ಒಂದೇ ಸಿರಿಂಜ್ನಿಂದ 39 ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಿದ್ದಕ್ಕೆ ಖಾಕಿ ಕೋಳ!
ಭೋಪಾಲ್, ಜುಲೈ 29: ಮಧ್ಯಪ್ರದೇಶದ ಸಾಗರ್ ನಗರದ ಖಾಸಗಿ ಶಾಲೆಯೊಂದರಲ್ಲಿ ಒಂದೇ ಸಿರಿಂಜ್ ಬಳಸಿ 39 ವಿದ್ಯಾರ್ಥಿಗಳಿಗೆ ಕೋವಿಡ್-19 ನಿಯಂತ್ರಣದ ಲಸಿಕೆ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಒಂದು ಸಿರಿಂಜ್ ಬಳಸಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಜೈನ್ ಪ್ರೌಢ ಶಾಲೆಯಲ್ಲಿ ಮೆಗಾ ಲಸಿಕೆ ಅಭಿಯಾನದ ವೇಳೆ ಬುಧವಾರ ಈ ಘಟನೆ ನಡೆದಿದ್ದು, ಜಿತೇಂದ್ರ ಅಹಿರ್ವಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿ ಹೇಳಿದ್ದಾರೆ.
ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಅಹಿರ್ವಾರ್, ಆರೋಗ್ಯ ಇಲಾಖೆಯಿಂದ ಲಸಿಕೆ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆದುಕೊಂಡಿದ್ದರು ಎಂದು ಸಾಗರ್ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಡಾ ಡಿ ಕೆ ಗೋಸ್ವಾಮಿ ತಿಳಿಸಿದ್ದಾರೆ.
ಹೆಚ್ಓಡಿ ವಿರುದ್ಧ ಲಸಿಕೆ ವಿತರಕನ ಆರೋಪವೇನು?
ತಮ್ಮ ವಿಭಾಗದ ಮುಖ್ಯಸ್ಥರೇ ತಮ್ಮನ್ನು ಕಾರಿನಲ್ಲಿ ಶಾಲೆಗೆ ಕರೆ ತಂದಿದ್ದರು ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಅಲ್ಲದೇ ತನಗೆ ಒದಗಿಸಿದ ಒಂದು ಸಿಲಿಂಜ್ ಬಳಸಿಯೇ ಎಲ್ಲ 39 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವಂತೆ ಸಲಹೆ ನೀಡಿದ್ದರು ಎಂದು ಸಿಬ್ಬಂದಿ ದೂಷಿಸಿದ್ದಾರೆ. ಈ ಪ್ರಕರಣದಲ್ಲಿ ತಾನು ಯಾವುದೇ ರೀತಿ ತಪ್ಪು ಮಾಡಿಲ್ಲ ಎಂದು ಸಿಬ್ಬಂದಿ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತನಿಖೆ ನಡೆಸಿ ಮುಂದಿನ ಕ್ರಮ ಎಂದ ಸಿಎಂಎಚ್ಒ
ಒಂದು ಸಿರಿಂಜ್ ಬಳಸುವುದಕ್ಕೆ ತಮ್ಮ ವಿಭಾಗದ ಮುಖ್ಯಸ್ಥರೇ ಸಲಹೆ ನೀಡಿದ್ದರು ಎಂಬ ಲಸಿಕೆ ವಿತರಣೆ ಸಿಬ್ಬಂದಿ ಜಿತೇಂದ್ರ ಅಹಿರ್ವಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಸಾಗರ್ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಡಿ.ಕೆ. ಗೋಸ್ವಾಮಿ ನಿರಾಕರಿಸಿದ್ದಾರೆ. ಈ ಆರೋಪದ ಬಗ್ಗೆ ತನಿಖೆ ನಡೆಸದ ಹೊರತೂ ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಈ ಘಟನೆಗೆ ಕಾರಣರಾದ ಜಿಲ್ಲೆಯ ಕೋವಿಡ್-19 ಲಸಿಕೆ ವಿತರಣೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಸಿಕೆ ವಿತರಣೆ ನಂತರ ಪರಾರಿಯಾಗಿದ್ದ ಅಹಿರ್ವಾರ್
ಬುಧವಾರ ಸಾಗರ್ ನಗರದಲ್ಲಿ ಇರುವ ಜೈನ್ ಪ್ರೌಢ ಶಾಲೆಯಲ್ಲಿ 15 ವರ್ಷ ಮೇಲ್ಪಟ್ಟ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿತ್ತು. ಈ ವೇಳೆ 39 ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡಿದ್ದರು. ಆದರೆ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಒಂದೇ ಸಿರಿಂಜ್ ಬಳಸಿರುವ ಬಗ್ಗೆ ತಿಳಿಯುತ್ತಿದ್ದಂತೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಪೋಷಕರು ಪ್ರತಿಭಟನೆಗೆ ಇಳಿಯುತ್ತಿದ್ದಂತೆ ವೈದ್ಯಕೀಯ ಸಿಬ್ಬಂದಿ ಅಹಿರ್ವಾರ್ ಸ್ಥಳದಿಂದ ಪರಾರಿ ಆಗಿದ್ದರು. ನಂತರದಲ್ಲಿ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದರು ಎಂಬ ಬಗ್ಗೆ ಗೋಸ್ವಾಮಿ ಮಾಹಿತಿ ನೀಡಿದ್ದರು.
ಗುರುವಾರ ಲಸಿಕೆ ವಿತರಣಾ ಸಿಬ್ಬಂದಿ ಅಹಿರ್ವಾರ್ ಬಂಧನ
ವಿದ್ಯಾರ್ಥಿಗಳಿಗೆ ಒಂದು ಸಿರಿಂಜ್ ಬಳಸಿ ಲಸಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ಸಾಗರ್ ನಗರದಲ್ಲಿ ಆರೋಪಿ ಜೀತೇಂದ್ರ ಅಹಿರ್ವಾರ್ನನ್ನು ಪೊಲೀಸರು ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ ಎಂದು ಎಫ್ಐಆರ್ ದಾಖಲಿಸಿದ ಗೋಪಾಲ್ಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಕಮಲ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ವಿಭಾಗೀಯ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದು, ಡಾ.ರೋಷನ್ ಜಾಗಕ್ಕೆ ಮತ್ತೊಬ್ಬ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 336ರ ಪ್ರಕಾರ, ಮಾನವ ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯದ ಅಡಿಯಲ್ಲಿ ಅಹಿರ್ವಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಿಎಮ್ಎಚ್ಒ ಅವರ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ವಿಭಾಗೀಯ ಆಯುಕ್ತರಿಗೆ ಇಲಾಖಾ ತನಿಖೆ ಮತ್ತು ಜಿಲ್ಲಾ ಲಸಿಕಾ ಅಧಿಕಾರಿ ಡಾ.ರೋಷನ್ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಶ್ರೀ ಸಿಂಘಾಲ್ ಹೇಳಿದರು.
Recommended Video