ಶಾಲಾ ಶುಲ್ಕ ಪ್ರಶ್ನಿಸಿದ ಪೋಷಕರಿಗೆ "ಹೋಗಿ ಸಾಯಿರಿ" ಎಂದ ಸಚಿವ
ಭೋಪಾಲ್, ಜುಲೈ 01: ಲಾಕ್ಡೌನ್ನಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಈ ಸಂದರ್ಭದಲ್ಲೂ ಖಾಸಗಿ ಶಾಲೆಗಳು ಪೋಷಕರಿಗೆ ಹೆಚ್ಚು ಶುಲ್ಕ ಕಟ್ಟಲು ಒತ್ತಾಯಿಸುತ್ತಿವೆ ಎಂದು ದೂರಲು ಬಂದ ಪೋಷಕರಿಗೆ, "ಹೋಗಿ ಸಾಯಿರಿ" ಎಂದು ಸಚಿವರೊಬ್ಬರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದಲ್ಲಿ ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ತಂದಿದ್ದು, ಇದನ್ನು ವಿರೋಧಿಸಿ 80-100 ಮಂದಿ ಪೋಷಕರು ಭೋಪಾಲ್ನಲ್ಲಿ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್ ನಿವಾಸಕ್ಕೆ ಹೋಗಿ ತಮ್ಮ ಸಂಕಟ ಹೇಳಿಕೊಂಡಿದ್ದಾರೆ.
ಖಾಸಗಿ ಶಾಲೆಗಳ ಶುಲ್ಕ ವಿವಾದ: ಜುಲೈ 22ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಹೆಚ್ಚು ಶುಲ್ಕ ವಿಧಿಸಬಾರದೆಂಬ ಹೈಕೋರ್ಟ್ ಆದೇಶವನ್ನೂ ಮೀರಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ. ನಾವು ಮುಂದೆ ಏನು ಮಾಡಬೇಕು? ಶಾಲೆಗಳು ಹೀಗೆ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ನಾವು ಬದುಕಬೇಕಾ, ಸಾಯಬೇಕಾ? ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಂದ ಕೋಪಗೊಂಡ ಸಚಿವ "ಹೋಗಿ ಸಾಯಿರಿ, ಏನಾದರೂ ಮಾಡಿಕೊಳ್ಳಿ" ಎಂದಿದ್ದಾರೆ.
"ಹೋಗಿ ಸಾಯಿರಿ" ಎಂದು ಅವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಷಕರ ಮಾತನ್ನೂ ಕೇಳಿಸಿಕೊಳ್ಳದೇ ಸಚಿವ ಕಾರು ಏರಿ ಹೊರಟಿದ್ದು, ಅವರ ನಡೆಗೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಿಕ್ಷಣ ಸಚಿವರಾದವರು ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ, ಈ ರೀತಿ ಉಡಾಫೆಯಾಗಿ ಮಾತನಾಡಿದ್ದು ಸರಿಯಲ್ಲ ಎಂದು ಪೋಷಕರು ಅವರ ಮನೆ ಮುಂದೆಯೇ ಧರಣಿ ಕುಳಿತಿದ್ದಾರೆ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.