ಕೋವಿಡ್ ಸಾವುಗಳನ್ನು ಮರೆಮಾಚುತ್ತಿದೆಯೇ ಸರ್ಕಾರ?: ಹೆಣದ ರಾಶಿ ಹೇಳುವ ಕಥೆಯೇ ಬೇರೆ
ಭೋಪಾಲ್, ಏಪ್ರಿಲ್ 14: ಮಧ್ಯಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತರು ಹಾಗೂ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡುತ್ತಿರುವ ದೈನಂದಿನ ವರದಿಯಲ್ಲಿನ ಅಂಕಿಅಂಶಗಳು ಚರ್ಚೆ ಹುಟ್ಟುಹಾಕಿದೆ. ಕಳೆದ ಕೆಲವು ದಿನಗಳಿಂದ ಸರ್ಕಾರ ದಾಖಲೆಗಳಿಗಿಂತಲೂ ಹೆಚ್ಚಿನ ಮೃತದೇಹಗಳನ್ನು ರಾಜಧಾನಿ ಭೋಪಾಲ್ನಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.
ಕೆಲವು ವಾರಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ಕೋವಿಡ್ನಿಂದ ಮೃತಪಟ್ಟ 5-10 ಮೃತದೇಹಗಳನ್ನು ಚಿತಾಗಾರಗಳಿಗೆ ತರಲಾಗುತ್ತಿತ್ತು. ಆದರೆ ಇಂದು ಪ್ರತಿದಿನ 35-40 ಮೃತದೇಹಗಳನ್ನು ತರಲಾಗುತ್ತಿದೆ. ಭೋಪಾಲ್ನಲ್ಲಿ ಅಧಿಕೃತವಾಗಿ ನೀಡಲಾಗುತ್ತಿರುವ ಅಂಕಿಸಂಖ್ಯೆಗಳಿಗಿಂತಲೂ ಅಧಿಕ ಮೃತದೇಹಗಳನ್ನು ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.
"ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ"
ಕಳೆದ ತಿಂಗಳಿನಿಂದ ಮಧ್ಯಪ್ರದೇಶದಲ್ಲಿ ಎರಡನೆಯ ಅಲೆಯ ತೀವ್ರತೆಯಿಂದಾಗಿ ಕೋವಿಡ್ ಸೋಂಕಿತರ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಹಾಗೆಯೇ ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ. ಆದರೆ ಈ ಸಾವುಗಳಲ್ಲಿ ಹೆಚ್ಚಿನವುಗಳನ್ನು 'ಶಂಕಿತ ಕೋವಿಡ್ ಸಾವುಗಳು' ಎಂದು ಸರ್ಕಾರ ಉಲ್ಲೇಖಿಸುತ್ತಿದೆ. ವಾಸ್ತವ ಸಂಖ್ಯೆಗಳನ್ನು ಮರೆಮಾಚಲು ಸರ್ಕಾರ ಈ ತಂತ್ರ ಅನುಸರಿಸುತ್ತಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ.
ಸರ್ಕಾರದ ಲೆಕ್ಕವೇ ಬೇರೆ
ಭೋಪಾಲ್ನ ಭಾದ್ಭಡಾ ಚಿತಾಗಾರ ಮತ್ತು ಸುಭಾಷ್ನಗರ ಘಾಟ್ನಲ್ಲಿ ಗುರುವಾರದಿಂದ ಭಾನುವಾರದ ಒಳಗೆ ಒಟ್ಟು 187 ಮೃತದೇಹಗಳನ್ನು ಕೋವಿಡ್ ನಿಯಮಗಳಿಗೆ ಅನುಗುಣವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಆದರೆ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಐದು ಮಾತ್ರ.
ಅನಿಲ ದುರಂತದ ಕರಾಳ ನೆನಪು
ಭೋಪಾಲ್ನಲ್ಲಿ ಇಷ್ಟು ಪ್ರಮಾಣದಲ್ಲಿ ಮೃತದೇಹಗಳ ಅಂತ್ಯಕ್ರಿಯೆ ನಡೆದಿದ್ದು 1984ರಲ್ಲಿ ನಡೆದ ಭೀಕರ ಅನಿಲ ದುರಂತದ ಸಂದರ್ಭದಲ್ಲಿ ಎಂದು ಜನರು ನೆನೆಸಿಕೊಂಡಿದ್ದಾರೆ. ಚಿತಾಗಾರಗಳ ಮುಂದೆ ಅಂತ್ಯಸಂಸ್ಕಾರ ನಡೆಸಲು ಮೃತದೇಹಗಳನ್ನು ಹೊತ್ತ ಆಂಬುಲೆನ್ಸ್ಗಳು ಸರದಿಯಲ್ಲಿ ನಿಂತಿರುವುದು ಸಾಮಾನ್ಯ ದೃಶ್ಯವಾಗಿದೆ. ಹೀಗಾಗಿ ಜನರು ಅಂತ್ಯಸಂಸ್ಕಾರ ನಡೆಸಲು ಮೂರು ನಾಲ್ಕು ಗಂಟೆ ಕಾಯುವಂತಾಗಿದೆ.
|
ಜಾಗವಿಲ್ಲದೆ ಅಲೆದಾಟ
ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲೆಂದೇ ಪ್ರತ್ಯೇಕ ಜಾಗಗಳನ್ನು ಮೀಸಲಿಡಲಾಗಿದೆ. ಆದರೆ ಅವುಗಳಲ್ಲಿ ಜಾಗವಿಲ್ಲದ ಕಾರಣ ಸಿಕ್ಕಜಾಗದಲ್ಲಿಯೇ ಮೃತದೇಹಗಳನ್ನು ಸುಡಲಾಗುತ್ತಿದೆ. ಕೆಲವೊಮ್ಮೆ ಜಾಗ ಸಿಗದೆ ಒಂದು ಚಿತಾಗಾರದಿಂದ ಮತ್ತೊಂದು ಚಿತಾಗಾರಕ್ಕೆ ಅಲೆಯುವಂತಾಗಿದೆ.
ಮರೆಮಾಚುವ ಉದ್ದೇಶವಿಲ್ಲ
'ಸಾವಿನ ಸಂಖ್ಯೆಯನ್ನು ಮೆರಮಾಚುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಹಾಗೆ ಮಾಡುವುದರಿಂದ ನಮಗೆ ಯಾವ ಬಹುಮಾನವೂ ಸಿಗುವುದಿಲ್ಲ' ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ ಹೇಳಿದ್ದಾರೆ. ಏ. 12ರಂದು ನಗರದಲ್ಲಿ 59 ಮತದೇಹಗಳನ್ನು ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ಅಧಿಕೃತ ಹೇಳಿಕೆ ಪ್ರಕಾರ ಅಂದು ಮೃತಪಟ್ಟವರ ಸಂಖ್ಯೆ 37. ಏಪ್ರಿಲ್ 11ರಂದು 68 ಮೃತದೇಹಗಳ ಅಂತ್ಯಸಂಸ್ಕಾರ ನಡೆದಿದೆ. ಆದರೆ ಸರ್ಕಾರದ ಲೆಕ್ಕದ ಪ್ರಕಾರ 24 ಮಂದಿ ಅಂದು ಮೃತಪಟ್ಟಿದ್ದರು.