'ಮೋದಿ ನನ್ನ ಅಪ್ಪನ ಹಾಗೆ; ಅವರು ನಮ್ಮ ಒಳ್ಳೇದಕ್ಕೇ ಹೇಳೋದು'
ನವದೆಹಲಿ, ಜುಲೈ 4: ಪಾಲಿಕೆ ಅಧಿಕಾರಿ ಮೇಲೆ ಬ್ಯಾಟ್ ಬೀಸಿದ್ದ ಮಗನ ವರ್ತನೆಯನ್ನು ಕಟುವಾಗಿ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಯನ್ನು ರಾಜಕೀಯ ಬದುಕಿನ ಕಲಿಕೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯ್ವರ್ಗಿಯಾ ವ್ಯಾಖ್ಯಾನಿಸಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಧ್ಯಪ್ರದೇಶದ ಹಿರಿಯ ಬಿಜೆಪಿ ಮುಖಂಡ ಕೈಲಾಶ್, ಈ ಮೂಲಕ ಮಗ ಎಸಗಿರುವ ಕೃತ್ಯವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಭ್ರಷ್ಟಾಚಾರ ನಿಲ್ಲಿಸದಿದ್ದರೆ ಧನ್ ಧನಾ ಧನ್! ಇದು ಬಿಜೆಪಿ ಎಂಎಲ್ಎ ಬ್ಯಾಟಿಂಗ್ ಸ್ಟೈಲ್
ಮೋದಿ ಅವರು ಬೈಯುವುದು ನಮ್ಮ ಒಳಿತಿಗಾಗಿಯೇ. ಅವರು ಬೈದಿದ್ದು ಆಕಾಶ್ನ ರಾಜಕೀಯ ಬದುಕಿನ ಕಲಿಕೆಗೆ ಮಹತ್ವದ್ದು ಎಂದು ಹೇಳಿದ್ದಾರೆ. ಈ ರೀತಿಯ ದುರಹಂಕಾರದ ವರ್ತನೆ ಸರಿಯಲ್ಲ. ಅಂತಹವರನ್ನು ಪಕ್ಷದಿಂದಲೇ ಹೊರಹಾಕಬೇಕಾಗುತ್ತದೆ ಎಂಬ ಪ್ರಧಾನಿ ಮೋದಿ ಅವರ ಖಂಡನೆ, ಮನೆಯಲ್ಲಿನ ಅಜ್ಜ ತನ್ನ ಮೊಮ್ಮಗನಿಗೆ ಹೇಳುವ ಕಿವಿಮಾತಿನಂತೆ. ಇದರಿಂದ ಮೊಮ್ಮಕ್ಕಳು ತಿದ್ದಿಕೊಂಡು ಹೋಗಲು ನೆರವಾಗುತ್ತದೆ ಎಂದು ಕೈಲಾಶ್ ಹೇಳಿದ್ದಾರೆ.
ಮೋದಿ ನನಗೆ ಅಪ್ಪನಂತೆ
'ನನಗೆ ಮೋದಿ ಅವರು ಅಪ್ಪನಿದ್ದಂತೆ. ಆಕಾಶ್ಗೆ ಅಜ್ಜನಂತೆ. ಮೋದಿ ಅವರ ಬೈಗುಳವು ಆಕಾಶ್ನ ರಾಜಕೀಯ ವೃತ್ತಿ ಬದುಕಿಗೆ ಬಹಳ ಮಹತ್ವದ್ದಾಗಿದೆ' ಎಂದು ಕೈಲಾಶ್ ಹೇಳಿದ್ದಾರೆ. ಕೈಲಾಶ್ ಅವರು ಈ ಘಟನೆಯ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಯನ್ನು ನಿರಾಕರಿಸಿದ್ದಾರೆ.
ಆಕಾಶ್ ಕೃತ್ಯ ಖಂಡಿಸಿದ್ದ ಮೋದಿ
ಜನಪ್ರತಿನಿಧಿಗಳು ದುರಹಂಕಾರದಿಂದ ವರ್ತಿಸುವುದನ್ನು ಬಿಡಬೇಕು. ಈ ರೀತಿ ನಡೆದುಕೊಳ್ಳುವ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡು ಹೊರಬಂದಾಗ ಅವರನ್ನು ಸ್ವಾಗತಿಸಿದವರನ್ನು ಕೂಡ ಪಕ್ಷದಿಂದ ಹೊರಹಾಕಬೇಕು. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು. ಅಂತಹ ವರ್ತನೆಯನ್ನು ಬೆಂಬಲಿಸುವವರನ್ನೂ ಪ್ರಶ್ನಿಸಬೇಕಿದೆ. ಯಾರಾದರೂ ತಪ್ಪು ಮಾಡಿದರೆ ಅದಕ್ಕೆ ತಕ್ಕ ಪಶ್ಚಾತ್ತಾಪದ ಮನೋಭಾವವೂ ಇರಬೇಕು ಎಂದು ಪ್ರಧಾನಿ ಮೋದಿ ಅವರು ಆಕಾಶ್ ವಿಜಯ್ವರ್ಗಿಯಾ ವಿರುದ್ಧ ಹರಿಹಾಯ್ದಿದ್ದರು.
ಯಾರ ಮಗನಾದರೂ ಇದು ಒಪ್ಪುವಂಥದ್ದಲ್ಲ: ಪ್ರಧಾನಿ ಮೋದಿ ಸಿಡಿಮಿಡಿ
'ಮೊದಲು ಮನವಿ, ಆಮೇಲೆ ಬಾರಿಸೋದು...'
ಮಹಾರಾಷ್ಟ್ರದ ಪಾಲಿಕೆ ಅಧಿಕಾರಿಯನ್ನು ಪೊಲೀಸರು ಮತ್ತು ಜನರ ಸಮ್ಮುಖದಲ್ಲಿಯೇ ಕ್ರಿಕೆಟ್ ಬ್ಯಾಟ್ನಿಂದ ಥಳಿಸಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಶಾಸಕ ಅಕಾಶ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. 'ಮೊದಲು ಮನವಿ, ಬಳಿಕ ದಾಳಿ' ಎಂಬುದನ್ನು ಪಕ್ಷ ಹೇಳಿಕೊಟ್ಟಿದೆ. ಇದು ಆರಂಭ ಮಾತ್ರ. ನಾವು ಭ್ರಷ್ಟಾಚಾರ ಮತ್ತು ಗೂಂಡಾಗಿರಿಗೆ ಅಂತ್ಯ ಹಾಡಲಿದ್ದೇವೆ ಎಂದು ಹೇಳಿದ್ದರು.
ಬ್ಯಾಟ್ನಿಂದ ಬಾರಿಸಿದ್ದ ಶಾಸಕನ ಕೃತ್ಯ ಸಮರ್ಥಿಸಿಕೊಂಡ ತಂದೆ
'ಮಗ ಮಾಡಿದ್ದು ತಪ್ಪೇನಿಲ್ಲ'
ಆಕಾಶ್ ಅವರ ತಂದೆ, ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯ್ವರ್ಗಿಯಾ ಅವರೂ ಮಗನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಇದು ಅಷ್ಟೇನೂ ದೊಡ್ಡ ಸಂಗತಿಯೇನಲ್ಲ. ಅದರ ಉದ್ದೇಶ ಒಳ್ಳೆಯದಾಗಿತ್ತು. ಆದರೆ, ಅದು ಬೇರೆ ಅರ್ಥವನ್ನು ಪಡೆದುಕೊಂಡಿತು ಎಂದು ಹೇಳಿದ್ದರು. ಆಕಾಶ್ ಅವರು ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದಾಗ ಅವರಿಗೆ ಭವ್ಯ ಸ್ವಾಗತ ದೊರಕಿತ್ತು. ಇದನ್ನು ಕೂಡ ಮೋದಿ ಖಂಡಿಸಿದ್ದರು. ಕೈಲಾಶ್ ಅವರೂ ಮಗನಂತೆಯೇ 1994ರಲ್ಲಿ ಎಸಿಪಿಯೊಬ್ಬರಿಗೆ ಶೂನಿಂದ ಹೊಡೆದ ಆರೋಪ ಎದುರಿಸಿದ್ದರು.