹೋಗಿದೆ. ಕೊರೊನಾವೈರಸ್ ಕೇಂದ್ರಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆ ಎದ್ದು ಕಾಣುತ್ತಿದೆ ಎಂದು ಡಾ ಮಿಲಿಂದ್ ಶಿರಾಲ್ಕರ್ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಆಮ್ಲಜನಕ ಕೊರತೆ:
ಆಮ್ಲಜನಕ ಪೂರೈಸುವಂತೆ ಸರಬರಾಜುದಾರರನ್ನು ನಿರಂತರವಾಗಿ ಸಂಪರ್ಕಿಸಲಾಗುತ್ತಿದೆ. ಆದರೆ ಸರಬರಾಜು ವಾಹನಗಳು ತಡರಾತ್ರಿವರೆಗೂ ಬಾರದ ಹಿನ್ನೆಲೆ ಕೊರೊನಾವೈರಸ್ ರೋಗಿಗಳಿಗೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಆಕ್ಸಿಜನ್ ಘಟಕದಲ್ಲಿ ಪ್ರತಿನಿತ್ಯ 10 ಸಾವಿರ ಆಮ್ಲಜನಕ ಸಂಗ್ರಹಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಲಿಕ್ವಿಡ್ ಆಕ್ಸಿಜನ್ ಅನ್ನು ಬೇರೆ ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಮಧ್ಯಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಕಾಂಗ್ರೆಸ್:
ಶಾಹ್ಡಾಲ್ ನಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿರುವ ಸುದ್ಧಿ ತುಂಬಾ ದುಃಖಕರವಾಗಿದೆ. ಭೋಪಾಲ್, ಇಂದೋರ್, ಉಜ್ಜೈನಿ, ಸಾಗರ್, ಜಬಲ್ಪುರ್, ಖಂದ್ವಾ, ಖರಗೊನ್, ಪ್ರದೇಶದಲ್ಲಿ ಆಮ್ಲಜನಕ ಕೊರತೆ ಎದುರಾದ ಸಂದರ್ಭದಲ್ಲೇ ಸರ್ಕಾರವು ಏಕೆ ಎಚ್ಚೆತ್ತುಕೊಳ್ಳಲಿಲ್ಲ. ಇದೆಲ್ಲ ಆದ ಬಳಿಕವೂ ರಾಜ್ಯದಲ್ಲಿ ಆಕ್ಸಿಜನ್ ಅಭಾವದಿಂದ ಇನ್ನೂ ಎಷ್ಟು ಮಂದಿ ಪ್ರಾಣ ಬಿಡಬೇಕು. ಈ ಪರಿಸ್ಥಿತಿಯು ಮತ್ತಷ್ಟು ಭಯವನ್ನು ಹುಟ್ಟುಹಾಕುತ್ತಿದೆ. ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್ಡಿಸಿವಿರ್ ಔಷಧಿಯೂ ಖಾಲಿ ಆಗುತ್ತಿದೆ. ಇದೆಲ್ಲದ ಮಧ್ಯೆ ಔಷಧಿಗಳು ಮತ್ತು ಆಕ್ಸಿಜನ್ ಕೇವಲ ಪತ್ರಗಳಲ್ಲಿವೆಯೇ ಹೊರತೂ ವಾಸ್ತವದಲ್ಲಿಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಪ್ರಶ್ನೆ ಮಾಡಿದ್ದಾರೆ.